ADVERTISEMENT

ಹಾಸನ: ವಾಸ್ತುಶಿಲ್ಪ ಸೌಂದರ್ಯಕ್ಕೆ ಮನಸೋತಿದ್ದ ಗಾಂಧಿ

ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ; ಹಳೆಯ ನೆನೆಪುಗಳನ್ನು ಮೆಲುಕುಹಾಕಿದ ಎಚ್‌.ಎಂ. ಶಿವಣ್ಣ

ಕೆ.ಎಸ್.ಸುನಿಲ್
Published 1 ಅಕ್ಟೋಬರ್ 2021, 19:30 IST
Last Updated 1 ಅಕ್ಟೋಬರ್ 2021, 19:30 IST
ಅರಸೀಕೆರೆಯ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ (ಕಸ್ತೂರಬಾ ಶಿಬಿರ) ಆವರಣದಲ್ಲಿರುವ ಮಹಾತ್ಮ ಗಾಂಧಿ ಚಿತಾಭಸ್ಮಾ ಸಮಾಧಿ.
ಅರಸೀಕೆರೆಯ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ (ಕಸ್ತೂರಬಾ ಶಿಬಿರ) ಆವರಣದಲ್ಲಿರುವ ಮಹಾತ್ಮ ಗಾಂಧಿ ಚಿತಾಭಸ್ಮಾ ಸಮಾಧಿ.   

ಹಾಸನ: ಮಹಾತ್ಮ ಗಾಂಧೀಜಿ ಅವರು 1924 ಮತ್ತು 1934ರಲ್ಲಿ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು.

ಮೊದಲ ಬಾರಿಗೆ ಅರಸೀಕೆರೆ ಹಾಸನ, ಬೇಲೂರು ಹಾಗೂ ಎರಡನೇ ಬಾರಿಗೆ ಸಕಲೇಶಪುರ, ಹೊಳೆನರಸೀಪುರಕ್ಕೆ ಭೇಟಿ ನೀಡಿದ್ದ ವೇಳೆ ಜಿಲ್ಲೆಯ ಬಿ.ಎನ್‌.ಬೋರಣ್ಣಗೌಡ, ಗೊರೂರು ರಾಮಸ್ವಾಮಿಅಯ್ಯಂಗಾರ್‌, ಡಿ.ಆರ್.ಕರೀಗೌಡ, ಗುಂಡಪ್ಪ ಗೌಡ, ಯಶೋಧರಮ್ಮ ದಾಸಪ್ಪ, ಡಿ.ಎನ್.ರಾಮಸ್ವಾಮಿ ಅವರು ಗಾಂಧಿ ಜತೆ ಸಂಪರ್ಕದಲ್ಲಿದ್ದರು.

ಬೆಂಗಳೂರಿನಿಂದ ರೈಲಿನಲ್ಲಿ ಅರಸೀಕೆರೆ ಮಾರ್ಗವಾಗಿ ಹಾಸನ ತಲುಪಿದ್ದ ಅವರು, ನಗರದ ಕೇಂದ್ರ ಗ್ರಂಥಾಲಯ ಎಡಭಾಗದ ಆವರಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಭಾಷಣ ಮಾಡಿ ಸ್ವಾತಂತ್ರ್ಯಸಂಗ್ರಾಮದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಿದ್ದರು. ಬಳಿಕ ವಾಣಿ ವಿಲಾಸ ಹಾಗೂ ಉತ್ತರ ಬಡಾವಣೆಶಾಲೆಗಳನ್ನು ವೀಕ್ಷಿಸಿದ್ದರು.

ADVERTISEMENT

ಬೇಲೂರಿನಲ್ಲಿ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಅರ್ಧ ಗಂಟೆ ಮಂಗವೊಂದು ಯುವತಿಯೊಬ್ಬಳಿಗೆ ಕೀಟಲೆ ಮಾಡುತ್ತಿರುವ ಶಿಲ್ಪವನ್ನೇ ನೋಡುತ್ತ ನಿಂತಿದ್ದರು. ದೇವಾಲಯ ವಾಸ್ತುಶಿಲ್ಪ ಸೌಂದರ್ಯಕ್ಕೆ ಮನಸೋತ್ತಿದ್ದ ಗಾಂಧೀಜಿ ಇದನ್ನೆಲ್ಲ ವೀಕ್ಷಿಸಲು ಒಂದು ದಿನವಾದರೂಸಾಲುವುದಿಲ್ಲ. ಮತ್ತೊಮ್ಮೆ ಇತ್ತ ಬಂದಾಗ ದೇವಸ್ಥಾನ ವೀಕ್ಷಣೆಗೆ ಒಂದು ದಿನ ಮೀಸಲಿರಿಸುತ್ತೇನೆಎಂದಿದ್ದರು.

ಹರಿಕತೆ ದಾಸರಾದ ಕೇಶವದಾಸರು ನಿಧಿ ಸಂಗ್ರಹ ಮಾಡಿಕೊಡುವುದಾಗಿ ಗಾಂಧೀಜಿ ಅವರನ್ನುಬೇಲೂರಿಗೆ ಕರೆಸಿಕೊಂಡು, ₹500 ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದರು. ಹಾಸನ ಹಾಗೂಹೊಳೆನರಸೀಪುರದಲ್ಲೂ ಹಣ ಸಂಗ್ರಹಿಸಿ ಕೊಡಲಾಗಿತ್ತು.

‘ಸ್ವಾತಂತ್ರ್ಯ ಸಂಗ್ರಾಮ ಮತ್ತು ಅಸಹಕಾರ ಚಳವಳಿ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಾಸನಕ್ಕೆ ಎರಡು ಬಾರಿ ಗಾಂಧೀಜಿ ಬಂದಿದ್ದರು. ಅವರ ಒಡನಾಡಿಗಳು ಹಣ ಸಂಗ್ರಹಿಸಿ ದೇಣಿಗೆ ರೂಪದಲ್ಲಿಸ್ವಾತಂತ್ರ್ಯ ಚಳವಳಿಗೆ ನೀಡಿದ್ದರು. ತುಮಕೂರಿನಲ್ಲಿ ಓದುತ್ತಿದ್ದ ‌ಗೊರೂರು ರಾಮಸ್ವಾಮಿಅಯ್ಯಂಗಾರ್ ಅವರ ಮಗ ರಾಮಚಂದ್ರ ಬ್ರಿಟಿಷರ ಗುಂಡಿಗೆ ಬಲಿಯಾದ. ಆಗ ಗಾಂಧೀಜಿ, ‘ನಿನ್ನಮಗ ದೇಶಕ್ಕಾಗಿ ಹುತಾತ್ಮನಾದ. ನೀನು ಹೋರಾಟ ಮುಂದುವರೆಸಬೇಕು’ ಎಂದು ರಾಮಸ್ವಾಮಿಅವರಿಗೆ ಪತ್ರ ಬರೆದಿದ್ದರು. ಅದೇ ರೀತಿ ಬೋರಣ್ಣ ಗೌಡ ಅವರಿಗೂ ‘ದೇಶಕ್ಕೆ ನಿನ್ನ ಸೇವೆ ಬೇಕಾಗಿದೆ.ಓದು ನಿಲ್ಲಿಸಿ ಚಳವಳಿಯಲ್ಲಿ ಭಾಗವಹಿಸಬೇಕು’ ಎಂದು ಪತ್ರ ಬರೆದಿದ್ದರು’ ಎಂದು ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಾಂಧೀಜಿ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರೂ ಅವರನ್ನು ನೋಡುವ ಭಾಗ್ಯ ನನಗೆ ಸಿಗಲಿಲ್ಲ.ಬೆಂಗಳೂರಿನಿಂದ ರೈಲಿನಲ್ಲಿ ಅರಸೀಕೆರೆಗೆ ಭೇಟಿ ನೀಡಿ, ಹೊಳೆನರಸೀಪುರ ಮಾರ್ಗವಾಗಿಮೈಸೂರಿನ ಬದನವಾಳುವಿಗೆ ಹೋಗಿದ್ದರು. ಅಲ್ಲಿನ ಖಾದಿ ಕೇಂದ್ರ ವೀಕ್ಷಿಸಿ, ಸ್ವದೇಶಿ ವಸ್ತುಬಳಸುವಂತೆ ಪ್ರಚಾರ ಮಾಡಿದ್ದರು’ ಎಂದು ಸ್ವಾತಂತ್ರ್ಯ ಹೋರಾಟಗಾರ 90 ವರ್ಷದಎಚ್‌.ಎಂ.ಶಿವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.