ADVERTISEMENT

ಹಾಸನ | 24 ಕೇಂದ್ರಗಳಲ್ಲಿ ರಾಗಿ ಖರೀದಿ ಆರಂಭ: ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:09 IST
Last Updated 3 ಮಾರ್ಚ್ 2026, 4:09 IST
<div class="paragraphs"><p>ಹಾಸನದ ರಾಗಿ ಖರೀದಿ ಕೇಂದ್ರದಲ್ಲಿ ಜರಡಿ ಹಿಡಿಯುವುದನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವೀಕ್ಷಿಸಿದರು.&nbsp;</p></div><div class="paragraphs"><ul><li><p><br></p></li></ul></div>

ಹಾಸನದ ರಾಗಿ ಖರೀದಿ ಕೇಂದ್ರದಲ್ಲಿ ಜರಡಿ ಹಿಡಿಯುವುದನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವೀಕ್ಷಿಸಿದರು. 


   

ಹಾಸನ: ಜಿಲ್ಲೆಯ ಪ್ರಮುಖ ಬೆಳೆ ರಾಗಿ ಖರೀದಿ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು, ಎಪಿಎಂಸಿಯಲ್ಲಿ ಆರಂಭಗೊಂಡಿರುವ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಎಪಿಎಂಸಿ ಪ್ರಾಂಗಣದಲ್ಲಿದ್ದ ರೈತರಿಂದ ಸಮಸ್ಯೆಗಳನ್ನು ಆಲಿಸಿದ ಅವರು, ರಾಗಿ ಗುಣಮಟ್ಟ ಹಾಗೂ ತೂಕದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಒಟ್ಟು 26 ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 24 ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಸಕಲೇಶಪುರ ಹಾಗೂ ಆಲೂರು ಕೇಂದ್ರಗಳಲ್ಲಿ ಇನ್ನೂ ಖರೀದಿ ಆರಂಭವಾಗಿಲ್ಲ. ಅರಸೀಕೆರೆಯಲ್ಲಿ ಅತಿ ಹೆಚ್ಚು 10 ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್ 31 ರವರೆಗೆ ರಾಗಿ ಖರೀದಿ ನಡೆಯಲಿದ್ದು, ಅಗತ್ಯವಿದ್ದಲ್ಲಿ ದಿನಾಂಕ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

ಪರಿಶೀಲನೆ ವೇಳೆ ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದರು. ರಾಗಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹೆಚ್ಚುವರಿ ವೇಸ್ಟೇಜ್ ಆಗುತ್ತಿದೆ. ಮೂಟೆಗಳನ್ನು ಹೊರುವ ಹಮಾಲಿಗಳು ಹೆಚ್ಚಿನ ದರ ಕೇಳುತ್ತಿದ್ದಾರೆ. ರೈತರು ಗಂಟೆಗಟ್ಟಲೆ ಕಾಯಬೇಕಾಗಿದೆ ಎಂಬ ದೂರುಗಳು ಕೇಳಿಬಂದವು. ಅರಕಲಗೂಡಿನಲ್ಲಿ ಸ್ವಚ್ಛತೆ ವೇಳೆ ಕೆಳಗೆ ಬೀಳುವ ರಾಗಿಯಿಂದ ರೈತರಿಗೆ ನಷ್ಟವಾಗುತ್ತಿರುವುದನ್ನೂ ಅಧಿಕಾರಿಗಳ ಗಮನಕ್ಕೆ ತರಲಾಯಿತು.

ಈ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಎಪಿಎಂಸಿ ಕಾರ್ಯದರ್ಶಿ, ಆಹಾರ ಶಿರಸ್ತೇದಾರರು, ಉಪ ತಹಶೀಲ್ದಾರ್ ಹಾಗೂ ಆಹಾರ ನಿಗಮದ ಸಿಬ್ಬಂದಿ ಇರಲಿದ್ದು, ಪ್ರತಿ ಖರೀದಿ ಕೇಂದ್ರದಲ್ಲೂ ಪಾರದರ್ಶಕವಾಗಿ ವ್ಯವಹಾರ ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಖರೀದಿಯಾದ ರಾಗಿಯನ್ನು ಗೋದಾಮುಗಳಿಗೆ ಸಾಗಿಸುವ ಟ್ರಕ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಯಾವುದೇ ಅಕ್ರಮ ನಡೆಯದಂತೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.

ಸರ್ಕಾರದ ನಿಯಮಾನುಸಾರ ಒಬ್ಬ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ರಾಗಿ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ ಏಜೆನ್ಸಿಯವರು ಮೂರು ವಾಹನಗಳನ್ನು ಒದಗಿಸಿದ್ದು, ಐದು ವಾಹನಗಳ ಅಗತ್ಯವಿದೆ. ವಾಹನಗಳ ಕೊರತೆಯಿಂದ ರೈತರು ಕಾಯುವ ಪರಿಸ್ಥಿತಿ ನಿರ್ಮಾಣ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಹಮಾಲಿಗಳ ವಿಚಾರದಲ್ಲೂ ಮಧ್ಯಪ್ರವೇಶಿಸಿ ಸಮಾಧಾನಕರ ಪರಿಹಾರ ಕಂಡುಕೊಳ್ಳಲಾಗಿದೆ. ರೈತರು ಹಾಗೂ ಹಮಾಲಿಗಳ ಹಿತದೃಷ್ಟಿಯಿಂದ ಪರಸ್ಪರ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಎಪಿಎಂಸಿ ಪರಿಶೀಲನೆ ಬಳಿಕ ನಗರ ಸಮೀಪದ ರಾಗಿ ಹಾಗೂ ಇತರೆ ಆಹಾರ ಸಂಗ್ರಹಿಸುವ  ಉಗ್ರಾಣಕ್ಕೆ  ಭೇಟಿ ನೀಡಿದರು. ಆಹಾರ ಇಲಾಖೆಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಈವರೆಗೆ 64,728 ಕ್ವಿಂಟಲ್‌ ರಾಗಿ ಖರೀದಿ

ಜಿಲ್ಲೆಯ 24 ಖರೀದಿ ಕೇಂದ್ರಗಳಲ್ಲಿ ಒಟ್ಟು 46,258 ರೈತರು ನೋಂದಣಿ ಮಾಡಿಕೊಂಡಿದ್ದು, 10,85,494 ಕ್ವಿಂಟಲ್ ರಾಗಿ ಖರೀದಿಗೆ ನೋಂದಣಿ ಆಗಿದೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.

ಫೆ. 27 ವರೆಗೆ 2,440 ರೈತರಿಂದ 64,728 ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಖರೀದಿ ಪ್ರಕ್ರಿಯೆ ರೈತರ ನೋಂದಣಿ ಜ್ಯೇಷ್ಠತೆ ಆಧಾರದ ಮೇಲೆ ನಡೆಯುತ್ತಿದ್ದು, ತಮ್ಮ ಜ್ಯೇಷ್ಠತೆ ಬರುವ ಎರಡು ದಿನಗಳ ಮುಂಚಿತವಾಗಿ ಖರೀದಿ ಕೇಂದ್ರದಿಂದ ದೂರವಾಣಿ ಮೂಲಕ ಮಾಹಿತಿ ನೀಡಲಾಗುತ್ತದೆ. ಅಂತಹ ರೈತರು ಮಾತ್ರ ರಾಗಿಯನ್ನು ಕೇಂದ್ರಗಳಿಗೆ ತರಲು ಸೂಚಿಸಲಾಗಿದೆ ಎಂದರು.

ಖರೀದಿಸಲಾದ ರಾಗಿಯನ್ನು ಜರಡಿ ಮೂಲಕ ಸ್ವಚ್ಛಗೊಳಿಸಿ, ಸರ್ಕಾರ ಒದಗಿಸಿದ 50 ಕೆ.ಜಿ. ಗೋಣಿ ಚೀಲಗಳಲ್ಲಿ ತುಂಬಿ, ರಾಜ್ಯ ಉಗ್ರಾಣ ನಿಗಮದಲ್ಲಿ ದಾಸ್ತಾನು ಮಾಡಲಾಗುತ್ತದೆ. ರಾಗಿಯ ತೇವಾಂಶ ಪರೀಕ್ಷಿಸಿದ ನಂತರ ಉತ್ತಮ ಗುಣಮಟ್ಟದ ರಾಗಿಯನ್ನೇ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇರುವ ಒಟ್ಟು 8 ರಾಜ್ಯ ಉಗ್ರಾಣ ನಿಗಮಗಳಲ್ಲಿ ಈವರೆಗೆ ಖರೀದಿಸಿದ ರಾಗಿಯನ್ನು ಸಂಗ್ರಹಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.