ADVERTISEMENT

ಗಜೇಂದ್ರಗಡ | ಕೂಲಿ ಅರಸಿ ಹೊರಟಿದ್ದವರು ಸೇರಿದ್ದು ಮಸಣಕ್ಕೆ

ಮನೆಗೆ ಆಧಾರವಾಗಿದ್ದವರು ಅಪಘಾತದಲ್ಲಿ ಅಸುನೀಗಿದ್ದರಿಂದ ಕುಟುಂಬದವರಿಗೆ ಬರಸಿಡಿಲು

ಶ್ರೀಶೈಲ ಎಂ.ಕುಂಬಾರ
Published 6 ಫೆಬ್ರುವರಿ 2026, 6:29 IST
Last Updated 6 ಫೆಬ್ರುವರಿ 2026, 6:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಜೇಂದ್ರಗಡ: ದಿನದ ದುಡಿಮೆಯಿಂದಲೇ ಜೀವನ ನಡೆಸುತ್ತಿದ್ದ ಕುಟುಂಬಗಳ ಸದಸ್ಯರು ಕೂಲಿ ಅರಸಿ ಬೇರೆ ಊರಿಗೆ ತೆರಳುತ್ತಿದ್ದ ವೇಳೆ ಉಸಿರು ಚೆಲ್ಲಿದ್ದಾರೆ.

ಗಜೇಂದ್ರಗಡದಿಂದ ರೋಣ ಸಂಪರ್ಕಿಸುವ ಜಿಗಳೂರು ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ 5.30ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪಟ್ಟಣದ ಶಿವಾಜಿ ಪೇಟೆಯ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಎಲ್ಲರ ಮನಃಕಲಕುವಂತಿದೆ.

ADVERTISEMENT

ಪಟ್ಟಣದ ಶಿವಾಜಿ ಪೇಟೆಯಲ್ಲಿ ಸುಮಾರು 500 ಕುಟುಂಬಳಿದ್ದು, ಅದರಲ್ಲಿ 300-350 ಕುಟುಂಬಗಳು ಗಾರೆ ಕೆಲಸ, ಬಾರ್‌ ಬೆಂಡಿಂಗ್‌, ಕೃಷಿ ಕೂಲಿ ಸೇರಿದಂತೆ ವಿವಿಧ ಕೂಲಿ ಕೆಲಸಗಳಿಗೆ ಹೋಗುತ್ತಾರೆ. ಬಹಳಷ್ಟು ಕುಟುಂಬಗಳು ಕಡು ಬಡತನದಲ್ಲಿದ್ದು, ದಿನದ ಕೂಲಿಯಿಂದ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಶಿವಾಜಿ ಪೇಟೆಯಿಂದ ಪ್ರತಿದಿನ ಬೇರೆ ಬೇರೆ ಊರುಗಳಿಗೆ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೃಷಿ ಕೆಲಸಕ್ಕೆ ಟಂಟಂ, ಕ್ರೂಸರ್‌ಗಳಲ್ಲಿ ಹೋಗುತ್ತಾರೆ. ಅದರಂತೆ ಗುರುವಾರ ಬೆಳಗಿನ ಜಾವ ರೋಣ ಪಟ್ಟಣದ ಜಮೀನೊಂದರಲ್ಲಿ ಕಡಲೆ ಕೀಳಲು ತೆರಳುತ್ತಿದ್ದಾಗ ರೋಣ ತಾಲ್ಲೂಕಿನ ಜಿಗಳೂರು ಗ್ರಾಮದ ಹತ್ತಿರ ಕ್ಯಾಂಟರ್-ಕ್ರಷರ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಕ್ರಷರ್‌ನಲ್ಲಿದ್ದ ಮರಿಂಬೀ ದಾದೆಸಾಬ ಹುನಗುಂದ (55), ಅನ್ನಪೂರ್ಣ ಚಂಗಳಿ (45), ಸುಜಾತಾ ಹೊಸಮನಿ (30) ಮೃತಪಟ್ಟಿದ್ದಾರೆ. ಉಳಿದ 12 ಕಾರ್ಮಿಕರು ಗಾಯಗೊಂಡಿದ್ದಾರೆ.

ಮೃತರೆಲ್ಲರೂ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದವರು. ಮರಿಂಬೀ ದಾದೆಸಾಬ ಹುನಗುಂದ 25 ವರ್ಷಗಳಿಂದ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಗಂಡ ಮೃತಪಟ್ಟಿದ್ದು, ಒಬ್ಬ ಮಗ ಇದ್ದಾರೆ. ಅವರು ಸಹ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ.

ಅನ್ನಪೂರ್ಣ ಚಂಗಳಿ ಅವರ ಪತಿ ಮೃತಪಟ್ಟಿದ್ದು, ಅವರು ಶಿವಾಜಿ ಪೇಟೆಯ ತಾಯಿ ಮನೆಯಲ್ಲಿ 23 ವರ್ಷದ ಮಗನೊಂದಿಗೆ ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದರು.

ಸುಜಾತಾ ಹೊಸಮನಿ ಅವರಿಗೆ ಪತಿ, ಮೂವರು ಪುತ್ರರಿದ್ದಾರೆ. ಈ ಮೂರು ಕುಟುಂಬಗಳು ಕಡು ಬಡತನದಲ್ಲಿದ್ದು, ಇವರುಗಳ ದಿನದ ದುಡಿಮೆಯಿಂದ ಬದುಕು ನಡೆಯುತ್ತಿತ್ತು. ಮನೆಗೆ ಆಧಾರವಾಗಿದ್ದವರು ಅಪಘಾತದಲ್ಲಿ ಅಸುನೀಗಿರುವುದು ಕುಟುಂಬದವರಿಗೆ ಸಿಡಿಲು ಬಡಿದಂತಾಗಿದೆ. ಮೃತ ಬಡ ಕುಟುಂಬಗಳಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನೆರವು ನೀಡಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

‘ಗಜೇಂದ್ರಗಡದ ಶಿವಾಜಿ ಪೇಟೆಯಿಂದ ಪ್ರತಿದಿನ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೃಷಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಬಹುತೇಕ ಬಡ ಕುಟುಂಬಗಳು ಇರುವುದರಿಂದ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಬಡ ಕುಟುಂಬ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕುʼ ಎಂದು ಶಿವಾಜಿ ಪೇಟೆಯ ನಿವಾಸಿ, ಕಾರ್ಮಿಕ ಮುಖಂಡ ಮಾರುತಿ ಚಿಟಗಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.