ADVERTISEMENT

ಈರುಳ್ಳಿಗೆ ಬೆಂಬಲ ಬೆಲೆ ನಿಗದಿಪಡಿಸಿ: ರೈತಪರ ಹೋರಾಟ ವೇದಿಕೆಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:52 IST
Last Updated 9 ಅಕ್ಟೋಬರ್ 2025, 2:52 IST
ಗದಗ ಜಿಲ್ಲಾ ರೈತಪರ ಹೋರಾಟ ವೇದಿಕೆ ಸದಸ್ಯರು ಈರುಳ್ಳಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಗದಗ ಜಿಲ್ಲಾ ರೈತಪರ ಹೋರಾಟ ವೇದಿಕೆ ಸದಸ್ಯರು ಈರುಳ್ಳಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು   

ಗದಗ: ‘ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ, ಪ್ರತಿ ಕ್ವಿಂಟಲ್‌ ಈರುಳ್ಳಿಗೆ ₹3,500ರಿಂದ ₹4,000 ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಗದಗ ಜಿಲ್ಲಾ ರೈತಪರ ಹೋರಾಟ ವೇದಿಕೆಯ ಸಂಚಾಲಕ ವೆಂಕಟೇಶ ಕುಲಕರ್ಣಿ ಆಗ್ರಹಿಸಿದರು.

ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಗದಗ ಜಿಲ್ಲಾ ರೈತ ಪರ ಹೋರಾಟ ವೇದಿಕೆಯಿಂದ ನಗರದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ಗದಗ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

‘ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ರೈತರು ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸರಿಯಾದ ದರ ಇಲ್ಲದೇ ಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿಯಿಂದಾಗಿ ಈರುಳ್ಳಿ ರೋಗಬಾಧೆಗೆ ತುತ್ತಾಗಿ ನಿರೀಕ್ಷಿತ ಇಳುವರಿಯೂ ಬಂದಿಲ್ಲ. ಗೊಬ್ಬರ, ಬೀಜ, ಕ್ರೀಮಿನಾಶಕ, ಕಸ ತೆಗೆಯುವುದು, ಕೊಯ್ಲು ಮಾಡಲು ಕಾರ್ಮಿಕರ ವೆಚ್ಚ ಸೇರಿದಂತೆ ಎಕರೆಗೆ ₹40 ಸಾವಿರದಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ಆದರೆ, ಈಗ ಬೆಲೆ ಇಲ್ಲದ ಕಾರಣ ಈರುಳ್ಳಿ ಬೆಳೆಗಾರ ನಲುಗುವಂತಾಗಿದೆ’ ಎಂದು ಹೇಳಿದರು.

ADVERTISEMENT

‘ಹಾಗಾಗಿ, ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಶೀಘ್ರವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಅತಿವೃಷ್ಟಿಯಿಂದ ಬೆಳೆಹಾನಿ ಅನುಭವಿಸಿದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಬೆಳೆಹಾನಿ ಪರಿಹಾರವನ್ನು ಒಬ್ಬ ರೈತನಿಗೆ ಕನಿಷ್ಠ 4 ಹೆಕ್ಟೇರ್‌ಗೆ ನಿಗದಿ ಮಾಡಬೇಕು’ ಎಂದು ಆಗ್ರಹಿಸಿದರು.

ಹಸಿರು ಸೇನೆ ಅಧ್ಯಕ್ಷ ಶಂಕರಗೌಡ ಜಯನಗೌಡರ, ಎನ್.ಎಂ.ಸಿದ್ದೇಶ, ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಅಧ್ಯಕ್ಷ ವೀರಣ್ಣ ಕಾಳಗಿ, ಬಸವರಾಜ, ಆದಪ್ಪ, ತಿಪ್ಪಣ್ಣ, ಸಿದ್ದಪ್ಪ ವಡ್ಡಟ್ಟಿ, ಮಲ್ಲಪ್ಪ ಮಠದ, ಬಸವರಾಜ ಪಲ್ಲೇದ, ಯಲ್ಲಪ್ಪ ಶಲವಡಿ, ಸಿದ್ದಪ್ಪ ಜಂಬಾಳಿ ಸೇರಿದಂತೆ ರಾಮೇನಹಳ್ಳಿ, ಪೇಠಾಲೂರ, ಡಂಬಳ –ಡೋಣಿ, ಕಂದಾಪೂರ, ಕಳಸಾಪೂರ ಹಾಗೂ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಯ ಹಲವಾರು ರೈತ ಮುಖಂಡರು ಇದ್ದರು.

ರಾಜ್ಯ ಸರ್ಕಾರವು ಈರುಳ್ಳಿ ಮೆಕ್ಕೆಜೋಳ ಹೆಸರು ಶೇಂಗಾ ಸೇರಿದಂತೆ ರೈತರು ಬೆಳೆಯುವ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಖರೀದಿ ಕೇಂದ್ರ ಪ್ರಾರಂಭಿಸಬೇಕು
–ವೆಂಕಟೇಶ ಕುಲಕರ್ಣಿ, ಸಂಚಾಲಕ ಜಿಲ್ಲಾ ರೈತಪರ ಹೋರಾಟ ವೇದಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.