ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಬಂಧಿತರಾದ 154 ಮಂದಿ ಆರೋಪಿತರಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ಶನಿವಾರ ಇಲ್ಲಿನ ಒಂದನೇ ಸೇಷನ್ ಕೋರ್ಟ್ನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು. 20 ಆರೋಪಿಗಳ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷೆ ಕಾರಣಕ್ಕೆ ಒಬ್ಬ ಆರೋಪಿ ಪರ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನುಳಿದ ಆರೋಪಿ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ.
ಆರೋಪಿಗಳಿಗೆ ಜಾಮೀನು ದೊರೆತರೆ ಸಾಕ್ಷಿ ನಾಶಪಡಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ಪೊಲೀಸರು ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಏ. 16ರ ಗಲಭೆ ನಂತರ ಬಂಧಿತರಾದ ಎಲ್ಲಾ ಆರೋಪಿಗಳನ್ನು ಏ. 30ರವರೆಗೆ ನ್ಯಾಯಾಂಗ ವಶದಲ್ಲಿ ಇಡಲಾಗಿತ್ತು.
ಅಭಿಷೇಕ ಹಿರೇಮಠ ಆಕ್ಷೇಪಾರ್ಹ ಸ್ಟೇಟಸ್ ಇಟ್ಟಿದ್ದಾನೆ ಎಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ದೂರುದಾರ ಹಾಗೂ ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಮಹ್ಮದ್ಅಜರುದ್ದೀನ್ ಜಿಲ್ಲೇರಿ ಅವನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆಗಾಗಿ ನ್ಯಾಯಾಲಯ ಅವನನ್ನು ಮೇ 2ರವರೆಗೆ ಪೊಲೀಸ್ ಕಸ್ಟಡಿ ಒಪ್ಪಿಸಿದೆ.
ದೂರುದಾರ ಮಹ್ಮದ್ಅಜರುದ್ದೀನ್ ಕೆಲವರಿಗೆ ಪ್ರಚೋದನೆ ನೀಡಿ ಗಲಭೆಗೆ ಕಾರಣವಾಗಿರಬಹುದು ಎನ್ನುವ ಕುರಿತು ಹಾಗೂ ಸ್ಟೇಟಸ್ ಸಂಬಂಧಿಸಿ ಕೆಲವಷ್ಟು ಮಾಹಿತಿ ಸಂಗ್ರಹಿಸಲು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.