ADVERTISEMENT

ತಂದೆ, ಮಗನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ತಂದೆ, ಮಗನ ಮೇಲೆ ಹಲ್ಲೆ: ಸೀಗೆ ಗ್ರಾಮಸ್ಥರ ಪ್ರತಿಭಟನೆ‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 13:55 IST
Last Updated 18 ಜನವರಿ 2021, 13:55 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸೀಗೆ ಗ್ರಾಮಸ್ಥರು ಧರಣಿ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸೀಗೆ ಗ್ರಾಮಸ್ಥರು ಧರಣಿ ನಡೆಸಿದರು.   

ಹಾಸನ: ತಾಲ್ಲೂಕಿನ ಸೀಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ತಂದೆ, ಮಗನ ಮೇಲೆ ಹಲ್ಲೆ ಮಾಡಿದ
ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ
ನೇತೃತ್ವದಲ್ಲಿ ಸೀಗೆ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌.ಕೆ. ಸಂದೇಶ್‌ ಮಾತನಾಡಿ, ಸೀಗೆ ಗ್ರಾಮಸ್ಥರು ಪಡಿತರ
ಪಡೆಯಲು ವೀರಾಪುರ ಗ್ರಾಮಕ್ಕೆ ಹೋಗಬೇಕು. ಹಾಗಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕಾರ್ಡ್‌ಗೆ ಒಟಿಪಿ ನೀಡಿ ವಾಪಸ್‌ ಬೈಕ್‌ನಲ್ಲಿ ಬರುತ್ತಿದ್ದ ಗ್ರಾಮದ ದಿನೇಶ್‌ ನನ್ನು ವೀರಾಪುರ ಗ್ರಾಮದ ಒಕ್ಕಲಿಗ ಸಮುದಾಯದ
ರಘು, ಆದಿತ್ಯ ಮತ್ತು ಕೆಂಚ ಎಂಬುವರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ
ಬಿಜೆಪಿಗೆ ಸಹಕಾರ ನೀಡಿದ್ದೀಯಾ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿದರು.

ದಿನೇಶ್‌ ಈ ವಿಷಯವನ್ನು ತನ್ನ ತಂದೆ ಚಂದ್ರಯ್ಯನಿಗೆ ತಿಳಿಸಿದ್ದಾನೆ. ಹಲ್ಲೆ ನಡೆಸಿದವರ ಬಳಿ ಮಾತನಾಡಲು ಬರುತ್ತಿದ್ದ ಚಂದ್ರಯ್ಯ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ. ಗ್ರಾಮದ ರಾಮಯ್ಯ ಹಾಗೂ ಕರಿಯಯ್ಯ ಜಗಳ ಬಿಡಿಸಿದ್ದಾರೆ ಎಂದು ಹೇಳಿದರು.

ADVERTISEMENT

ಹಲ್ಲೆಗೆ ಒಳಗಾಗಿ ಗಾಯಗೊಂಡಿರುವ ತಂದೆ, ಮಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರೂಆರೋಪಿಗಳನ್ನು ಬಂಧಿಸಿಲ್ಲ. ಒಟಿಪಿ ನೀಡಲು ವೀರಾಪುರ ಗ್ರಾಮಕ್ಕೆ ಹೋಗಲು ಪರಿಶಿಷ್ಟ ಜಾತಿಯ ಜನರು ಭಯಪಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಈರಪ್ಪ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ
ಸಂಚಾಲಕ ಎಂ.ಜಿ ಪೃಥ್ವಿ, ಡಿವೈಎಫ್‌ಐನ ಎಂ.ಎನ್‌. ಮಧುಸೂದನ್‌, ಮುಖಂಡ ಎಚ್‌. ದೇವರಾಜು ಹಾಗೂ
ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.