ಹುಬ್ಬಳ್ಳಿ: ಶೋಕಿಗಾಗಿ ಬೈಕ್ ರೈಡ್ ಮಾಡುವವರನ್ನು ನೋಡಿರುತ್ತೀರಿ. ಆದರೆ, ಒಂದೊಳ್ಳೆ ಉದ್ದೇಶಕ್ಕಾಗಿ ಸಾವಿರಾರು ಕಿ.ಮೀವರೆಗೆ ಬೈಕ್ ರೈಡ್ ಮಾಡುವವರು ಅಪರೂಪ. ಅಂತಹ ಅಪರೂಪದ ರೈಡರ್ ಧಾರವಾಡದ ಮದಿಹಾಳ ನಿವಾಸಿ ವಿಜೇತ್ ಕುಮಾರ್ ಹೊಸಮಠ. ಅವರೀಗ ಧಾರವಾಡದ ಇತಿಹಾಸವನ್ನು ಭಾರತಕ್ಕೆ ತಿಳಿಸಲು ಸನ್ನದ್ಧರಾಗಿದ್ದಾರೆ.
ಇವರು ಮೊದಲು ಬೈಕ್ ರೈಡ್ ಮಾಡಿದ್ದು 2018ರಂದು. ಲೋಕಸಭೆ ಚುನಾವಣೆಯ ಕುರಿತು ಜಾಗೃತಿ ಮೂಡಿಸಲು ಧಾರವಾಡದಿಂದ ಆಂಧ್ರಪ್ರದೇಶ, ತಮಿಳುನಾಡು, ಕೇರಳದವರೆಗೆ 3,500 ಕಿ.ಮೀ ಕ್ರಮಿಸಿದ್ದರು. ನಂತರ ಹೆಲ್ಮೆಟ್ ಜಾಗೃತಿಗಾಗಿ ಧಾರವಾಡದಿಂದ ರಾಮೇಶ್ವರದವರೆಗೆ 2019ರಲ್ಲಿ 2,800 ಕಿ.ಮೀವರೆಗೆ ಬೈಕ್ ರೈಡ್ ಮಾಡಿದ್ದರು.
ಇದಾದ ಬಳಿಕ, 2021ರ ಅಕ್ಟೋಬರ್ 8ರಂದು 15 ರಾಜ್ಯಗಳ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 6,275 ಕಿ.ಮೀವರೆಗೆ ಬೈಕ್ನಲ್ಲಿ ಸಾಗಿದ್ದರು. 13 ದಿನಗಳವರೆಗೆ ಇವರು ರೈಡ್ ಮಾಡಿದ್ದು, 97 ಸಿ.ಸಿ. ಸ್ಪ್ಲೆಂಡರ್ ಬೈಕಿನಲ್ಲಿ ಎಂಬುದೇ ವಿಶೇಷ. ಈ ಸವಾಲಿನ ಕಾರ್ಯದಲ್ಲಿ ಇವರಿಗೆ ಜೊತೆಯಾದವರು ಸ್ನೇಹಿತ ಮೊಹಮ್ಮದ್ ರಫೀಕ್. ಅಂದ ಹಾಗೆ, ವಿಜೇತ್ ಈ ಸಾಹಸ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲು. ಎರಡು ಸಾವಿರ ಮಾಸ್ಕ್, ಒಂದು ಸಾವಿರ ಸ್ಯಾನಿಟೈಸರ್ ವಿತರಿಸಿ ಮಾನವೀಯತೆ ಮೆರೆಯುವುದರೊಂದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾದರು. ಇದಕ್ಕಾಗಿ ಈಚೆಗೆ ತಮಿಳುನಾಡು ವಿ.ವಿಯಿಂದ ಗೌರವ ಡಾಕ್ಟರೇಟ್ಗೂ ಭಾಜನರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.