ADVERTISEMENT

ಹಾಲು ಅಮೃತಕ್ಕೆ ಸಮ, ಅದನ್ನು ಚೆಲ್ಲಿ ವ್ಯರ್ಥ ಮಾಡಬೇಡಿ: ಬಸವಪ್ರಭು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 8:51 IST
Last Updated 13 ಆಗಸ್ಟ್ 2021, 8:51 IST
ದಾವಣಗೆರೆ: ವಿರಕ್ತ ಮಠದಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಪಂಚಮಿ ಆಚರಣೆ
ದಾವಣಗೆರೆ: ವಿರಕ್ತ ಮಠದಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಿಸಿ ಪಂಚಮಿ ಆಚರಣೆ   

ದಾವಣಗೆರೆ: ಇಲ್ಲಿನ ವಿರಕ್ತ ಮಠದಲ್ಲಿ ಶಾಲಾ ಮಕ್ಕಳು ಹಾಲು ಕುಡಿಯುವ ಮೂಲಕ ವಿಶೇಷವಾಗಿ ನಾಗರ ಪಂಚಮಿಯನ್ನು ಆಚರಿಸಲಾಯಿತು.

ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಕ್ಕಳಿಗೆ ಹಾಲು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸ್ವಾಮೀಜಿ, 'ನಾಡಿನಾದ್ಯಂತ ಮಹಿಳೆಯರು ಕಲ್ಲು ನಾಗರ ಹಾಗೂ ಹುತ್ತಕ್ಕೆ ಹಾಲನ್ನು ಎರೆಯುತ್ತಿದ್ದಾರೆ. ನನ್ನ ಪಾಲು ಅವರ ಪಾಲು ಎಂದು ಹೇಳಿ ಹಾಲನ್ನು ಸುರಿದು ಕೊನೆಗೆ ಮಣ್ಣುಪಾಲು ಮಾಡುತ್ತಿದ್ದಾರೆ. ಹಾಲು ಅಮೃತಕ್ಕೆ ಸಮನಾಗಿದ್ದು, ಸಂಜೀವಿನಿ ಇದ್ದಂತೆ ಅದನ್ನು ಚೆಲ್ಲಿ ವ್ಯರ್ಥ ಮಾಡಬೇಡಿ' ಎಂದು ಸಲಹೆ ನೀಡಿದರು.

ADVERTISEMENT

‘ಕಲ್ಲಿನ ಮೂರ್ತಿಗೆ ಹಾಲೆರೆಯುವ ಜನರು ನಿಜವಾಗಿ ನಾಗರಹಾವು ಪ್ರತ್ಯಕ್ಷವಾದರೆ ಕೊಲ್ಲುತ್ತಾರೆ. ಭಕ್ಷ್ಯ ಭೋಜನವನ್ನು ತಯಾರಿಸಿ ದೇವರಿಗೆ ಇಡುತ್ತಾರೆ. ಆದರೆ ದೇವರು ಪ್ರತ್ಯಕ್ಷನಾಗುವುದಿಲ್ಲ. ಆದರೆ ಹಸಿದವರು ಯಾರಾದರೂ ಅನ್ನ ಕೇಳಿದರೆ ಅವರನ್ನು ಮುಂದಕ್ಕೆ ಕಳುಹಿಸುತ್ತಾರೆ.ಮಕ್ಕಳು ಹಾಗೂ, ಮನುಷ್ಯರ ಹೃದಯದಲ್ಲಿ ದೇವರು ಅಡಗಿ ಕುಳಿತಿದ್ದಾನೆ’ ಎಂದರು.

‘ದೇವರು, ಧರ್ಮದ ಹೆಸರಿನಲ್ಲಿ ಹಾಲು, ಜೇನು, ಅನ್ನ, ಭಕ್ಷ್ಯ ಭೋಜನ, ರೇಷ್ಮೆ ವಸ್ತ್ರಗಳನ್ನು ಹೋಮ ಹವನಗಳಿಗೆ ಅರ್ಪಿಸುತ್ತಾರೆ.. ಆದರೆ ರಾಜ್ಯದ ಉತ್ತರ ಕರ್ನಾಟಕದ ಭಾಗದಲ್ಲಿ ಹಾಲು ಇಲ್ಲದೇ ಅಪೌಷ್ಟಿಕದಿಂದ ಬಳಲುವವರಿಗೆ ನೀಡಬೇಕು’ ಎಂದು ಸಲಹೆ ನೀಡಿದರು.

ಮುರುಘರಾಜೇಂದ್ರ ವಿದ್ಯಾವರ್ಧಕ ಫಂಡ್ ಸಂಘದ ಕಾರ್ಯದರ್ಶಿ ಎಂ.ಜಯಕುಮಾರ್, ಸಹ ಕಾರ್ಯದರ್ಶಿ ಓಂಕಾರಪ್ಪ, ಹಾಸಭಾವಿ ಕರಿಬಸಪ್ಪ, ಮುರುಗೇಂದ್ರಪ್ಪ, ಮಹದೇವಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.