ADVERTISEMENT

ಮಾಜಿ ಸಚಿವ ಯು.ಟಿ. ಖಾದರ್‌ ಕಾರು ಮತ್ತು ಕಂಟೇನರ್ ಲಾರಿ ಅಪಘಾತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 3:34 IST
Last Updated 15 ಏಪ್ರಿಲ್ 2021, 3:34 IST
ಮಾಜಿ ಸಚಿವ ಯು.ಟಿ. ಖಾದರ್‌ ಕಾರು
ಮಾಜಿ ಸಚಿವ ಯು.ಟಿ. ಖಾದರ್‌ ಕಾರು   

ದಾವಣಗೆರೆ: ಬೆಂಗಳೂರಿನಿಂದ ಬೆಳಗಾವಿ ತೆರಳುತ್ತಿದ್ದ ಮಂಗಳೂರಿನ ಶಾಸಕ ಯು.ಟಿ. ಖಾದರ್‌ ಅವರಿದ್ದ ಕಾರು ತಾಲ್ಲೂಕಿನ ಆನಗೋಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿದೆ. ಕಾರಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲು ಖಾದರ್‌ ತೆರಳುತ್ತಿದ್ದರು. ಆಪ್ತ ಕಾರ್ಯದರ್ಶಿ ಲಿಫ್‌ಜತ್‌ ಕಾರು ಚಲಾಯಿಸುತ್ತಿದ್ದರು. ಆನಗೋಡು ಬಳಿ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಮುಂದೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಯು.ಟಿ. ಖಾದರ್‌, ಲಿಫ್‌ಜತ್‌ ಮತ್ತು ಮಂಜನಾಡಿ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗ ಜಖಂಗೊಂಡಿದೆ. ಯಾವುದೇ ಅಪಾಯ ಆಗದಿರುವುದರಿಂದ ಪ್ರಕರಣ ದಾಖಲಿಸದೇ ಲಾರಿಯನ್ನು ಮುಂದೆ ಹೋಗಲು ಬಿಡಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಬ್ದುಲ್‌ ಜಬ್ಬಾರ್‌ ಕಳುಹಿಸಿಕೊಟ್ಟ ಇನ್ನೊಂದು ಕಾರಿನಲ್ಲಿ ಖಾದರ್‌ ಬೆಂಗಳೂರಿಗೆ ವಾಪಸ್ಸಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.