ADVERTISEMENT

ಧಾರವಾಡ | 11ನೇ ವಾರ್ಡ್‌: ರಸ್ತೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ-ಮಂಜುನಾಥ

ವಾರ್ಡ್‌ನ ಹಲವೆಡೆ 8 ದಿನಗಳಿಗೊಮ್ಮೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 6:06 IST
Last Updated 12 ಡಿಸೆಂಬರ್ 2025, 6:06 IST
ಧಾರವಾಡದ ಆದಿತ್ಯ ಪಾರ್ಕ ಬಡವಾಣೆಯಲ್ಲಿನ ರಸ್ತೆಯನ್ನು ಡಾಂಬರೀಕರಣ ಮಾಡಿರುವುದು
ಧಾರವಾಡದ ಆದಿತ್ಯ ಪಾರ್ಕ ಬಡವಾಣೆಯಲ್ಲಿನ ರಸ್ತೆಯನ್ನು ಡಾಂಬರೀಕರಣ ಮಾಡಿರುವುದು   

ಧಾರವಾಡ: ನಗರದ 11ನೇ ವಾರ್ಡ್‌ನಲ್ಲಿ ಹಲವಡೆ ಡಾಂಬರ್, ಸಿ.ಸಿ.ರಸ್ತೆ ರಸ್ತೆ ನಿರ್ಮಿಸಲಾಗಿದೆ, ಒಳರಸ್ತೆಗಳಲ್ಲಿ ಇಂಟರ್‌ಲಾಕಿಂಗ್‌ ಸಿಮೆಂಟ್ ಇಟ್ಟಿಗೆ ಅಳವಡಿಸಲಾಗಿದೆ. ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಕೆಲವೆಡೆ ನೀರಿನ ಬವಣೆ, ಕಸ ವಿಲೇವಾರಿ ಸಮಸ್ಯೆ, ಪೌರ ಕಾರ್ಮಿಕರ ಕೊರತೆ ಮೊದಲಾದ ಸಮಸ್ಯೆಗಳು ಇವೆ.

ಶಾಂತಿನಿಕೇತನ ನಗರ, ಹುಡ್ಕೊ ಕಾಲೊನಿ ಬನಶಂಕರಿ ನಗರ, ಅಶೋಕ ನಗರ, ಶಾಂತಿ ನಗರ, ಕುಸುಮನಗರ ಸಹಿತ ಹಲವಡೆ ಸಿ.ಸಿ ಹಾಗೂ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ವೆ.ಮಹೇಂದ್ರಕರ ಚಾಳ, ಲೋಟಸ್‌ ಲೇಔಟ್, ಶಾಂತಿನಿಕೇತ ನಗರ ಮೊದಲಾದ ಬಡಾವಣೆಗಳ ಒಳರಸ್ತೆಗಳಲ್ಲಿ ಇಂಟರ್‌ಲಾಕಿಂಗ್ ಸಿಮೆಂಟ್ ಇಟ್ಟಿಗೆ ಅಳವಡಿಸಲಾಗಿದೆ.

ಈ ವಾರ್ಡ್ ನಾರಾಯಣಪುರದ ಭಾಗಶಃ, ಸೈದಾಪುರ, ಮಹೀಂದ್ರ ಚಾಳದ ಬಡವಾಣೆಗಳಲ್ಲಿ 24X7 ನೀರು ಪೂರೈಕೆ ಯೋಜನೆ ಕಾರ್ಯಗತವಾಗಿದೆ. ಹಳಿಯಾಳ ನಾಕಾ ಹಾಗೂ ಶಾಂತಿನಿಕೇತನ ನಗರದಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ.

ADVERTISEMENT

ವಾರ್ಡ್‌ನ ಕೆಲವೆಡೆ ನೀರು ಪೂರೈಕೆ ಯೋಜನೆಗಾಗಿ ಪೈಪ್ ಅಳವಡಿಸಲು ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಕ್ಯಾಪ್ಟನ್ ದೇಸಾಯಿ ಲೇಔಟ್, ಜಮಖಂಡಿ ಮಠ ಬಡವಾಣೆಯಲ್ಲಿ ಕೆಲ ರಸ್ತೆಗಳು ಹದಗೆಟ್ಟಿವೆ.

‘ಎಂಟು ದಿನಗಳಿಗೊಮ್ಮೆ ನೀರು ಪೂರೈಸುತ್ತಾರೆ. ಡ್ರಮ್ಮು, ತೊಟ್ಟಿಗಳಲ್ಲಿ ವಾರದವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಾದ ಸ್ಥಿತಿ ಇದೆ. ಕೆಲವೆಡೆ ಪದೇಪದೇ ವಿದ್ಯುತ್ ಪೂರೈಕೆ ವ್ಯತ್ಯಯದ ಸಮಸ್ಯೆ ಇದೆ. ಗಟಾರಗಳಲ್ಲಿ ಕಸ, ಹೂಳು ತುಂಬಿಕೊಂಡಿದೆ. ನಿವೇಶನಗಳು, ರಸ್ತೆ ಬದಿಗಳಲ್ಲಿ ಕಸ ಎಸೆಯಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ತಪ್ಪಿಸಬೇಕು’ ಎಂದು ನಿವಾಸಿಗಳು ಹೇಳಿದರು.

‘ವಾರ್ಡ್‍ನಲ್ಲಿ 16 ಉದ್ಯಾನ ಇವೆ. ಸನ್ಮತಿ ನಗರದ ಉದ್ಯಾನಕ್ಕೆ ₹ 8.50 ಲಕ್ಷ ಅನುದಾನದಲ್ಲಿ ವ್ಯಾಯಾಮ ಸಲಕರಣೆ ಅಳವಡಿಸಲಾಗಿದೆ. ಆದಿತ್ಯ ಉದ್ಯಾನದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ವಿಹಾರ ಪಥ, ವ್ಯಾಯಾಮ ಪರಿಕರ ವ್ಯವಸ್ಥೆ ಮಾಡಲಾಗಿದೆ. ಬನಶಂಕರಿ ನಗರದ ಉದ್ಯಾನದಲ್ಲಿ ₹12 ಲಕ್ಷ ಅನುದಾನದಲ್ಲಿ ವಿಹಾರ ಪಥ ನಿರ್ಮಿಸಲಾಗಿದೆ’ ಎಂದು ಸದಸ್ಯ ಮಂಜುನಾಥ ಬಟ್ಟೆಣ್ಣವರ ತಿಳಿಸಿದರು.

ಎಂಟು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನಾಲ್ಕು ದಿನಕೊಮ್ಮೆ ನೀರು ಪೂರೈಸಿದರೆ ಅನುಕೂಲವಾಗುತ್ತದೆ. ಸಮರ್ಪಕವಾಗಿ ಕಸವಿಲೇವಾರಿ ಮಾಡಬೇಕು. ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಬೇಕು
ಎಂ.ಎಸ್.ನಾವಳ್ಳಿ ನಿವಾಸಿ ನಾರಾಯಣಪುರ
‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ’
‘ಶಾಸಕರ ಅನುದಾನದಲ್ಲಿ ಶಾಂತಿ ನಿಕೇತನ ನಗರ ಆದಿತ್ಯ ಪಾರ್ಕ್ ಲೋಟಸ್ ಲೇಔಟ್‍ನಲ್ಲಿ ₹2 ಕೋಟಿ ಅನುದಾನದಲ್ಲಿ ಸಿ.ಸಿ ಹಾಗೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಶಾಂತ ನಗರ ಕುಸುಮ ನಗರ ಸಾಧನಕೇರಿ 1ರಿಂದ 5ನೇ ಕ್ರಾಸ್ ರಸ್ತೆಗಳನ್ನು ₹1.50 ಕೋಟಿ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಮುಖ ರಸ್ತೆ ಕಸದ ಬ್ಲಾಕ್ ಸ್ಪಾರ್ಟ್‍ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು 11ನೇ ವಾರ್ಡ್ ಸದಸ್ಯ ಮಂಜುನಾಥ ಬಟ್ಟೆಣ್ಣವರ ತಿಳಿಸಿದರು.
ಪ್ರಮುಖ ಬಡಾವಣೆಗಳು
ಸನ್ಮತಿ ನಗರ ನಾರಾಯಣಪುರ ಸಾಧನಕೇರಿ 1ರಿಂದ 5ನೇ ಕ್ರಾಸ್ ಪ್ರಶಾಂತ ನಗರ ಶಿರಡಿ ಸಾಯಿಬಾಬಾ ಕಾಲೊನಿ ಉದಯನಗರ ವಿಜಯ ನಗರ ಅಶೋಕ ನಗರ ಬನಶಂಕರಿ ನಗರ ಅಶೋಕ ನಗರ ಶಾಂತಿ ನಗರ ಕುಸುಮನಗರ ಸಂತೋಷ ನಗರ ಮಹೇಂದ್ರಕರ ಚಾಳ ಜಮಖಂಡಿಮಠ ಬಡಾವಣೆ ಶಾಂತಿನಿಕೇತನ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.