
ಮುಂಡರಗಿ ತಾಲ್ಲೂಕಿನ ಬಾಗೇವಾಡಿ ಗ್ರಾಮದ ಈಶ್ವರ ಮೂರ್ತಿಯನ್ನು ಕಿಡಿಗೇಡಿಗಳು ಹಾನಿ ಉಂಟು ಮಾಡಿರುವುದು.
ಮುಂಡರಗಿ (ಗದಗ ಜಿಲ್ಲೆ): ತಾಲ್ಲೂಕಿನ ಬಾಗೇವಾಡಿ ಗ್ರಾಮದ ಹೊರವಲಯದಲ್ಲಿ ಇರುವ ಈಶ್ವರ ಮತ್ತು ಬಸವಣ್ಣನ ಮೂರ್ತಿಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಹಾನಿಗೊಳಿಸಿದ್ದಾರೆ.
ಬಾಗೇವಾಡಿ ಹಾಗೂ ಮಲ್ಲಿಕಾರ್ಜುನಪುರ ಗ್ರಾಮಗಳ ನಡುವೆ ಕಪ್ಪತಗುಡ್ಡದ ಕಣಿವೆಯೊಂದರಲ್ಲಿ ಈಶ್ವರನ ದೇವಸ್ಥಾನವಿದೆ. ಅಲ್ಲಿ ಜನ ಸಂಚಾರ ವಿರಳ. ಹುಣ್ಣಿಮೆ, ಅಮಾವಾಸ್ಯೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.
‘ಮಹಾಶಿವರಾತ್ರಿಯಂದು ಬೆಳಗಿನ ಜಾವ ದುಷ್ಕರ್ಮಿಗಳು ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ಈಶ್ವರ, ನಂದಿ ಹಾಗೂ ಹೊನ್ನತ್ತೆಮ್ಮನ ಮೂರ್ತಿಗಳನ್ನು ಹಾನಿ ಮಾಡಿದ್ದರು. ನಾಲ್ಕು ದಿನಗಳ ಅಂತರದಲ್ಲಿ ಮತ್ತೇ ಅಂತಹದ್ದೇ ಘಟನೆ ಸಂಭವಿಸಿದೆ. ಕೃತ್ಯ ಎಸಗುತ್ತಿರುವ ಕಿಡಿಗೇಡಿಗಳನ್ನು ಬಂಧಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.