ADVERTISEMENT

ಮಳೆಗೆ ಸಾವಿರಾರು ಹೆಕ್ಟೇರ್‌ ಬೆಳೆ ಹಾನಿ: ರೈತರಿಗೆ NDRF ‘ಮಾರ್ಗಸೂಚಿ’ ಕಂಟಕ

ರಾಮಮೂರ್ತಿ ಪಿ.
Published 22 ಮೇ 2025, 20:21 IST
Last Updated 22 ಮೇ 2025, 20:21 IST
<div class="paragraphs"><p>ದಾವಣಗೆರೆ ಜಿಲ್ಲೆಯ ಕಡರನಾಯ್ಕನಹಳ್ಳಿ ಸಮೀಪದ ಕಮಲಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಭತ್ತದ ಬೆಳೆ ಚಾಪೆ ಹಾಸಿರುವುದು&nbsp; </p></div>

ದಾವಣಗೆರೆ ಜಿಲ್ಲೆಯ ಕಡರನಾಯ್ಕನಹಳ್ಳಿ ಸಮೀಪದ ಕಮಲಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಭತ್ತದ ಬೆಳೆ ಚಾಪೆ ಹಾಸಿರುವುದು 

   

ಪ್ರಜಾವಾಣಿ ಚಿತ್ರ

ದಾವಣಗೆರೆ: ರಾಜ್ಯದಾದ್ಯಂತ ಏಪ್ರಿಲ್‌ನಿಂದಲೇ ಆರಂಭವಾಗಿರುವ ವರುಣನ ಆರ್ಭಟಕ್ಕೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಆದರೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕೊಡಿಸಲು ನೈಸರ್ಗಿಕ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಅಡ್ಡಿಯಾಗಿದೆ.

ADVERTISEMENT

ದಾವಣಗೆರೆ ಜಿಲ್ಲೆಯಲ್ಲೇ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಆದರೆ, ಸರ್ಕಾರದ ಸಮೀಕ್ಷೆಯಲ್ಲಿ, ‘55 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬೆಳೆ ನಷ್ಟವಾಗಿದೆ’ ಎಂದು ದಾಖಲಿಸಲಾಗಿದೆ.

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಬಿತ್ತನೆ ಮಾಡಲಾದ ಸಂಪೂರ್ಣ ಭೂಪ್ರದೇಶದಲ್ಲಿ ಶೇ 33ಕ್ಕಿಂತ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಗೀಡಾಗಿದ್ದರೆ ಮಾತ್ರ ಪರಿಹಾರ ವಿತರಣೆಗೆ ಅವಕಾಶ ಇದೆ. ಈ ನಿಯಮದಿಂದ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿಯಾದ ರೈತರಿಗೆ ಸರ್ಕಾರದಿಂದ ಪರಿಹಾರ ಪಡೆಯಲು ಅವಕಾಶವಿಲ್ಲ. ಇದರಿಂದಾಗಿ ಅನ್ನದಾತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ಅಡಿಕೆ, ಬಾಳೆ, ತೆಂಗು, ಮಾವು, ಪಪ್ಪಾಯ, ದಾಳಿಂಬೆ ಬೆಳೆಗಳ ಪೈಕಿ ಬಾಳೆ, ಅಡಿಕೆ ಹಾಗೂ ಪಪ್ಪಾಯ ಬೆಳೆಗೆ ಗಾಳಿ ಮತ್ತು ಮಳೆಯಿಂದ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಆಲಿಕಲ್ಲು ಮಳೆಯಿಂದ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಮೇಲ್ನೋಟಕ್ಕೆ ಹಾನಿಯು ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಂಡರೂ ದಿನಗಳು ಕಳೆದಂತೆ ಮಳೆಯ ಪ್ರಭಾವ ಸಂಪೂರ್ಣ ಫಸಲನ್ನೇ ಆಪೋಷನ ತೆಗೆದುಕೊಳ್ಳುತ್ತದೆ. ಆದರೆ, ಸಮೀಕ್ಷೆ ವೇಳೆ ಕಡಿಮೆ ಪ್ರಮಾಣದ ಹಾನಿ ಕಂಡುಬರುವುದರಿಂದ ಪರಿಹಾರ ನೀಡಲಾಗದು ಎಂಬುದು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

‘ಎನ್‌ಡಿಆರ್‌ಎಫ್‌ನ ಮಾರ್ಗಸೂಚಿಯೇ ಅವೈಜ್ಞಾನಿಕವಾಗಿದೆ. ಪ್ರಮಾಣ ಎಷ್ಟೇ ಆದರೂ ಹಾನಿ ಹಾನಿಯೇ. ಮಾನದಂಡವನ್ನು ಬದಲಿಸಿ ಕಡಿಮೆ ಪ್ರಮಾಣದಲ್ಲಿ ಬೆಳೆ ಹಾನಿಯಾದರೂ ಪರಿಹಾರ ವಿತರಿಸಬೇಕು’ ಎಂದು ರೈತ ಬಿ.ಎಂ.ಸತೀಶ್ ಆಗ್ರಹಿಸಿದ್ದಾರೆ.

‘ಜೋರು ಮಳೆಯಿಂದಾಗಿ ಕಟಾವಿನ ಹಂತಕ್ಕೆ ಬಂದಿರುವ ಭತ್ತದ ಬೆಳೆ ನೆಲಕಚ್ಚಿದೆ. ಜಿಲ್ಲೆಯಲ್ಲಿ ಅಂದಾಜು 15 ಸಾವಿರದಿಂದ 20 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಭತ್ತದ ಬೆಳೆ ಹಾನಿಗೀಡಾಗಿದೆ. ಕೃಷಿ ಇಲಾಖೆ ಸಿಬ್ಬಂದಿ ಸಮೀಕ್ಷೆ ಕೈಗೊಂಡಿಲ್ಲ. ನಷ್ಟದ ನಿಖರ ಅಂಕಿ–ಅಂಶ ದಾಖಲಿಸುತ್ತಿಲ್ಲ’ ಎಂದು ಅವರು ದೂರಿದರು.

‘8 ಎಕರೆಯಲ್ಲಿ ಬೆಳೆದ ಭತ್ತದ ಪೈಕಿ 1 ಎಕರೆಯಷ್ಟು ಬೆಳೆ ಮಳೆಯಿಂದ ಹಾನಿಗೀಡಾಗಿದೆ. ಆದರೆ, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಒಂದೆಡೆ ಭತ್ತದ ದರ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಹೀಗಿರುವಾಗ ಪರಿಹಾರವೂ ದೊರೆಯುವುದಿಲ್ಲ ಎಂದಾದರೆ ಮತ್ತಷ್ಟು ನಷ್ಟವಾಗಲಿದೆ’ ಎಂದು ದಾವಣಗೆರೆ ತಾಲ್ಲೂಕಿನ ಕೊಳೇನಹಳ್ಳಿ ಗ್ರಾಮದ ಹಾಲಸಿದ್ದಪ್ಪ, ನಾಗರಸನಹಳ್ಳಿಯ ವೆಂಕಟಸುಬ್ಬರಾವ್‌ ತಿಳಿಸಿದರು.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಸಮೀಪದ ರೈತರೊಬ್ಬರ ಜಮೀನಿನಲ್ಲಿ ಭತ್ತದ ಬೆಳೆ ಚಾಪೆ ಹಾಸಿರುವುದು

ಕನಿಷ್ಠ ಶೇ 33ರಷ್ಟು ಹಾನಿಯಾದರೆ ಮಾತ್ರ ಪರಿಹಾರ ನೀಡಬೇಕೆಂಬ ಮಾನದಂಡದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎನ್‌ಡಿಆರ್‌ಎಫ್‌ ಎಸ್‌ಡಿಆರ್‌ಎಫ್‌ ಮಾನದಂಡ ಬದಲಾವಣೆಗೆ ಸರ್ಕಾರದ ಗಮನ‌ಕ್ಕೆ ತಂದರೂ ಪ್ರಯೋಜನವಾಗಿಲ್ಲ.
– ತೇಜಸ್ವಿ ಪಟೇಲ್, ರೈತ ಮುಖಂಡ
ಭತ್ತ; ಕಟಾವಿನ ನಂತರವೂ ಸಮಸ್ಯೆ
ಮಳೆಯಿಂದಾಗಿ ಕಟಾವು ಮಾಡಿದ ಭತ್ತವನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಭತ್ತವು ತೇವಾಂಶ ಹೊಂದಿರುವ ಕಾರಣಕ್ಕೆ ಮಾರಾಟ ಮಾಡಲೂ ಆಗುತ್ತಿಲ್ಲ. ಬಿಸಿಲಿಗೆ ಒಣಗಿಸಲು ವರುಣ ಬಿಡುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಭತ್ತವನ್ನು ರಾಶಿ ಮಾಡಿ ಮೇಲೆ ತಾಡಪಲ್‌ ಹೊದಿಸುವುದು ರೈತರಿಗೆ ಅನಿವಾರ್ಯವಾಗಿದೆ. ಕೆಲವೆಡೆ ರಾಶಿ ಮಾಡಿದ ಭತ್ತವು ತೀವ್ರ ತೇವಾಂಶದಿಂದಾಗಿ ಮೊಳಕೆಯೊಡೆದು ಹಾಳಾಗುತ್ತಿದೆ. ಇದರಿಂದಲೂ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ. ಭತ್ತದ ಕಟಾವು ಮುಗಿಸಿರುವ ರೈತರು ಹಾಳಾಗುತ್ತಿರುವ ಮೇವನ್ನು ಉಳಿಸಿಕೊಳ್ಳುವ ಸವಾಲನ್ನೂ ಎದುರಿಸುತ್ತಿದ್ದಾರೆ. ಕಟಾವಿನ ನಂತರದ ಹಾನಿಯನ್ನೂ ಪರಿಹಾರಕ್ಕೆ ಪರಿಗಣಿಸಬೇಕು ಎಂಬುದೂ ರೈತರ ಕೋರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.