ADVERTISEMENT

ಹುಬ್ಬಳ್ಳಿ | ಮುಂಗಾರು ಅಬ್ಬರ: ಮೀನು ಕೃಷಿ ಚೇತರಿಕೆ

ಕೆರೆ, ಕೃಷಿಹೊಂಡಗಳು ಭರ್ತಿ, ವರ್ಷಕ್ಕೆ ಅಂದಾಜು 8,650 ಸಾವಿರ ಟನ್‌ ಮೀನು ಉತ್ಪಾದನೆ

ಕಲಾವತಿ ಬೈಚಬಾಳ
Published 16 ಜುಲೈ 2025, 4:58 IST
Last Updated 16 ಜುಲೈ 2025, 4:58 IST
ಧಾರವಾಡದ ಮುಗದ ಮೀನುಗಾರರ ಸಹಕಾರ ಸಂಘದ ಸದಸ್ಯರು ಮುಗದ ಟ್ಯಾಂಕ್ ಪೆರಿಫೆರಲ್ ಟ್ಯಾಂಕ್‌ನಲ್ಲಿ ಮೀನು ಮರಿಗಳ ಸಾಕಣಿಕೆಯಲ್ಲಿ ನಿರತವಾಗಿರುವುದು
ಧಾರವಾಡದ ಮುಗದ ಮೀನುಗಾರರ ಸಹಕಾರ ಸಂಘದ ಸದಸ್ಯರು ಮುಗದ ಟ್ಯಾಂಕ್ ಪೆರಿಫೆರಲ್ ಟ್ಯಾಂಕ್‌ನಲ್ಲಿ ಮೀನು ಮರಿಗಳ ಸಾಕಣಿಕೆಯಲ್ಲಿ ನಿರತವಾಗಿರುವುದು   

ಹುಬ್ಬಳ್ಳಿ: ಪ್ರಸಕ್ತ ವರ್ಷ ಮುಂಗಾರು ಮಳೆ ಅಬ್ಬರದಿಂದ ಸುರಿದ ಪರಿಣಾಮ ಕೆರೆ, ಕೃಷಿಹೊಂಡಗಳು ಭರ್ತಿಯಾಗಿದ್ದು, ಮೀನು ಉತ್ಪಾದನೆ ಚೇತರಿಕೆ ಕಂಡಿದೆ.

ಕೃಷಿ, ಹೈನುಗಾರಿಕೆ ನಂತರ ಮೀನು ಸಾಕಾಣಿಕೆಯತ್ತ ಜನ ಆಸಕ್ತಿ ತೋರುತ್ತಿದ್ದು, ಜಿಲ್ಲೆಯಲ್ಲಿ ವರ್ಷಕ್ಕೆ ಅಂದಾಜು 8,650 ಸಾವಿರ ಟನ್‌ ಮೀನು ಉತ್ಪಾದನೆಯಾಗುತ್ತಿದೆ.

ಮೀನುಗಾರಿಕೆ ಇಲಾಖೆ ಅಂಕಿ–ಅಂಶದ ಪ್ರಕಾರ 2,500 ಮಂದಿ ನಿರಂತರವಾಗಿ ಮೀನು ಸಾಕಾಣಿಕೆ, ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. 750 ಜನ ಅರೆಕಾಲಿಕ ಕೆಲಸವಾಗಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. 

ADVERTISEMENT

ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯ 128 ಕೆರೆಗಳಿದ್ದು, 1619.11 ಹೆಕ್ಟೇರ್‌ ನೀರಾವರಿ ವಿಸ್ತೀರ್ಣ ಪ್ರದೇಶವಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 567 ಕೆರೆಗಳಿದ್ದು, 1393.41 ಹೆ.ನೀ.ವಿ ಪ್ರದೇಶವಿದೆ. 490 ಹೆಕ್ಟೇರ್‌ ಪ್ರದೇಶದ ಜಲಾಶಯ (ನೀರಸಾಗರ)ದಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ.

‘2022–23ನೇ ಸಾಲಿನಲ್ಲಿ 1,0070 ಟನ್‌ ಮೀನು ಉತ್ಪಾದನೆಯಾಗಿತ್ತು, 2024–25ರಲ್ಲಿ 8,560 ಟನ್‌ ಮಾತ್ರ ಉತ್ಪಾದನೆಯಾಗಿದೆ.  ಮೀನುಗಾರಿಕೆ ಇಲಾಖೆ ವತಿಯಿಂದ ಅಗತ್ಯ ಮಾಹಿತಿ, ಜಾಗೃತಿ ಮೂಡಿಸುತ್ತಿರುವುದರಿಂದ ಮೀನುಗಾರಿಕೆ ಪ್ರಮಾಣ ನಿಧಾನವಾಗಿ ಏರಿಕೆ ಕಾಣುತ್ತಿದೆ. ಜಿಲ್ಲೆಯ 10 ಮೀನುಗಾರಿಕೆ ಸಹಕಾರ ಸಂಘಗಳಲ್ಲಿ ಅಂದಾಜು 946 ಸದಸ್ಯರು ನೋಂದಣಿಯಾಗಿದ್ದಾರೆ. ಮೀನುಗಾರರ ಬದುಕು ಸುಧಾರಣೆ, ಆಧುನಿಕ ಸೌಲಭ್ಯ ಕಲ್ಪಿಸಲು ಇಲಾಖೆ ಹೆಜ್ಜೆ ಇಟ್ಟಿದೆ. ಅಗತ್ಯ ಸಲಕರಣೆ ವಿತರಿಸುವ ಕೆಲಸವಾಗುತ್ತಿದೆ’ ಎಂದು ಧಾರವಾಡ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಅಂದಾಜು 3,000 (600 ಹೆಕ್ಟೇರ್‌) ಕೃಷಿ ಹೊಂಡಗಳಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೃಷಿ ಹೊಂಡದಲ್ಲಿ ಮೀನುಗಾರಿಕೆ ಮಾಡುತ್ತಿರುವವರ ಸಂಖ್ಯೆ 50 ಹೆಕ್ಟೇರ್‌ದಿಂದ 300 ಹೆಕ್ಟೇರ್‌ಗೆ ಏರಿಕೆಯಾಗಿದೆ’ ಎಂದರು.

ಕೆರೆ ಹರಾಜಿಗೆ ಇ–ಟೆಂಡರ್: ಮೀನುಗಾರಿಕೆಗೆ ಈ ಹಿಂದೆ ಹರಾಜು ಮುಖಾಂತರ ಕೆರೆಗಳನ್ನು ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಇ–ಟೆಂಡರ್‌ ಮುಖಾಂತರ ಕೆರೆ ಹಂಚಿಕೆ ಮಾಡಲಾಗುತ್ತಿದೆ. ಹರಾಜಿನಲ್ಲಿ ಭಾಗವಹಿಸಲು ಜುಲೈ 18 ಕೊನೆ ದಿನವಾಗಿದೆ.

8 ಖಾಲಿ ಹುದ್ದೆ

ಮೀನುಗಾರಿಕೆ ಇಲಾಖೆ ಧಾರವಾಡ ಕಚೇರಿಯಲ್ಲಿ ಒಟ್ಟು 17 ಹುದ್ದೆಗಳು ಮಂಜೂರಾಗಿದ್ದು 9 ಮಾತ್ರ ಭರ್ತಿಯಾಗಿವೆ. 8 ಖಾಲಿ ಇವೆ. ಕೆಲವೆಡೆ ತಾಲ್ಲೂಕು ಕಚೇರಿಗಳಲ್ಲಿ ಸಹಾಯಕ ನಿರ್ದೇಶಕರ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸರಿಯಾದ ಮಾಹಿತಿ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಮೀನುಗಾರಿಕೆ ಉಪ ಆದಾಯವಾಗುತ್ತಿದೆ. ಮೀನು ಕೃಷಿಕರು ಮೂಲ ಆದಾಯವಾಗಿಸಿಕೊಂಡಾಗ ಮಾತ್ರ ಮೀನುಗಾರಿಕೆಗೆ ಹೆಚ್ಚು ಉತ್ತೇಜನ ಸಿಗಲು ಸಾಧ್ಯ
-ಶ್ರೀಪಾದ ಕುಲಕರ್ಣಿ ಉಪ ನಿರ್ದೇಶಕ ಮೀನುಗಾರಿಕೆ ಇಲಾಖೆ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.