ಗದಗ: ‘ಮದುವೆ ನೆಪದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಅಲ್ಲಿನ ಸಂಪ್ರದಾಯವನ್ನು ಪಾಲಿಸುವಂತೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಹಿಂದೂ ಧರ್ಮದ ವಿಶಾಲ್ ಕುಮಾರ್ ಎಂಬವವರು ಗದಗ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪರಿಶಿಷ್ಟ ಜಾತಿಯ ವಿಶಾಲ್ ಕುಮಾರ್ ಮತ್ತು ಮುಸಲ್ಮಾನರಾಗಿದ್ದ ತಹಸೀನ್ ಹೊಸಮನಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. 2024ರ ನವೆಂಬರ್ 26ರಂದು ವಿಶೇಷ ವಿವಾಹ ಕಾಯ್ದೆಯಡಿ ‘ರಿಜಿಸ್ಟರ್’ ಮದುವೆ ಆಗಿದ್ದರು. ಬಳಿಕ ತಹಸೀನ್ ಅವರ ತಾಯಿ ಬೇಗಂಬಾನು ಹೊಸಮನಿ, ಸೋದರ ಮಾವ ಇಬ್ರಾಹಿಂಸಾಬ್ ಧಾವಲ್ ಖಾನ್ ಎಂಬುವರು 2025ರ ಏಪ್ರಿಲ್ 25ರಂದು ಗದಗ ನಗರದ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಸಿದ್ದರು.
‘ನಾನು ಹಿಂದೂ ಎಂದು ಗೊತ್ತಿದ್ದರೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒತ್ತಾಯಿಸಿದ್ದರು. ನನಗೆ ಅರಿವು ಇಲ್ಲದಂತೆ ಹೆಸರನ್ನು ವಿರಾಜ್ ಎಂದು ಬದಲಿಸಿದ್ದರು. ಪ್ರತಿದಿನ ಮಸೀದಿಗೆ ಹೋಗಿ ನಮಾಜ್ ಮಾಡಬೇಕು. ತಲೆಗೆ ಟೊಪ್ಪಿ, ಕಣ್ಣಿಗೆ ಕಾಡಿಗೆ ಹಚ್ಚಬೇಕು ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು. ನಾನು ಮಸೀದಿಗೆ ಹೋಗಿ ನಮಾಜ್ ಮಾಡುವುದನ್ನು ಹುಡುಗಿಯ ಸೋದರ ಮಾವ ಮೊಬೈಲ್ನಲ್ಲಿ ಚಿತ್ರೀಕರಿಸಿ, ಅದನ್ನು ತಹಸೀನ್ಗೆ ಕಳುಹಿಸುತ್ತಿದ್ದ’ ಎಂದು ವಿಶಾಲ್ ಆರೋಪಿಸಿದ್ದಾರೆ.
‘ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ, ಮನೆಯವರಿಗೆ ವಿಷಯ ಗೊತ್ತಾಯಿತು. ಬಳಿಕ ಹಿಂದೂ ಸಂಪ್ರದಾಯದಂತೆ ಮದುವೆ ಆಗಬೇಕು ಎಂಬ ನಮ್ಮ ಪ್ರಸ್ತಾಪವನ್ನು ಅವರ ಕುಟುಂಬದವರು ನಿರಾಕರಿಸಿದರು. ನನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ತಹಸೀನ್ ಕುಟುಂಬಕ್ಕೆ ಇರುವುದು ಸ್ಪಷ್ಟ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವುದಾಗಿ ಆರೋಪಿಸಿ ದೂರು ಬಂದಿದ್ದು ಮೂವರ ವಿರುದ್ಧ ಪ್ರಕರಣ ದಾಲಿಸಿದ್ದು ವಿಚಾರಣೆ ಪ್ರಗತಿಯಲ್ಲಿದೆ.ರೋಹನ್ ಜಗದೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗದಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.