
ಹಿರೀಸಾವೆ: ‘ಯುವಕರಿಗೆ ಕ್ರೀಡೆ ಉತ್ತಮ ಸ್ನೇಹಿತ. ಆರೋಗ್ಯಕ್ಕಾಗಿ ಪ್ರತಿದಿನ ಕ್ರೀಡೆ, ವ್ಯಾಯಾಮದಲ್ಲಿ ತೊಡಗಿಸಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಇಲ್ಲಿನ ಚೌಡೇಶ್ವರಿ ವಾಲಿಬಾಲ್ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಕ್ರೀಡೆಯನ್ನು ಒಳ್ಳೆಯ ಸ್ನೇಹಿತನಂತೆ ಆಯ್ಕೆಮಾಡಿಕೊಳ್ಳಿ. ಚನ್ನರಾಯಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಾಲಿಬಾಲ್ ಮತ್ತು ಕಬಡ್ಡಿ ಆಟಗಾರರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಉತ್ತಮ ಪ್ರದರ್ಶನ ಮಾಡಿದ ಆಟಗಾರರನ್ನು ರಾಜ್ಯ ಅಸೋಸಿಯೇಷನ್ ಗುರುತಿಸಿ, ಉತ್ತಮ ತರಬೇತಿ ನೀಡುತ್ತದೆ ಎಂದರು.
ಹಿರಿಯ ವಾಲಿಬಾಲ್ ಆಟಗಾರ ರಾಮಕೃಷ್ಣೇಗೌಡ ಮಾತನಾಡಿ, ಆಟಗಳನ್ನು ನೋಡುವುದರಿಂದ ಮನಸ್ಸಿಗೆ ಸಂತೋಷ ತರುತ್ತದೆ. ಉದ್ಯೋಗಗಳಲ್ಲಿ ಆದ್ಯತೆ ಸಿಗುತ್ತವೆ ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಎನ್. ಮಂಜುನಾಥ್, ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಹರ್ಷ್, ಕಾರ್ಯದರ್ಶಿ ಆಂಟೋನಿ ಜೋಸೆಫ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಪರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಅರುಣ್ ಕುಮಾರ್, ಹಿರಿಯ ಆಟಗಾರ ಭಾಸ್ಕರ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎ. ಅಣ್ಣೇಗೌಡ, ಮುಖಂಡರಾದ ಉದಯಕುಮಾರ್, ರವಿಕುಮಾರ್, ಪ್ರಭಾಕರ್, ಮಾರುತಿ ಮಂಜುನಾಥ್, ಚೇತನ್, ಬೋರೇಗೌಡ, ರೋಡ್ ಮಂಜುನಾಥ್, ಕಾಂತಣ್ಣ, ಕರವೇ ಶಿವರಾಜು, ಕೊತ್ತನಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.