ಅರಕಲಗೂಡು: ‘ನಾನು ಹಣಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದವನಲ್ಲ. ತಾಲ್ಲೂಕಿನ ಅಭಿವೃದ್ಧಿ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ನನ್ನ ಮುಖ್ಯ ಗುರಿ’ ಎಂದು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಂ. ಟಿ. ಕೃಷ್ಣೆಗೌಡ ತಿಳಿಸಿದರು.
ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ‘ಮುಂದಿನ ರಾಜಕೀಯ ನಿಲುವು’ ಕುರಿತು ಚರ್ಚಿಲು ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ರಾಜಕೀಯ ನಡೆ ಕುರಿತು ಎಲ್ಲರ ಅಭಿಪ್ರಾಯ ಪಡೆದು , ಒಂದರೆರಡು ದಿನದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದರಿಂದ ಕೆಪಿಸಿಸಿ ಕಚೇರಿಗೆ ಹೋಗಿದ್ದೆ. ಕಾಂಗ್ರೆಸ್ ಸೇರಲು ಕೆಪಿಸಿ ಕಚೇರಿ ಬಾಗಿಲು ಕಾಯುತ್ತಿರಲಿಲ್ಲ. ಜನರ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ, ಅಧಿಕಾರ ನೀಡುವಂತೆ ಕೇಳಿದವನಲ್ಲ. ಹಣಕ್ಕಾಗಿ ರಾಜಕೀಯ ಬಂದಿಲ್ಲ. ನಾನು ಗಳಿಸಿದ ಹಣದಿಂದಲೇ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ ಎಂದರು.
ತಾಲ್ಲೂಕಿನಲ್ಲಿ 800 ಅಡಿ ಆಳಕ್ಕೆಕೊಳವೆ ಬಾವಿ ಕೊರೆಯಿಸಿದರೂ ನೀರು ಬರುತ್ತಿಲ್ಲ. ಆದರೆ ನಮ್ಮ ಜಮೀನಿನಲ್ಲಿ 7 ಕೆರೆಗಳನ್ನು ಕಟ್ಟಿದ್ದು ಎಲ್ಲಿ ಬೋರ್ವೆಲ್ ಕೊರೆಯಿಸಿದರೂ 350 ಅಡಿಗೆ ನೀರು ಬರುತ್ತದೆ. ತಾಲ್ಲೂಕಿನಾದ್ಯಂತ ಇದೇ ರೀತಿ ಅಂತರ್ಜಲ ಮಟ್ಟ ಏರಿಸಲುಮ ಮೊದಲ ಆದ್ಯತೆ. ಸಾವಿರಾರು ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಬೃಹತ್ ಮಟ್ಟದ ಹಾಲು ಉತ್ಪಾದನಾ ಕೇಂದ್ರ ತೆರೆದು ಯುವಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕೆಂಬ ಉದ್ದೇಶವಿದೆ ಎಂದರು.
ಮುಖಂಡರಾದ ರವಿಕುಮಾರ್, ಬಿಳಿಗುಲಿ ರಾಮೇಗೌಡ, ಎಂ.ಡಿ. ಹಾಷಂ, ರಾಜೇಗೌಡ, ವೆಂಕಟೇಶ್, ಕಾಂತರಾಜ್, ಹೇಮಂತ್ ಕುಮಾರ್, ಬೊಮ್ಮನಹಳ್ಳಿ ಕೃಷ್ಣ, ಬಸವರಾಜ್, ಪುಟ್ಟಸ್ವಾಮಿ ಮಾತನಾಡಿ, ಕೃಷ್ಣೇಗೌಡ ವರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಹಾಗೂ ಕಾರ್ಯಕರ್ತರು ಬದ್ದರಾಗಿರುವುದಾಗಿ ಹೇಳಿದರು. ಮುಖಂಡರಾದ ಮಧುಕರ್, ಲೋಕೇಶ್, ರಮೇಶ್, ದೇವರಾಜೇಗೌಡ, ಶ್ರೀಶೈಲಾ, ಗೌರಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.