ಹುಬ್ಬಳ್ಳಿ:'ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಕೆಲವು ಘಟನೆಗಳಿಂದಾಗಿ ಸ್ವಾಮೀಜಿಗಳೆಂದರೆ ಹೇಸಿಗೆ ಅನ್ನಿಸುವ ಸ್ಥಿತಿಗೆ ಬಂದಿದ್ದೇವೆ' ಎಂದು ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಬೈರಿದೇವರಕೊಪ್ಪದಲ್ಲಿ ಭಾನುವಾರ ನಡೆದ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ಭಕ್ತ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು ಜಾತಿಯನ್ನು ತೊಡೆದು ಹಾಕಬೇಕೆಂದು ಬಸವಣ್ಣನವರು ಎಷ್ಟು ಪ್ರಯತ್ನ ಪಟ್ಟಿದ್ದರೋ ಅದೆಲ್ಲವನ್ನೂ ನಾವು ಉಪೇಕ್ಷಿಸಿ ನಮ್ಮ ನಮ್ಮದೇ ಜಾತಿ ಕಟ್ಟಿಕೊಂಡು ಸಂಕುಚಿತರಾಗುತ್ತಿದ್ದೇವೆ ಎಂದು ವಿಷಾದಿಸಿದರು.
ಸ್ವಾಮೀಜಿಗಳಿಗೆ ಮಠದಲ್ಲಿಯೇ ಮಾಡಲು ಸಾಕಷ್ಟು ಕೆಲಸಗಳಿವೆ. ಮತ್ಯಾಕೆ ಬೀದಿಗೆ ಬರುತ್ತಾರೋ? ಮಠದಲ್ಲಿ ಮಾಡಲು ಕೆಲಸ ಇಲ್ಲದ್ದಕ್ಕೆ ಬೀದಿಗೆ ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಲಕಾಲಕ್ಕೆ ನಾವು ಬದಲಾಗದೇ ಇದ್ದರೆ ನಮ್ಮ ಧರ್ಮ, ನಾವೆಲ್ಲರೂ ಉಳಿಯುವುದಿಲ್ಲ. ಮಠಾಧಿಪತಿಗಳು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಬಹಳಷ್ಟು ಮಠಾಧೀಶರು ಮಠದ ಆಸ್ತಿ ತಮ್ಮದೇ ಎಂದುಕೊಂಡಿದ್ದಾರೆ. ಆದರೆ ಅದು ಭಕ್ತರದು, ಸಮಾಜದ್ದು. ರಾಜ್ಯದಲ್ಲಿ ಸುಮಾರು 18,000 ಮಠಗಳಿದ್ದವು, ಆದರೆ ಈಗ 1800 ಮಠಗಳಿವೆ. ಮಠಗಳಿಗೆಲ್ಲ ನೂರಾರು ಎಕರೆ ಭೂಮಿ ಇತ್ತು, ಅದನ್ನೆಲ್ಲ ಮಠಾಧಿಪತಿಗಳೇ ನುಂಗಿದರು. ಅದಕ್ಕೆ ಕಾರಣ ಭಕ್ತರು ಅವರನ್ನು ಪ್ರಶ್ನೆ ಮಾಡದೇ ಇರುವುದು ಎಂದು ಎಚ್ಚರಿಸಿದರು.
ಕೆಲವು ಮಠಾಧೀಶರು ಪ್ರತಿವರ್ಷ ₹ 2-3 ಕೋಟಿ ಸಾಲ ಮಾಡುತ್ತಾರೆ. ಅದನ್ನು ಭಕ್ತರು ತೀರಿಸಬೇಕು. ಇದೆಂಥ ಹುಚ್ಚು? ಕೆಲವು ಮಠಗಳಲ್ಲಿ ತಮ್ಮದೇ ಬಂಧು, ಬಾಂಧವರ ಆಶ್ರಯ ತಾಣ ಮಾಡಿಕೊಂಡಿದ್ದಾರೆ. ಹೀಗಾಗಿ ಮಠಗಳ ಆಸ್ತಿ, ಹಣ ಉಳಿಸಲು ಭಕ್ತರು ಎಚ್ಚರದಿಂದ ಇರಬೇಕು ಎಂದರು.
ಯಾವುದೇ ಮಠಗಳಿಗೆ ಉತ್ತರಾಧಿಕಾರಿ ನೇಮಿಸುವಾಗ ಜಾತಿ ಮುಖ್ಯವಾಗಬಾರದು. ವಿದ್ಯೆ, ವಿನಯ, ಯೋಗ್ಯತೆಯೇ ಮಾನದಂಡವಾಗಬೇಕು. ಬಸವಣ್ಣನವರ ಆಶಯ ಪಾಲನೆಯಾಗಬೇಕು. ಆ ನಿಟ್ಟಿನಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಮಾಡಲು ಒಕ್ಕೂಟ ತೀರ್ಮಾನಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.