ADVERTISEMENT

ಹಾಸನ: ದುಷ್ಟ ಶಕ್ತಿ ಬಿಡಿಸುವ ನೆಪದಲ್ಲಿ ಹಲ್ಲೆ ಮಾಡಿದ ಪೂಜಾರಿ, ಮಹಿಳೆ ಸಾವು

ತಲೆಮರೆಸಿಕೊಂಡಿರುವ ಆರೋಪಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 15:35 IST
Last Updated 11 ಡಿಸೆಂಬರ್ 2021, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ದುಷ್ಟ ಶಕ್ತಿ ಬಿಡಿಸುತ್ತೇನೆ ಎಂದು ಪೂಜಾರಿ ಬೆತ್ತದಿಂದ ಥಳಿಸಿದ ಪರಿಣಾಮ ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆ ಹೋಬಳಿ ಗೌಡರಹಳ್ಳಿ ಗ್ರಾಮದ ಪಾರ್ವತಿ (37) ಹಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಲ್ಲೆ ನಡೆಸಿದ ಆರೋಪಿ ಬೆಕ್ಕ ಗ್ರಾಮದ ಪಿರಿಯಪಟ್ಟಲದಮ್ಮ ದೇವಾಲಯದ ಪೂಜಾರಿ ಮನು (42) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

ಎರಡು ವರ್ಷಗಳಿಂದ ಬೆಂಗಳೂರಿನ ಮಗಳ ಮನೆಯಲ್ಲಿ ವಾಸವಿದ್ದ ಪಾರ್ವತಿ ಅವರಿಗೆ ತಲೆನೋವು ಬಾಧಿಸುತ್ತಿತ್ತು. ಈ ಬಗ್ಗೆ ಬೆಕ್ಕಾ ಗ್ರಾಮದಲ್ಲಿರುವ ಸಹೋದರಿ ಮಂಜುಳಾ ಅವರಿಗೆ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದರು. ತಲೆ ನೋವಿನ ಬಗ್ಗೆ ಪೂಜಾರಿಗೆ ತಿಳಿಸಿದಾಗ ವಿಶೇಷ ಪೂಜೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದ.

ADVERTISEMENT

ಅದರಂತೆ ದುಷ್ಟ ಶಕ್ತಿಯನ್ನು ಬೆರದಿಸುತ್ತೇನೆ ಎಂದು ಹೇಳಿ ಆಕೆಯ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಬೆತ್ತದಿಂದ ಥಳಿಸಿದ್ದ. ನೋವು ಸಹಿಸಲಾಗದೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದ ಪಾರ್ವತಿ ಅವರಿಗೆ ಭೂತ ಬಿಟ್ಟು ಹೋಗಿದೆ ಎಂದು ಹೇಳಿ ನಿಂಬೆ ಹಣ್ಣಿನ ರಸ ಕುಡಿಸಿ ಮನೆಗೆ ಕಳುಹಿಸಿದ್ದ.

ಅಸ್ವಸ್ಥರಾಗಿದ್ದ ಪಾರ್ವತಿಯನ್ನು ಸಹೋದರಿ ಚನ್ನರಾಯಪಟ್ಟಣದ ಸರ್ಕಾರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಡಿ. 8ರಂದು ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.