
ಗಂಡಸಿ: ಹೊಸ ವರ್ಷವನ್ನು ಸ್ವಾಗತಿಸುವ ಹೊಸ್ತಿಲಲ್ಲಿ ಹೋಬಳಿ ಕೇಂದ್ರ ಗಂಡಸಿ ಸುತ್ತಲಿನ ಕ್ರೀಡಾ ಪ್ರೇಮಿಗಳಿಗೆ ಉಡುಗೊರೆಯಾಗಿ ಗಂಡಸಿ ಚಿಕ್ಕಕಟ್ಟೆ ಬಳಿ ಇರುವ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ ಕೊಡುವುದಾಗಿ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.
ಇಲ್ಲಿನ ದೊಡ್ಡಮ್ಮ, ಚಿಕ್ಕಮ್ಮ ಜಾತ್ರಾ ಮೈದಾನದಲ್ಲಿ ಗಂಡಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ, ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆ ಅಡಿ ಗಂಡಸಿಯಲ್ಲಿ ನಡೆದಿರುವ ಶುದ್ಧ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸುವ ಕಾಮಗಾರಿ, ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಪೂರ್ಣಗೊಂಡಿಲ್ಲ. ಮನೆಗಳಿಗೆ ಶುದ್ಧ ನೀರು ಕೊಡಲು ವಿಳಂಬವಾಗುತ್ತಿದ್ದು, ಗುತ್ತಿಗೆದಾರರಿಗೆ ನೋಟಿಸ್ ನೀಡಿ, ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಗಂಡಸಿ ಸ್ಮಶಾನ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದ್ದು, ಒತ್ತುವರಿ ತೆರವುಗೊಳಿಸಿ ತಂತಿ ಬೇಲಿ ಹಾಕಿ ರಸ್ತೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ಆದೇಶವಿಲ್ಲದ ಕಾರಣ 30X40 ಅಳತೆಯ ನಿವೇಶನಗಳಿಗೆ ಇ–ಸ್ವತ್ತು ಮಾಡುತ್ತಿರಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯ ಮಾಡಲಾಗಿದ್ದು, ಇ–ಸ್ವತ್ತು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಆದೇಶ ನೀಡಿದೆ. ಈ ಆದೇಶದಿಂದ ಬಡ ಕುಟುಂಬಗಳಿಗೆ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ತೆಗೆದುಕೊಳ್ಳಲು ಸುಲಭವಾಗಲಿದೆ ಎಂದರು.
ತಹಶೀಲ್ದಾರ್ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಗಂಡಸಿ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಅಯ್ಯಣ್ಣ, ನಾಗರಾಜು, ಕುಮಾರ್, ರವಿ, ಕೋಟಿ ಪ್ರದಿ, ನಂಜುಂಡಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.