ADVERTISEMENT

ಬೂಕನಬೆಟ್ಟ ಜಾತ್ರೆ | ಭಾರಿ ಆಕರ್ಷಣೆ: ಭರ್ಜರಿ ವ್ಯಾಪಾರ

ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಪ್ರದರ್ಶನ

ಹಿ.ಕೃ.ಚಂದ್ರು
Published 11 ಜನವರಿ 2026, 3:22 IST
Last Updated 11 ಜನವರಿ 2026, 3:22 IST
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ದನಗಳ ಜಾತ್ರೆಯಲ್ಲಿ ಹೋರಿಗಳನ್ನು ಕೊಳ್ಳುವ ರೈತರು ಅವುಗಳ ನಡಿಗೆ ನೋಡುತ್ತಿರುವುದು
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ದನಗಳ ಜಾತ್ರೆಯಲ್ಲಿ ಹೋರಿಗಳನ್ನು ಕೊಳ್ಳುವ ರೈತರು ಅವುಗಳ ನಡಿಗೆ ನೋಡುತ್ತಿರುವುದು   

ಹಿರೀಸಾವೆ: ಲಕ್ಷ, ಲಕ್ಷ ಬೆಲೆಯ ಕಾರು, ಬೈಕ್‌ಗಳಂತೆ ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಟ್ಟಿ, ಮಾರಾಟ ಮಾಡುತ್ತಿದ್ದಾರೆ.

ಈ ಜಾತ್ರೆಯಲ್ಲಿ ಉತ್ತಮ ಹಾಗೂ ಹೆಚ್ಚು ಮೊತ್ತದ ಹೋರಿಗಳನ್ನು ಸಾಕಿರುವ ರೈತ ಎಂಬ ಹೆಸರು ಗಳಿಸಲು, ತಿಂಗಳುಗಟ್ಟಲೆ ಬೆಣ್ಣೆ, ಹಾಲು, ಸೇರಿದಂತೆ ಪೌಷ್ಟಿಕ ಆಹಾರಗಳನ್ನು ತಿನ್ನಿಸಿ, ಪೋಷಣೆ ಮಾಡಿ, ಹೋರಿಗಳು ಮೆರವಣಿಗೆಯಲ್ಲಿ ಕರೆತಂದು, ಪ್ರದರ್ಶನ ಮಾಡುತ್ತಿದ್ದಾರೆ. 

ಹಲ್ಲುಗಳ ಲೆಕ್ಕದಲ್ಲಿ (ವಯಸ್ಸು) ಮೈಕಟ್ಟು, ಬಣ್ಣ, ನಡಿಗೆ, ಲಕ್ಷಣ, ಸುಳಿ ಸೇರಿದಂತೆ ಹಲವು ಗುಣಗಳ ಮೇಲೆ ಒಂದು ಜೊತೆಯ ಎತ್ತಗಳ ಬೆಲೆ ನಿಗದಿಯಾಗುತ್ತದೆ ಎನ್ನುತ್ತಾರೆ ರೈತರು.

ADVERTISEMENT

₹2 ಲಕ್ಷದಿಂದ ₹ 12 ಲಕ್ಷದವೆರೆಗಿನ ಎತ್ತುಗಳನ್ನು ಸಾಕಿರುವ ಹೊನ್ನಶೆಟ್ಟಿಹಳ್ಳಿಯ ಸಂದೀಪ್, ನಾಗಮಂಗಲ ತಾಲ್ಲೂಕಿನ ಹೂವಿನಹಳ್ಳಿ ಚಂದ್ರೇಗೌಡ, ಅಂತನಹಳ್ಳಿ ರವಿ, ಬೊಮ್ಮೇನಹಳ್ಳಿ ಗಿರೀಶ್, ಚನ್ನಹಳ್ಳಿಯ ಬಾಂಬೆ ಗೋವಿಂದ್, ಹಿರೀಸಾವೆ ಪುಟ್ಟ, ಬೂಕದ ಗುರು ಸೇರಿದಂತೆ ಹತ್ತು ಹಲವು ರೈತರು ತಮ್ಮ ಎತ್ತುಗಳನ್ನು ಪ್ರದರ್ಶನ ಮಾಡಿ, ವ್ಯಾಪಾರಕ್ಕೆ ಬಿಟ್ಟಿದ್ದಾರೆ. ಸೊರೇಕಾಯಿಪುರದ ಶರತ್ ಅವರ ಮಲೆನಾಡು ಗಿಡ್ಡ ತಳಿಯ ಹೋರಿಗಳು ಸಹ ಜಾತ್ರೆಯಲ್ಲಿವೆ.

ವಿಶೇಷ ಮೆರವಣಿಗೆ: ಮಂಗಳವಾದ್ಯ, ತಮಟೆ, ನಗಾರಿ, ನಾಸಿಕ್ ಡೋಲುಗಳ ಸೇರಿದಂತೆ ವಿವಿಧ ಕಲಾತಂಡಗಳು, ಡಿಜೆ ಹಾಡುಗಳು, ನೃತ್ಯದೊಂದಿಗೆ ಜಾತ್ರೆಯಲ್ಲಿ ರೈತರು ರಾಸುಗಳ ಮೆರವಣಿಗೆಗೆ ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ.

ಶಾಮಿಯಾನ, ಟೆಂಟ್ ಹಾಕಿಸಿ, ಅವುಗಳನ್ನು ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು, ಜಾನುವಾರುಗಳನ್ನು ಕಟ್ಟಿ, ಅವುಗಳನ್ನು ನಾಲ್ಕರಿಂದ, ಆರು ಜನರು ನೋಡಿಕೊಳ್ಳುತ್ತಾರೆ. ಜಾತ್ರೆಗೆ ಬಂದ ಜನರು ಈ ಎಲ್ಲ ರಾಸುಗಳ ದಾವಣಿಗೆ ಹೋಗಿ ನೋಡಿ, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾದರೂ, ರಾಸುಗಳ ಸಾಕುವ ಆಸಕ್ತಿ ಕಡಿಮೆಯಾಗಿಲ್ಲ. ಇಲ್ಲಿಂದ ಬೆರೆ ಜಾತ್ರೆಯಲ್ಲಿ ಎತ್ತುಗಳ ಪ್ರದರ್ಶನ ಮಾಡುವ ಆಸ್ತಕಿ ಇರುವ ರೈತರು, ದೊಡ್ಡ ಮೊತ್ತದ ದನಗಳನ್ನು ಕೊಳ್ಳುತ್ತಾರೆ ಎನ್ನುತ್ತಾರೆ ರೈತ ಹಿರೀಸಾವೆ ರಾಮಕೃಷ್ಣ.

10 ವರ್ಷಗಳಿಗೆ ಹೊಲಿಸಿದರೆ, ಈ ವರ್ಷ ಹಳ್ಳಿಕಾರ್‌ ತಳಿಯ ಸಾವಿರಾರು ಎತ್ತುಗಳು ಜಾತ್ರೆಗೆ ಬಂದಿವೆ. ವ್ಯಾಪಾರವು ಸಾಧರಣವಾಗಿ ನಡೆಯುತ್ತಿದೆ ಎಂದು ಆಯರಹಳ್ಳಿ ರಾಜಣ್ಣ ಅಭಿಪ್ರಾಯಪಟ್ಟರು.

ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ದನಗಳ ಜಾತ್ರೆಯಲ್ಲಿ ಎತ್ತುಗಳ ಹಲ್ಲು (ವಯಸ್ಸು) ಪರೀಕ್ಷೆ ಮಾಡುತ್ತಿರುವುದು
ಜಾತ್ರೆಯಲ್ಲಿ ಎರಡು ವರ್ಷದೊಳಗಿನ (ಹಲ್ಲು ಆಗದೆ ಇರುವ) ಹಳ್ಳಿಕಾರ್‌ ತಳಿಯ ಸಾಕುವ ಕರುಗಳಿಗೆ ಹೆಚ್ಚಿನ ಬೇಡಿಕೆ ಇದೆ
ದೊಡ್ಡಮನೆ ಮಂಜುನಾಥ್ ಹಿರೀಸಾವೆ ರೈತ
ಬೂಕನಬೆಟ್ಟದ ಜಾತ್ರೆ ರಾಸುಗಳಿಗೆ ಹೆಸರಾಗಿದೆ. ಸಂತೆಗಿಂತ ಈ ಜಾತ್ರೆಯಲ್ಲಿ ಸಣ್ಣ ಎತ್ತುಗಳಿಂದ ದೊಡ್ಡ ಎತ್ತುಗಳನ್ನು ನೋಡಬಹುದು
ದಿಲೀಪ್ ಕಡಂಬಗೆ ಎಮ್ಮೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.