ADVERTISEMENT

ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಕೆ: ಪದವೀಧರ ಯುವಕರ ಕೃಷಿ ಸಾಧನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 4:39 IST
Last Updated 19 ಡಿಸೆಂಬರ್ 2025, 4:39 IST
ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸುತ್ತಿರುವ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದ ರೈತರು
ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸುತ್ತಿರುವ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದ ರೈತರು   

ಹುಬ್ಬಳ್ಳಿ: ಪದವೀಧರ ಯುವಕರು ಉದ್ಯೋಗ ಹುಡುಕುತ್ತ ಸಮಯ ವ್ಯರ್ಥ ಮಾಡುವ ಈ ಕಾಲದಲ್ಲಿ ಬಿ.ಕಾಂ ಪದವಿ ಪಡೆದು ಕೃಷಿಯನ್ನೇ ಅವಲಂಬಿಸಿ ಅಧಿಕ ಲಾಭ ಗಳಿಸುತ್ತಿರುವ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದ ಯುವಕರಾದ ರಾಚಯ್ಯ ಚಿಕ್ಕಮಠ ಹಾಗೂ ಶೇಕಯ್ಯ ಚಿಕ್ಕಮಠ ಸಹೋದರರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಪೂರ್ವಿಕರಿಂದ ಬಂದ 23 ಎಕರೆ ಜಮೀನಿನಲ್ಲಿ 10 ಎಕರೆ ಕಬ್ಬು, 5 ಎಕರೆ ಮಾವು, 5 ಎಕರೆ ಭತ್ತ ಹಾಗೂ 3 ಎಕರೆ ಚಿಕ್ಕುತೋಟ ಹಾಗೂ ತರಕಾರಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದು ಮಿಶ್ರ ಬೇಸಾಯ ಮಾಡುವ ಮೂಲಕ ವಾರ್ಷಿಕವಾಗಿ ಸುಮಾರು 10 ಲಕ್ಷ ಲಾಭ ಗಳಿಸುತ್ತಿದ್ದಾರೆ. 

‘ಒಟ್ಟು 10 ಎಕರೆ ಭೂಮಿಯಲ್ಲಿ ತಲಾ 40ರಿಂದ 45 ಟನ್ ಕಬ್ಬು ಬೆಳೆಯುತ್ತೇವೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ತಿಪ್ಪೆಗೊಬ್ಬರ ಗೋಕೃಪಾಮೃತ, ಜೀವಾಮೃತ ಬಳಸುತ್ತೇವೆ. ವಾರ್ಷಿಕವಾಗಿ ಸುಮಾರು 500 ಟನ್‌ನಷ್ಟು ಬೆಳೆದ ಕಬ್ಬನ್ನು ಯಾವುದೇ ಸಕ್ಕರೆ ಕಾರ್ಖಾನೆಗೆ ಕಳಿಸದೇ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸುತ್ತೇವೆ’ ಎನ್ನುತ್ತಾರೆ ಯುವ ರೈತ ರಾಚಯ್ಯ ಚಿಕ್ಕಮಠ.

ADVERTISEMENT

‘ಒಂದು ಟನ್‌ ಕಬ್ಬಿನಲ್ಲಿ ಸುಮಾರು 1.5 ಕ್ವಿಂಟಲ್‌ ಬೆಲ್ಲ ಸಿದ್ಧಪಡಿಸುತ್ತೇವೆ. ಗ್ರಾಹಕರ ಬೇಡಿಕೆ ತಕ್ಕಂತೆ ಮೂರು ರೀತಿಯಲ್ಲಿ ಬೆಲ್ಲವನ್ನು ಸಿದ್ಧಪಡಿಸುತ್ತೇವೆ. ಬೆಲ್ಲ ತಯಾರಿಕೆ ಪ್ರಕ್ರಿಯೆಯಲ್ಲಿ ಬರುವ ಕಾಕಂಬಿ, ಪುಡಿಬೆಲ್ಲವನ್ನು ಮಾರಾಟ ಮಾಡುತ್ತೇವೆ. ತಯಾರಿಸಿದ ಬೆಲ್ಲವನ್ನು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಸುತ್ತಲಿನ ಗ್ರಾಮ ಹಾಗೂ ಪಟ್ಟಣಕ್ಕೆ ತೆರಳಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಇದರಿಂದ ಹೆಚ್ಚು ಲಾಭ ಗಳಿಸಬಹುದು ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಯುವ ರೈತ ಶೇಖಯ್ಯ ಚಿಕ್ಕಮಠ.

ಸಕ್ಕರೆ ಕಾರ್ಖಾನೆಗಳ ಬೆಲೆ ತಾರತಮ್ಯ ನೀತಿಯಿಂದ ಬೆಸತ್ತ ರೈತರಿಗೆ ಯುವ ರೈತರ ಈಸ ಕೃಷಿ ಸಾಧನೆ ಮಾದರಿಯಾಗಿದೆ.  

ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸುತ್ತಿರುವ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದ ರೈತರು
ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆ ಬೆಳೆದರೆ ಅಧಿಕ ಲಾಭ ಹಾಗೂ ಮಣ್ಣಿನ ಫಲಿತಾಂಶ ಹೆಚ್ಚುತ್ತದೆ. ಬೆಲ್ಲ ತಯಾರಿಸಿ ಸ್ಥಳೀಯವಾಗಿ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು.
ಶೇಖಯ್ಯ ಚಿಕ್ಕಮಠ, ಯುವ ರೈತ
10 ಎಕರೆ ಜಮೀನಿನಲ್ಲಿ ಬೆಳೆದ ಸುಮಾರು 500 ಟನ್‌ ಕಬ್ಬು ಬೆಳೆಯನ್ನು ಯಾವುದೇ ಸಕ್ಕರೆ ಕಾರ್ಖಾನೆಗೆ ಕಳಿಸದೇ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಲ್ಲ ತಯಾರಿಸಿ ಮಾರಾಟ ಮಾಡುತ್ತೇವೆ
ರಾಚಯ್ಯ ಚಿಕ್ಕಮಠ, ಯುವ ರೈತ

ಪರಿಶುದ್ಧ ಬೆಲ್ಲ ತಯಾರಿಕೆ ವಿಧಾನ

‘ಜಮೀನಿನಲ್ಲಿ ಬೆಳೆದ ಕಬ್ಬನ್ನು ವಿದ್ಯುತ್‌ ಯಂತ್ರದ ಮೂಲಕ ಅರೆಯಲಾಗುತ್ತದೆ. ಅದರಿಂದ ತೆಗೆದ ಹಾಲನ್ನು ಒಂದು ಕೊಪ್ಪರಗಿಯಲ್ಲಿ ಹಾಕಿ ಅಡವಿ ಬೆಂಡಿ ಸುಣ್ಣ ಸ್ವಲ್ಪ ಗಾಣದ ಎಣ್ಣೆ ಮಿಶ್ರಣ ಮಾಡಲಾಗುತ್ತದೆ. ಸುಮಾರು 2 ತಾಸು ಹದವಾಗಿ ಬೇಯಿಸಿದ ಬಳಿಕ ಕಾಕಂಬಿ ಅಂಶ ಹೊರತೆಗೆದು ಯಾಲಕ್ಕಿ ಶುಂಠಿ ತುಪ್ಪದಂತಹ ಪದಾರ್ಥಗಳನ್ನು ಬೆರೆಸುವ ಮೂಲಕ ನೈಸರ್ಗಿಕ ಪರಿಶುದ್ಧ ಬೆಲ್ಲವನ್ನು ತಯಾರಿಸಲಾಗುತ್ತದೆ’ ಎಂದು ಶೇಖಯ್ಯ ಚಿಕ್ಕಮಠ ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.