ADVERTISEMENT

ಹೊಯ್ಸಳೇಶ್ವರ ದೇವಾಲಯ: ಶೌಚಾಲಯ ನವೀಕರಿಸಿದ ಪಂಚಾಯಿತಿ

ಎಚ್.ಎಸ್.ಅನಿಲ್ ಕುಮಾರ್
Published 27 ಅಕ್ಟೋಬರ್ 2025, 2:04 IST
Last Updated 27 ಅಕ್ಟೋಬರ್ 2025, 2:04 IST
<div class="paragraphs"><p>ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದಲ್ಲಿ ಜೀರ್ಣೋದ್ದಾರವಾಗಿರುವ ಸುಲಭ ಶೌಚಾಲಯ.</p><p></p></div>

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದಲ್ಲಿ ಜೀರ್ಣೋದ್ದಾರವಾಗಿರುವ ಸುಲಭ ಶೌಚಾಲಯ.

   

ಹಳೇಬೀಡು: ಹಲವು ವರ್ಷದಿಂದ ಪಾಳು ಬಿದ್ದಿದ್ದ ಇಲ್ಲಿನ ಹೊಯ್ಸಳೇಶ್ವರ ದೇವಾಲಯ ಪ್ರವೇಶ ದ್ವಾರದ ಬಳಿಯ ಸುಲಭ ಶೌಚಾಲಯಕ್ಕೆ ಹಳೇಬೀಡು ಗ್ರಾಮ ಪಂಚಾಯಿತಿ ನವೀಕರಿಸಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ADVERTISEMENT

ವಾಹನ ಪಾರ್ಕಿಂಗ್ ಜಾಗದಲ್ಲಿ ಶೌಚಾಲಯ ಇಲ್ಲದೇ ಪ್ರವಾಸಿಗರು ಪರದಾಡುವಂತಾಗಿತ್ತು. ಹೊಸ ಶೌಚಾಲಯ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಪಂಚಾಯಿತಿ ಸಿದ್ದತೆ ನಡೆಸಿತ್ತು. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ 1957 ಪುರಾತತ್ವ ಅಧಿನಿಯಮ ಅಡ್ಡಿ ಆಯಿತು.

ಸ್ಮಾರಕದಿಂದ 100 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂಬ ನಿಯಮ ಜಾರಿಯಲ್ಲಿ ಇರುವುದರಿಂದ ಹೊಸ ಶೌಚಾಲಯ ನಿರ್ಮಿಸಲು ಸಾಧ್ಯವಾಗಲಿಲ್ಲ. ಪಾಳು ಬಿದ್ದಿದ್ದ ಶೌಚಾಲಯವನ್ನು ಇದೀಗ ಗ್ರಾಮ ಪಂಚಾಯಿತಿ ವತಿಯಿಂದ ದುರಸ್ತಿ ಮಾಡಲಾಗಿದೆ. 30 ವರ್ಷಗಳಿಂದ ಉಪಯೋಗ ಬಾರದೇ ನಶಿಸುವ ಹಂತದಲ್ಲಿದ್ದ ಶೌಚಾಲಯ ಹೊಸ ಕಟ್ಟಡದಂತೆ ಕಂಗೊಳಿಸುತ್ತಿದೆ.

ಹೊಸ ಶೌಚಾಲಯದಲ್ಲಿ ಮಹಿಳೆ, ಪುರುಷರ ಪ್ರತ್ಯೇಕ ವಿಭಾಗ ಮಾಡಲಾಗಿದೆ. ನೀರಿನ ವ್ಯವಸ್ಥೆ ಮಾಡಲಾಗಿದ್ದು, ಒಳ ಭಾಗದಲ್ಲಿ ಆಧುನಿಕತೆಗೆ ತಕ್ಕಂತೆ ಪರಿಕರಗಳ ಜೋಡಣೆ ಮಾಡಲಾಗಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ಒಮ್ಮತ ಸೂಚಿಸಿದ್ದರಿಂದ ಕೆಲಸ ಸುಗಮವಾಯಿತು. ಪಿಡಿಒ ಹಾಗೂ ಸಿಬ್ಬಂದಿ ಸಹ ಕಾರ್ಯಪ್ರವೃತ್ತರಾಗಿದ್ದರಿಂದ ಶೌಚಾಲಯ ಮರುಜೀವ ಪಡೆದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ತಿಳಿಸಿದರು.

15 ನೇ ಹಣಕಾಸು ಯೋಜನೆಯ ಎರಡು ವರ್ಷದ ಅನುದಾನವನ್ನು ಕಾಯ್ಡಿರಿಸಿ ಶೌಚಾಲಯ ಪುನರುಜ್ಜೀವನಗೊಳಿಸಲಾಗಿದೆ. ₹ 10 ಲಕ್ಷ ವೆಚ್ಚವಾಗಿದೆ. ಹೊಯ್ಸಳೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರ ವಾಹನ ಪಾರ್ಕಿಂಗ್ ಸ್ಥಳದಲ್ಲಿಯೇ ಶೌಚಾಲಯ ಇರುವುದರಿಂದ ಪ್ರವಾಸಿಗರಿಗೆ ಉಪಯುಕ್ತವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸಿಗರ ಬವಣೆ ಕೊಂಚ ಕಡಿಮೆ ಆದಂತಾಗಿದೆ. ನಮ್ಮ ಅವಧಿಯಲ್ಲಿ ಶೌಚಾಲಯಕ್ಕೆ ಮರುಜೀವ ನೀಡಿರುವುದು ಸಂತಸ ತಂದಿದೆ ಎಂದು ಮಧು ಹೇಳಿದರು.

‘ಸರ್ಕಾರ ಗಮನಹರಿಸಲಿ’

‘ಹಳೇಬೀಡು ಈಗ ಯುನೆಸ್ಕೊ ವಿಶ್ವಪರಂಪರೆಯ ತಾಣವಾಗಿದೆ. ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಶೌಚಾಲಯ ವ್ಯವಸ್ಥೆ, ಸ್ವಚ್ಛತೆ ಮೊದಲಾದ ಮೂಲ ಸೌಲಭ್ಯ ಕೈಗೊಳ್ಳುವುದು ಗ್ರಾಮ ಪಂಚಾಯಿತಿಯ ಹೊಣೆಗಾರಿಕೆ. ವಿಶ್ವಪರಂರೆ ತಾಣ ಎಂದು ಘೋಷಣೆ ಮಾಡಿ ಎರಡೂ ವರ್ಷ ಕಳೆದರೂ ಯುನೆಸ್ಕೊದಿಂದ ಅನುದಾನ ಬಂದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಳೇಬೀಡು ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಬೇಕಾಗಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಎಚ್.ಆರ್. ಮಧು ಹೇಳಿದರು.

ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಕೊಟ್ಯಂತರ ರೂಪಾಯಿ ಯೋಜನೆ ಕೈಗೊಳ್ಳುವುದು ಸುಲಭ ಸಾಧ್ಯವಿಲ್ಲ. ಪ್ರವಾಸಿ ತಾಣ ಅಭಿವೃದ್ದಿ ಯೋಜನೆಯಡಿ ಹಳೇಬೀಡಿಗೆ ಕನಿಷ್ಠ ₹ 10 ಕೋಟಿ ವೆಚ್ಚದ ಯೋಜನೆ ರೂಪಿಸಬೇಕು. ಕೇದಾರೇಶ್ವರ ದೇವಾಲಯ, ಜೈನ ಬಸದಿ, ದ್ವಾರಸಮುದ್ರ ಕೆರೆ ಬಳಿ ಶೌಚಾಲಯಗಳ ನಿರ್ಮಾಣ ಆಗಬೇಕು. ಸ್ನಾನಗೃಹ ಹಾಗೂ ಹೆಚ್ಚುವರಿ ವಸತಿಗೃಹ ನಿರ್ಮಾಣ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯುನೆಸ್ಕೋ ತಂಡ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಪ್ರವಾಸಿಗರ ಅನುಕೂಲಕ್ಕೆ ಅಭಿವೃದ್ದಿ ಕೆಲಸ ಕೈಗೊಳ್ಳಲು ಪುರಾತತ್ವ ಇಲಾಖೆ ಕೈಜೋಡಿಸಬೇಕು. ದೇವಾಲಯ ಸುತ್ತ ಇರುವ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚುವರಿ ಶೌಚಾಲಯ ನಿರ್ಮಿಸಲು ಇಲಾಖೆ ಸಹಭಾಗಿತ್ವದ ಅಗತ್ಯವಿದೆ.
ಎಚ್.ಆರ್.ಮಧು, ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.