
ಧಾರವಾಡ: ‘ಶಿಕ್ಷಕರು ಬೋಧನೆಯಲ್ಲಿ ಬಹುಮಾಧ್ಯಮ ಸಾಧನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಹೊಸ ವಿಷಯ ತಿಳಿದುಕೊಳ್ಳಲು, ಜ್ಞಾನ ವೃದ್ಧಿಸಿಕೊಳ್ಳಲು ತಂತ್ರಜ್ಞಾನ ಸಹಕಾರಿಯಾಗಿದೆ’ ಎಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ ಹೇಳಿದರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು, ಪಿಎಂ ಉಷಾ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ಕಲಿಕೆಯ ಮೌಲ್ಯಮಾಪನ ಮತ್ತು ಮೌಲ್ಯನಿರ್ಣಯ ತಂತ್ರಗಳು’ ಕುರಿತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಇದು ತಂತ್ರಜ್ಞಾನದ ಯುಗ. ತಂತ್ರಜ್ಞಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಬೇಕು, ವಿಷಯಗಳನ್ನು ಮನದಟ್ಟು ಮಾಡಿಸಬೇಕು. ಕಲಿಕೆ ಮತ್ತು ಬೋಧನೆ ಅಂತರವನ್ನು ಕಡಿಮೆ ಮಾಡಲು ಶಿಕ್ಷಕರು ಪ್ರಯತ್ನಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಸಾಮರ್ಥ್ಯ ಗ್ರಹಿಸಬೇಕು. ಕಲಿಕೆಯಲ್ಲಿ ಆಸಕ್ತಿ ಬೆಳೆಸಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು’ ಎಂದು ತಿಳಿಸಿದರು.
ಕವಿವಿ ವ್ಯಾಪ್ತಿಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ತಲ್ಲೂರ ಮಾತನಾಡಿ, ‘ತಂತ್ರಜ್ಞಾನ ಬಳಸಲು ಕಾಲೇಜುಗಳಲ್ಲಿ ತಂತ್ರಜ್ಞಾನ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜತೆಗೆ ಭಾವನಾತ್ಮಕವಾಗಿ ಬೆರೆಯಬೇಕು. ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ್ ಮಾತನಾಡಿ, ‘ಬೋಧನೆಯಲ್ಲಿ ಪ್ರಯೋಗ ನಡೆಸಬೇಕು. ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಬೇಕು’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕೆ.ಆರ್.ವಿ.ರಾಜಾ ಸುಬ್ರಮಣಿಯನ್, ಹಾಗೂ ವಫಾ.ಟಿ. ನಕುದಾ ಅವರು ಉಪನ್ಯಾಸ ನಿಡಿದರು. ಕಾಲೇಜು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲಕ್ಷ್ಮಿಪತಿ, ಕಾರ್ಯಾಗಾರದ ಸಂಯೋಜಕ ಎಸ್. ಶ್ರೀನಿವಾಸ, ಪ್ರೊ. ಅಫ್ತಾಬ್ ಭಾಯಿ, ವಿಜಯಲಕ್ಷ್ಮಿ ದಾನರೆಡ್ಡಿ ಇದ್ದರು.
ಹೊಸತನ ಅಳವಡಿಸಿಕೊಳ್ಳಿ
ಬೋಧನೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲು ಶಿಕ್ಷಕರು ಪ್ರಯತ್ನಿಸಬೇಕು. ಬೋಧನೆ ಸಂಶೋಧನೆಯಲ್ಲಿ ಹೊಸತನ ಅಳವಡಿಸಿಕೊಳ್ಳಬೇಕು’ ಎಂದು ಕರ್ನಾಟಕ ವಿ.ವಿ ಕುಲಪತಿ ಪ್ರೊ. ಎ.ಎಂ.ಖಾನ್ ತಿಳಿಸಿದರು. ‘ಶಿಕ್ಷಕರು ಉತ್ತಮ ಸಂವಹನ ಕೌಶಲ ರೂಢಿಸಿಕೊಳ್ಳಬೇಕು. ಹೊಸದನ್ನು ಕಲಿಯಬೇಕು. ವಿದ್ಯಾರ್ಥಿಗಳಿಗೆ ಕೌಶಲಗಳನ್ನು ಕಲಿಸಬೇಕು’ ಎಂದು ಹೇಳಿದರು.