ADVERTISEMENT

ಈರುಳ್ಳಿಗೆ ಸುರುಳಿ ರೋಗ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 7:49 IST
Last Updated 6 ಸೆಪ್ಟೆಂಬರ್ 2021, 7:49 IST
ನ್ಯಾಮತಿ ಸುತ್ತಮುತ್ತಲ ಗ್ರಾಮಗಳ ರೈತರು ಬೆಳೆದಿರುವ ಈರುಳ್ಳಿ ಫಸಲಿಗೆ ಮಜ್ಜಿಗೆ ರೋಗ ಮತ್ತು ಸುರುಳಿ ರೋಗ ಬಂದಿರುವುದನ್ನು ರೈತರು ತೋರಿಸಿದರು. 
ನ್ಯಾಮತಿ ಸುತ್ತಮುತ್ತಲ ಗ್ರಾಮಗಳ ರೈತರು ಬೆಳೆದಿರುವ ಈರುಳ್ಳಿ ಫಸಲಿಗೆ ಮಜ್ಜಿಗೆ ರೋಗ ಮತ್ತು ಸುರುಳಿ ರೋಗ ಬಂದಿರುವುದನ್ನು ರೈತರು ತೋರಿಸಿದರು.    

ನ್ಯಾಮತಿ: ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಬೆಳೆದಿರುವ ಈರುಳ್ಳಿ ಫಸಲಿಗೆ ಮಜ್ಜಿಗೆ ರೋಗ ಮತ್ತು ಸುರುಳಿ ರೋಗ (ಕೊಳೆ ರೋಗ) ಕಂಡು ಬಂದಿದ್ದು, ಈರುಳ್ಳಿ ಬೆಳೆಗಾರರು ಆತಂಕಿತರಾಗಿದ್ದಾರೆ.

ನ್ಯಾಮತಿ, ಆರುಂಡಿ, ಕೆಂಚಿಕೊಪ್ಪ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಯರಗನಾಳ್ ಒಳಗೊಂಡಂತೆ ಕೆಲವು ಗ್ರಾಮಗಳಲ್ಲಿ ರೈತರು ನೂರಾರು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಿರುವ ಈರುಳ್ಳಿ ಫಸಲಿಗೆ ರೋಗ ತಗುಲಿದ್ದು, ಬೆಳೆ ಸಂಪೂರ್ಣವಾಗಿ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಬಿತ್ತನೆಗೆ ಭೂಮಿ ಸ್ವಚ್ಛತೆ, ಬೇಸಾಯ, ಬೀಜ, ಗೊಬ್ಬರ, ಔಷಧ ಸಿಂಪರಣೆ ಸೇರಿ ಒಂದು ಎಕರೆಗೆ ಅಂದಾಜು ₹ 55 ಸಾವಿರ ಖರ್ಚು ಮಾಡಲಾಗಿದೆ. ಉತ್ತಮ ಫಸಲು ಬಂದಿದ್ದರೆ ಲಾಭ ಬರುತ್ತಿತ್ತು. ಆದರೆ, ಈರುಳ್ಳಿಗೆ ರೋಗ ಬಂದಿರುವುದರಿಂದ ಖರ್ಚು ಮಾಡಿದ ಹಣವೂ ಬರದಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಬೆಳೆ ಸಮೀಕ್ಷೆ ಮಾಡಿ, ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಈರುಳ್ಳಿ ಬೆಳೆಗಾರ, ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ, ಗಂಜೀನಹಳ್ಳಿ ಹಾಲೇಶ, ಹಂಚಿನಮನೆ ಪ್ರದೀಪ, ಎಂ. ಮನು, ಎಚ್. ರುದ್ರೇಶ, ಕುಂಬಾರ ಲೋಕೇಶ, ತೀರ್ಥಪ್ಪ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.