
ಮುಳಗುಂದ: ಇಲ್ಲಿಯ ರೈತ ಸಂಘದ ಸದಸ್ಯರು ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿ ಗದಗ-ಲಕ್ಷ್ಮೇಶ್ವರ ರಸ್ತೆಯ ಬಸಾಪೂರ ಕ್ರಾಸ್ ಬಳಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಗದಗ ಉಪವಿಭಾಗಧಿಕಾರಿ ಗಂಗಪ್ಪ ಭೇಟಿ ನೀಡಿ ರೈತರ ಮನವಿ ಸ್ವೀಕರಿಸಲು ಮುಂದಾದಾಗ ಜಿಲ್ಲಾಧಿಕಾರಿಗಲೇ ಬರಬೇಕು ಎಂದು ರೈತರು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ಥಳಕ್ಕೆ ಬಂದು ರೈತರ ಮನವಿ ಸ್ವಿಕರಿಸಿದರು.
ರೈತ ಮುಖಂಡ ಬಸವರಾಜ ಕರಿಗಾರ ಮಾತನಾಡಿ, ‘ಅತೀವೃಷ್ಟಿಯಿಂದ ಮುಂಗಾರು ಬೆಳೆಹಾನಿ ಸಂಭವಿಸಿ ರೈತರಿಗೆ ನಷ್ಟವಾಗಿದೆ. ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದು, ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಿಎಂ ಸಿದ್ದರಾಮಯ್ಯ ಬೆಂಬಲ ಬೆಲೆಯಲ್ಲಿ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಘೋಷಣೆ ಮಾಡಿದ್ದು, ಖರೀದಿ ಕೇಂದ್ರ ಆರಂಭಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭ, ಬೆಳೆ ವಿಮಾ ಪರಿಹಾರ, ಬೆಳೆಸಾಲ ಮನ್ನಾ ಸೇರಿದಂತೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೆರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ‘ಬೆಳೆ ನಷ್ಟ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿಸುವಂತೆ ಸಿಎಂ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಆದೇಶ ಬಂದ ತಕ್ಷಣವೇ ಕೇಂದ್ರ ತೆರೆಯಲಾಗುವದು. ಜಿಲ್ಲೆಯಲ್ಲಿ 82 ಸಾವಿರ ರೈತರ ಖಾತೆಗಳಿಗೆ ₹91 ಕೋಟಿ ಹಣ ಜಮೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಬಂದ ಪರಿಹಾರವನ್ನು ನ.27ರಿಂದ ಜಮೆ ಮಾಡಲಾಗುವುದು’
ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ, ಡಿವೈಎಸ್ಪಿ ಮುರ್ತುಜ್ ಖಾದರಿ, ಸಿಪಿಐ ಸಂಗಮೇಶ ಶಿವಯೋಗಿ, ರೈತ ಸಂಘದ ಮುಖಂಡರಾದ ಬಸವರಾಜ ಸಾಬಳೆ, ಮಹ್ಮದಲಿ ಶೇಖ, ಮಹಾಂತೇಶ ಗುಂಜಳ, ದೇವರಾಜ ಸಂಗನಪೇಟಿ, ಮುತ್ತಣ್ಣ ಪಲ್ಲೆದ, ದತ್ತಪ್ಪ ಯಳವತ್ತಿ, ಗುಡುಸಾಬ ಗಾಡಿ, ಗಂಗಪ್ಪ ಕತ್ತಿ, ದೇವಪ್ಪ ಅಣ್ಣಿಗೇರಿ, ಕಿರಣ ಕುಲಕರ್ಣಿ ಇದ್ದರು.