ADVERTISEMENT

ಅತೃಪ್ತರನ್ನು ಬಿಜೆಪಿ ಸಂಪರ್ಕಿಸಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 9:57 IST
Last Updated 26 ಡಿಸೆಂಬರ್ 2018, 9:57 IST
ಬಿಎಸ್‌ವೈ– ಪ್ರಜಾವಾಣಿ ಸಂಗ್ರಹ ಚಿತ್ರ
ಬಿಎಸ್‌ವೈ– ಪ್ರಜಾವಾಣಿ ಸಂಗ್ರಹ ಚಿತ್ರ   

ಹುಬ್ಬಳ್ಳಿ: ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರನ್ನು ಬಿಜೆಪಿ ಸಂಪರ್ಕಿಸಿಲ್ಲ. ಅವರ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ಸಚಿವ ಸ್ಥಾನ ಸಿಗಲಿಲ್ಲ, ಪ್ರಮುಖ ಸ್ಥಾನ ಸಿಗಲಿಲ್ಲ ಎಂದು ಅವರೇ ಬಡಿದಾಡಿಕೊಳ್ಳುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದು ನೋಡುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆಗೆ ಬಂದಿದ್ದೇನೆ. ಸತ್ಯವಾಗಿ, ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ರಮೇಶ್ ಜಾರಕಿಹೋಳಿ ಅವರನ್ನು ಭೇಟಿ ಮಾಡುವುದಿಲ್ಲ’ ಎಂದರು.

‘ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು, ತಪ್ಪಿತಸ್ಥರಿಗೆ ಶೌಟೌಟ್‌ ಮಾಡುವಂತೆ ಸೂಚನೆ ನೀಡಿದ್ದು ಸರಿಯಲ್ಲ. ಇದರಿಂದ ಗೂಂಡಾಗಿರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ನೋಟಿಸ್ ಬರುತ್ತಲೇ ಇವೆ

'ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಾಲ ಪಾವತಿಸುವಂತೆ ಬ್ಯಾಂಕುಗಳಿಂದರೈತರಿಗೆ ನೋಟಿಸ್‌ಗಳು ಬರುತ್ತಲೇ ಇವೆ. ಮುಖ್ಯಮಂತ್ರಿ ಸುಳ್ಳು ಭರವಸೆ ಕೊಟ್ಟು ಮೋಸ ಮಾಡಿದ್ದಾರೆ. ದಿನಕ್ಕೊಂದು ಹೇಳಿಕೆ ಕೊಟ್ಟು ರೈತರಲ್ಲಿ ಗೊಂದಲು ಸೃಷ್ಟಿಸುತ್ತಿದ್ದಾರೆ. ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದು ಕೇಳಿದ್ದ ಅವರು, ತಮ್ಮ ಹೇಳಿಕೆಗೆ ಇದುವರೆಗೂ ಕ್ಷಮೆ ಕೇಳಿಲ್ಲ’ ಎಂದು ಟೀಕಿಸಿದರು.

‘ರಾಜ್ಯದಲ್ಲಿರುವ ಬರಗಾಲ ಪರಿಸ್ಥಿತಿ ಬಗ್ಗೆ‌ ನಾವು ಗಮನ ಹರಿಸುತ್ತಿದ್ದೇವೆ. ಮುಖ್ಯಮಂತ್ರಿ ಬರ ಕಾಮಗಾರಿಗಳನ್ನು ವೀಕ್ಷಿಸುವ ಮತ್ತು ಕೈಗೊಳ್ಳುವ ಬಗ್ಗೆಯಷ್ಟೇ ಮಾತನಾಡುತ್ತಿದ್ದಾರೆ. ಆದರೆ, ಯಾವುದೂ ನಡೆಯುತ್ತಿಲ್ಲ. ಜನ ಯಾವುದು ಸರಿ ಮತ್ತು ತಪ್ಪು ಎಂದು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.