ಬೇಲೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಬಗ್ಗೆ ಏಕವಚನದಲ್ಲಿ ಮಾತಾನಾಡಿರುವುದನ್ನು ಖಂಡಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಮುಖಂಡ ಹಾಗೂ ಪುರಸಭೆ ಸದಸ್ಯ ಜಿ.ಶಾಂತಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಯಾವ ಶಿವರಾಂಗೂ ಕೇರ್ ಮಾಡುವುದಿಲ್ಲ ಎಂದಿರುವುದು ಸರಿಯಲ್ಲ. ಮಾಜಿ ಸಚಿವ ಬಿ.ಶಿವರಾಂ, ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಶಶಿಧರ್ಗೆ ಮಾತು ಕೊಟ್ಟಂತೆ ನಿಗಮ ಮಂಡಳಿಯಲ್ಲಿ ಅವಕಾಶ ಕೊಡಬೇಕೆಂದು ಒತ್ತಾಯ ಮಾಡಿ, ಶಾಸಕ ಶಿವಲಿಂಗೇಗೌಡರನ್ನು ಲೋಕಸಭಾ ಚುನಾವಣೆ ಅಭ್ಯರ್ಥಿ ಮಾಡಬೇಕೆಂದು ಹೆಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಚುನಾವಣೆಗೆ ಉಸ್ತುವಾರಿಯಾಗಿ ಒಬ್ಬರನ್ನು ನೇಮಿಸಿದ್ದಾರೆ. ಅವರು ಮತದಾರರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ತೆಗೆದುಕೊಳ್ಳಬೇಕು. ಎಲ್ಲೋ ಕುಳಿತು ಮಾಹಿತಿ ಪಡೆಯುವುದು ಸರಿಯಲ್ಲ ಎಂದಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ವಿರುದ್ಧ ಏನೂ ಮಾತನಾಡಿಲ್ಲ. ಆದರೂ ಸಚಿವರು ಕಾರ್ಯಕ್ರಮವೊಂದರಲ್ಲಿ ಬಿ.ಶಿವರಾಂ ನನಗೆ ಲೆಕ್ಕಕಿಲ್ಲ. ಏನು ಬೇಕಾದರೂ ಮಾಡುತ್ತೇನೆ. ಯಾರೂ ಕೇಳೋ ಹಕ್ಕಿಲ್ಲ ಎಂದಿದ್ದಾರೆ. ಶಿವರಾಂ ಅವರು ಚುನಾವಣೆಯಲ್ಲಿ ಸೋತರೂ ಕುಗ್ಗದೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಜನರೊಂದಿಗೆ ಕಷ್ಟ ಸುಖಕ್ಕೆ ಭಾಗಿಯಾಗುತ್ತಿದ್ದಾರೆ. ರಾಜಣ್ಣ ಆಡಿದ ಮಾತಗಳು ಕಾರ್ಯಕರ್ತರಿಗೆ ಸರಿ ಎನಿಸಿಲ್ಲ. ಉಸ್ತುವಾರಿ ಸಚಿವರು ತಮ್ಮ ಮಾತನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಂಗನಾಥ್ ಮಾತನಾಡಿ, ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಬಿ.ಶಿವರಾಂ ಅವರ ಕೊಡುಗೆ ಬಹಳಷ್ಟಿದೆ ಎಂದರು. ಕಾಂಗ್ರೆಸ್ ಹಿಂದುಳಿದ ವರ್ಗದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ (ಪಾಪು) ಮಾತನಾಡಿದರು. ಸನ್ಯಾಸಿಹಳ್ಳಿ ಗ್ರಾ.ಪಂ ಸದಸ್ಯ ಶಿವೇಗೌಡ, ಪುರಸಭೆ ಸದಸ್ಯ ಭರತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.