ADVERTISEMENT

ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠಕ್ಕೆ ತೀರ್ಮಾನ: ಬಿ.ಎಚ್. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 12:42 IST
Last Updated 20 ಫೆಬ್ರುವರಿ 2026, 12:42 IST
<div class="paragraphs"><p>ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ನಡೆದ&nbsp;ಸಭೆಯಲ್ಲಿ&nbsp;ಬಿ.ಎಚ್. ವೀರಭದ್ರಪ್ಪ ಮಾತನಾಡಿದರು</p></div>

ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿ.ಎಚ್. ವೀರಭದ್ರಪ್ಪ ಮಾತನಾಡಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಗುರುಪೀಠ ಸ್ಥಾಪಿಸುವ ಕುರಿತಾಗಿ ಉಂಟಾಗಿದ್ದ ಗೊಂದಲಗಳು ಬಗೆಹರಿದಿವೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠವನ್ನು ಸ್ಥಾಪಿಸಲು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಮ್ಮತಿ ಸೂಚಿಸಿದ್ದಾರೆ ಎಂದು ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ತಿಳಿಸಿದರು.

ADVERTISEMENT

‘ಮಾದಾರ ಚನ್ನಯ್ಯ ಗುರುಪೀಠದ ಮೂಲಪರಂಪರೆ ಹಾಗೂ ನಿಯಮಗಳಿಗೆ ಧಕ್ಕೆಯಾಗದಂತೆ ಶಾಖಾ ಮಠ ಸ್ಥಾಪಿಸಲು ಹಸಿರು ನಿಶಾನೆ ಸಿಕ್ಕಿದೆ. ಹರಿಹರದ ತುಂಗಭದ್ರಾ ನದಿ ತಟದಲ್ಲಿ ಅಥವಾ ದಾವಣಗೆರೆಯ ಆಸುಪಾಸಿನಲ್ಲಿ ವಿಶಾಲವಾದ ಜಮೀನು ಗುರುತಿಸಿ, ಸ್ಥಳೀಯ ಸಚಿವರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಸೌಹಾರ್ದಯುತವಾಗಿ ಮಠ ನಿರ್ಮಿಸಲು ಸ್ವಾಮೀಜಿ ಸಲಹೆ ನೀಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಾದಿಗ ಮಹಾಸಂಸ್ಥಾನ ಗುರುಪೀಠ ಸ್ಥಾಪಿಸಲು ಜಿಲ್ಲಾ ಮಾದಿಗ ಮಹಾಸಭಾ ನಿರ್ಣಯಿಸಿತ್ತು. ಈ ಕುರಿತು ಗೊಂದಲ ಸೃಷ್ಟಿಯಾದ ಬಳಿಕ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಸಲಹೆ ಕೇಳಲಾಗಿತ್ತು. ಆದಿಜಾಂಬವ ಮಠ ಹಾಗೂ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠ ಇರುವಾಗ ಪ್ರತ್ಯೇಕ ಮಠದ ಗೊಂದಲ ಬೇಡ ಎಂಬ ಸಲಹೆಯನ್ನು ಪಂಡಿತಾರಾಧ್ಯ ಸ್ವಾಮೀಜಿ ನೀಡಿದರು. ಅದರಂತೆ ನಡೆದುಕೊಂಡಿದ್ದೇವೆ’ ಎಂದರು.

‘ವಿಸ್ತೃತವಾದ ಚರ್ಚೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಮುಂದುವರಿಯಲಾಗುವುದು. ಹರಿಹರ, ಕೊಂಡಜ್ಜಿ ಸೇರಿ ಅನೇಕ ಕಡೆ ಮಠ ಸ್ಥಾಪಿಸಲು ಸಲಹೆಗಳು ಬಂದಿವೆ. ಮಾದಿಗ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಶಾಖಾಮಠ ಸ್ಥಾಪನೆ ಮಾಡಲಾಗುತ್ತಿದೆ. ಕೋಡಿಹಳ್ಳಿಯ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಅವರನ್ನು ವಿಶ್ವಾಸಕ್ಕೆ ಪಡೆದು ಮುಂದುವರಿಯುತ್ತೇವೆ’ ಎಂದು ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ತಿಳಿಸಿದರು.

ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಖಜಾಂಚಿ ಎಸ್. ಮಲ್ಲಿಕಾರ್ಜುನ, ಎಚ್. ಮಲ್ಲೇಶ್, ಸಿ. ಬಸವರಾಜ, ಬೇವಿನಹಳ್ಳಿ ಶಿವರಾಂ, ದೇವೇಂದ್ರಪ್ಪ, ಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.