ADVERTISEMENT

ಮೇಕೆದಾಟು ಯೋಜನೆ: ಚುನಾವಣಾ ಗಿಮಿಕ್‌: ಎಚ್.ಡಿ.ರೇವಣ್ಣ ಟೀಕೆ

ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆ ಏನಾಯಿತು? ರೇವಣ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 15:52 IST
Last Updated 27 ಡಿಸೆಂಬರ್ 2021, 15:52 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆ ಚುನಾವಣಾ ಗಿಮಿಕ್
ಎಂದು ಶಾಸಕ ಎಚ್.ಡಿ.ರೇವಣ್ಣ ಟೀಕಿಸಿದರು.

‘ಹಿಂದೆ ಕಾಂಗ್ರೆಸ್‌ನವರು ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆ ಎಂದು ಹೇಳಿ ಪಾದಯಾತ್ರೆ ಮಾಡಿದ್ದರು. ಅಧಿಕಾರಕ್ಕೆ ಬಂದರೆ ವರ್ಷಕ್ಕೆ ₹10 ಸಾವಿರ ಕೋಟಿಯಂತೆ ಐದು ವರ್ಷಕ್ಕೆ₹50 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದರು. ಎಷ್ಟು ಕೊಟ್ಟಿದ್ದಾರೆ ಎಂಬುದುಅವರೇ ತಿಳಿಸಲಿ. ಉತ್ತರ ಕರ್ನಾಟಕ ಬಿಟ್ಟು ಈಗ ಮೇಕೆದಾಟು ಹಿಡಿದುಕೊಂಡಿದ್ದಾರೆ. ಯಾವಮುಖ ಇಟ್ಟುಕೊಂಡು ಪಾದಯಾತ್ರೆ ಹೊರಟಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿವಾಗ್ದಾಳಿ ನಡೆಸಿದರು.

‘ನಾನು ಇಂಧನ ಸಚಿವನಾಗಿದ್ದಾಗಲೇ ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್ ಕೆ.ಸಿ.ರೆಡ್ಡಿಅವರ ಜತೆ ಚರ್ಚಿಸಿ 500 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಯೋಜನೆ ರೂಪಿಸಲಾಗಿತ್ತು.ಗಿಮಿಕ್ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಒಂದು ದಿನ ದಂಡ ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿ ಅವರು ದೆಹಲಿಗೆ ನಿಯೋಗಕರೆದೊಯ್ದು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಹಾಗೂ ಕೋರ್ಟ್‌ಗೆ ವಾಸ್ತವಾಂಶಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ಮೂರನೇ ಅಲೆ ಆರಂಭವಾಗುವ ಮುನ್ನವೇ ಸಮುದಾಯ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಹಾಸಿಗೆ, ಔಷಧ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮತಾಂತರ ನಿಷೇಧ ಮಸೂದೆಯನ್ನುಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲೇ ರೂಪಿಸಲಾಗಿತ್ತು. ಈಗ ಬಿಜೆಪಿಯವರು ಕಾಯ್ದೆ ಮಾಡಲು ಮುಂದಾಗಿದ್ದಾರೆ.ಕಾಂಗ್ರೆಸ್‌ನವರು ಕ್ರಿಶ್ಚಿಯನ್ನರಿಗೆ ಟೋಪಿ ಹಾಕಿದರು. ಇನ್ನು ಮುಸ್ಲಿಂರಿಗೆ ಯಾವಾಗ ಟೋಪಿ ಹಾಕುತ್ತಾರೋ ಎಂದು ವ್ಯಂಗ್ಯವಾಡಿದರು.

ಜಿಲ್ಲೆಗೆ ಎಚ್‌.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಕೊಡುಗೆನೋಡಿ ಜೆಡಿಎಸ್ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತೆರಳಿ ಸಮಾಮೇಶ ಆಯೋಜಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.