ADVERTISEMENT

ಕೇಂದ್ರ ಬಜೆಟ್‌ನಲ್ಲಿ ಧಾರವಾಡ ಜಿಲ್ಲೆಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:07 IST
Last Updated 2 ಫೆಬ್ರುವರಿ 2026, 5:07 IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ಸದಸ್ಯರು ಭಾನುವಾರ ಬಜೆಟ್ ಮಂಡನೆ ವೀಕ್ಷಿಸಿದರು 
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ಸದಸ್ಯರು ಭಾನುವಾರ ಬಜೆಟ್ ಮಂಡನೆ ವೀಕ್ಷಿಸಿದರು    

ಹುಬ್ಬಳ್ಳಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಮಂಡಿಸಿದ 2026–27ನೇ ಸಾಲಿನ ಬಜೆಟ್‌ ಹುಬ್ಬಳ್ಳಿ–ಧಾರವಾಡ ಸೇರಿ ಒಟ್ಟಾರೆ ಧಾರವಾಡ ಜಿಲ್ಲೆಗೆ ನಿರಾಶಾದಾಯಕವಾಗಿದೆ.

ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇದು ಶ್ರೀಮಂತರ ಪರ, ಕೇವಲ ಘೋಷಣೆಗಳಿಗಷ್ಟೇ ಸೀಮಿತವಾದ ಬಜೆಟ್‌ ಎಂಬ ಟೀಕೆಗಳು ವ್ಯಕ್ತವಾಗಿವೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ (ಡಿಮಾನ್ಸ್‌) ಅನುದಾನ ಒದಗಿಸಿ, ಬೆಂಗಳೂರಿನ ನಿಮ್ಹಾನ್ಸ್ ಮಾದರಿಯಲ್ಲಿ ಅಭಿವೃದ್ಧಿ, ಜಲ ಸಂಪನ್ಮೂಲ ವಿಶ್ವವಿದ್ಯಾಲಯ ಘೋಷಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಬಿಜೆಪಿ ಮುಖಂಡರು ಬಜೆಟ್‌ ಅನ್ನು ಸ್ವಾಗತಿಸಿದ್ದು, ಆತ್ಮ ನಿರ್ಭರ, ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕವಾದ ಬಜೆಟ್ ಎಂದು ಶ್ಲಾಘಿಸಿದ್ದಾರೆ.

ಗ್ರಾಮೀಣ ಭಾಗದ ಜೀವನಶೈಲಿ ಉತ್ತಮಪಡಿಸುವ ನಿಟ್ಟಿನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌, ಬೆಳೆ ಆಧಾರಿತ ಯೋಜನೆಯನ್ನು ಉತ್ತೇಜಿಸಿ ರೈತರ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂಬ ಪ್ರಸ್ತಾವಕ್ಕೆ ರೈತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಇನ್ನಷ್ಟು ಬಲಪಡಿಸಲು ಮತ್ತು ಜಾಗತಿಕ ಸ್ಪರ್ಧೆಗೆ ಅವುಗಳನ್ನು ಅಣಿಗೊಳಿಸಲು ₹10 ಸಾವಿರ ಕೋಟಿ ನೆರವು ಘೋಷಿಸಿರುವುದನ್ನು ಕೈಗಾರಿಕೋದ್ಯಮಿಗಳು ಸ್ವಾಗತಿಸಿದ್ದಾರೆ.

ಸಮಗ್ರ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪಿಸಬೇಕು, ಹುಬ್ಬಳ್ಳಿ–ಅಂಕೋಲ ರೈಲು ಮಾರ್ಗ ಯೋಜನೆ, ಧಾರವಾಡ–ಬೆಳಗಾವಿ ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಿಲ್ಲ. ಅಲ್ಲದೆ, ಹೊಸ ರೈಲುಗಳ ಸಂಚಾರವನ್ನು ಘೋಷಣೆ ಮಾಡಿಲ್ಲ. ಹುಬ್ಬಳ್ಳಿಯಿಂದ ದೆಹಲಿಗೆ ವಂದೇ ಭಾರತ್ ಸ್ಲೀಪರ್ ಕೊಚ್ ರೈಲು ಆರಂಭಿಸಬೇಕು ಎಂಬುದಕ್ಕೆ ಆದ್ಯತೆ ಸಿಕ್ಕಿಲ್ಲ. 

ಹುಬ್ಬಳ್ಳಿಯಲ್ಲಿ ಜಿಎಸ್‌ಟಿ ಟ್ರಿಬ್ಯೂನಲ್‌ ಪೀಠ ಸ್ಥಾ‍ಪಿಸಬೇಕು, ಜಿಎಸ್‌ಟಿಯಲ್ಲಿ ಇರುವಂತೆ ಆದಾಯ ತೆರಿಗೆಯಲ್ಲೂ ‘ಕ್ಯಾಶ್‌ ಲೆಡ್ಜರ್‌’ ವ್ಯವಸ್ಥೆ ಪರಿಚಯಿಸಬೇಕು ಎಂಬ ಬೇಡಿಕೆ ಸಹ ಈಡೇರಿಲ್ಲ.  

ಬಜೆಟ್ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ, ‘ಕೇಂದ್ರ ಬಜೆಟ್‌ನಲ್ಲಿ ಕೆಲವು ವಿಭಾಗಗಳಿಗೆ ಮಾತ್ರ ಒತ್ತು ನೀಡಲಾಗಿದೆ. ಎಂಎಸ್‌ಎಂಇಗಳಿಗೆ ₹10 ಸಾವಿರ ಕೋಟಿ ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ.  ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಿಲ್ಲ. ಒಟ್ಟಾರೆ ಇದು ನಿರಾಶಾದಾಯಕ ಬಜೆಟ್‌’ ಎಂದರು.

‘ಮಾವು ಸೇರಿದಂತೆ ಇತರ ಬೆಳೆಗಳಿಗೆ ಸಂಸ್ಕರಣಾ ಘಟಕ, ಶೀತಲ ಘಟಕ ನಿರ್ಮಾಣದ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಮಹದಾಯಿ ಸೇರಿದಂತೆ ಈ ಭಾಗದ ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಯಾವುದೇ ಆರ್ಥಿಕ ನೆರವು ಒದಗಿಸಿಲ್ಲ’ ಎಂದು ಹೇಳಿದರು. 

‘ಬೆಂಗಳೂರು ಹೊರತುಪಡಿಸಿ ಈ ಭಾಗದಲ್ಲಿ ಉದ್ದಿಮೆಗಳು ಸ್ಥಾಪನೆಯಾದರೆ ಇಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಅದಕ್ಕೆ ಒತ್ತು ನೀಡಿಲ್ಲ. ಸಪ್ಲಿಮೆಂಟರಿ ಬಜೆಟ್‌ನಲ್ಲಾದರೂ ಈ ಭಾಗದ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದರು. 

ನವಲಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರಸನ್ನ ಫಂಢರಿ, ‘ದೇಶವನ್ನು ಕೇಂದ್ರವಾಗಿ ಮಾಡಿಕೊಂಡು ಡಾಟಾ ಸೆಂಟರ್‌ ಸ್ಥಾಪಿಸುವವರಿಗೆ 2047ರವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಉತ್ತಮ ಬೆಳವಣಿಗೆ’ ಎಂದು ಪ್ರತಿಕ್ರಿಯಿಸಿದರು.

‘ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಸಿಟಿ ಎಕನಾಮಿಕ್ ವಲಯ ಸ್ಥಾಪಿಸಿ, ₹5 ಸಾವಿರ ಕೋಟಿ ಒದಗಿಸಲಾಗಿದೆ. ಹುಬ್ಬಳ್ಳಿ–ಧಾರವಾಡ ಎರಡನೇ ಹಂತದ ನಗರವಾಗಿದ್ದು, ಅದರಿಂದ ಅನುಕೂಲವಾಗಲಿದೆ’ ಎಂದರು.

‘ದೇಶದ ಬೆಳವಣಿಗೆಗೆ ‍ಪೂರಕ’

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ ದೂರದೃಷ್ಟಿಯಿಂದ ಕೂಡಿದೆ. ಇದರಿಂದ ಆತ್ಮನಿರ್ಭರ ವಿಕಸಿತ ಭಾರತ ನಿರ್ಮಾಣ ಮತ್ತು ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.  ಆರ್ಥಿಕ ಬೆಳವಣಿಗೆ ನಾರಿ ಶಕ್ತಿ ಬಲವರ್ಧನೆಗೆ ಒತ್ತು ನಿಡಲಾಗಿದ್ದು ದೇಶದ ಬೆನ್ನೆಲುಬಾಗಿರುವ ರೈತರಿಗೂ ಅನುಕೂಲಕರ ಅಂಶಗಳಿವೆ ಎಂದಿದ್ದಾರೆ.  ರಾಜ್ಯಗಳ ಬೆಳವಣಿಗೆಗೆ ಅನುದಾನ ಮಧ್ಯಮ ವರ್ಗಗಳ ಸಬಲೀಕರಣ  ಗುಣಮಟ್ಟದ ಶಿಕ್ಷಣದ ಮೂಲಕ ಯುವಶಕ್ತಿ ಸಬಲೀಕಣ ಸೆಮಿಕಂಡಕ್ಟರ್ ವ್ಯವಸ್ಥೆ ಬಲವರ್ಧನೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ. 

‘ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ’

ಕೇಂದ್ರ ಬಜೆಟ್‌ನಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಘೋಷಿಸಿದ್ದ ನವೋದ್ಯಮ ಮೇಕ್ ಇನ್ ಇಂಡಿಯಾ ಆತ್ಮ ನಿರ್ಭರ ಭಾರತ ಬುಲೆಟ್ ಟ್ರೈನ್ ಸೇರಿ ಹಲವು ಯೋಜನೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಟೀಕಿಸಿದ್ದಾರೆ. ಚಿನ್ನದ ದರ ₹1.50 ಲಕ್ಷ ದಾಟಿದೆ. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಎಂಎಸ್‌ಪಿ ಜಾರಿಗೆ ಕಾನೂನು ಉತ್ಪಾದನಾ ವಲಯ ರಫ್ತು ವಲಯಗಳಿಗೆ ಆದ್ಯತೆ ಸಿಕ್ಕಿಲ್ಲ ಎಂದಿದ್ದಾರೆ. ತೆರಿಗೆ ಪಾವತಿಯಲ್ಲಿ ರಾಜ್ಯ ಎರಡನೇ ಸ್ಥಾನದ್ದಲ್ಲಿದ್ದು ಜಿಡಿಪಿಯಲ್ಲಿ ಮುಂದಿದೆ. ಇಷ್ಟಾದರೂ ರಾಜ್ಯಕ್ಕೆ ವಿಶೇಷ ಯೋಜನೆ ಘೋಷಿಸಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

‘ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ’

ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ರೈತರ ಆದಾಯವನ್ನು ದ್ವಿಗುಣಗೊಳಿಸಲು ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಕ್ರಮ  ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದ್ದಾರೆ. ಕೈಗಾರಿಕೆಗಳ ಅಭಿವೃದ್ಧಗೆ ವಿದೇಶಿ ಬಂಡವಾಳ ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಕಲ್ಪಿಸಲು ರೈಲ್ವೆ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಜನಸಾಮಾನ್ಯರ ದೈನಂದಿನ ಜೀವನ ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. ಎಲ್ಲ ವಲಯಗಳನ್ನು ಒಳಗೊಂಡಿರುವ ಪರಿಪೂರ್ಣ ಬಜೆಟ್ ಇದಾಗಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ದೂರದೃಷ್ಟಿ ಹೊಂದಿದೆ ಎಂದು ಹೇಳಿದ್ದಾರೆ. 

‘ಹೈಸ್ಪೀಡ್ ರೈಲು ಘೋಷಣೆ’

ಕೇಂದ್ರ ಬಜೆಟ್ ವಿಕಸಿತ ಭಾರತಕ್ಕೆ ಪೂರಕವಾಗಿದೆ. ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ನೂತನವಾಗಿ ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ಹೈಸ್ಪೀಡ್‌ ರೈಲುಗಳನ್ನು ಘೋ಼ಷಸಿದ್ದು‌ ಅಭಿನಂದನಾರ್ಹ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ. ಆತ್ಮ ನಿರ್ಭರ ಭಾರತಕ್ಕಾಗಿ ₹2 ಸಾವಿರ ಕೋಟಿ ಮೀಸಲಿಡಲಾಗಿದೆ. ತೆಂಗು ಕೃಷಿ ಅಭಿವೃದ್ಧಿ ನೂತನ ಯೋಜನೆ ತೆಂಗಿನಕಾಯಿ ಬೆಳೆ ಸಂಸ್ಕರಣೆ ರಫ್ತಿಗೆ ಒತ್ತು ನೀಡಲಾಗಿದೆ.   ಮಧ್ಯಮ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲದ ನೆರವು ಘೋಷಿಸಿದೆ. ಕೃಷಿ ಮತ್ತು ಪಶುಪಾಲನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಲಭ ಸಾಲದ‌ ವ್ಯವಸ್ಥೆ ಡೇರಿಗಳ ಹೆಚ್ಚಳ ಅಗತ್ಯ ಸಹಾಯಧನ ನೀಡಲು ಮುಂದಾದಿಗಿರುವುದು ಸ್ವಾಗತಾರ್ಹ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.