
ಹಾವೇರಿ: ‘ಜೈನ್ ಧರ್ಮವು ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮವಾಗಿದೆ. ಉಸಿರಾಟವನ್ನು ಹೇಗೆ ಮಾಡಬೇಕೆಂದು ಹೇಳುವುದು ಜೈನ್ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದೆಂದು ಜೈನ ಧರ್ಮ ಹೇಳುತ್ತದೆ. ಜೈನ್ ಧರ್ಮದ ಆಚರಣೆಗಳನ್ನು ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿದ್ದಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈ ಬದುಕು ಒಂದು ಸಂಘರ್ಷ. ಹುಟ್ಟಿದ ಮನುಷ್ಯ ಸಾಯುವವರೆಗೂ ಪ್ರತಿಯೊಂದು ಉಸಿರಾಟದಲ್ಲಿ ಪ್ರಯತ್ನ ಮಾಡಬೇಕು. ಆ ಪ್ರಯತ್ನ ನಮಗೆ ಗೊತ್ತಾಗುವುದಿಲ್ಲ. ಉಸಿರಾಡುವ ಪ್ರಾಣ ಪ್ರಕ್ರಿಯೆಯನ್ನು ಭಗವಂತ ನಡೆಸುತ್ತಾನೆ. ಯಾವುದನ್ನು ಭಗವಂತ ನಡೆಸುತ್ತಾನೆ ಅದು ಗೊತ್ತಾಗುವುದಿಲ್ಲ. ಉಸಿರಾಟವನ್ನು ಹೇಗೆ ಮಾಡಬೇಕೆಂದು ಹೇಳುವುದು ಜೈನ ಧರ್ಮ. ಬದುಕು ಹೇಗೆ ನಡೆಸಬೇಕೆಂದು ಹೇಳಿ ಕೊಟ್ಟಿದ್ದಾರೆ’ ಎಂದರು.
‘ಮನುಷ್ಯನಿಗೆ ಚಿಂತನೆ ಮತ್ತು ಅಭಿವ್ಯಕ್ತಿ ಮಾಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾನೆ. ಆ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಮನುಕುಲಕ್ಕೆ ಒಳಿತಾಗುತ್ತದೆ. ಮನುಷ್ಯನ ಸಿದ್ಧ ಚಕ್ರವನ್ನು ಒಂದು ಕಡೆ ಸೇರಿಸಿ, ಮಾನವ ಕಲ್ಯಾಣಕ್ಕೆ ಸಿದ್ದಪಡಿಸುವುದೇ ಸಿದ್ದಚಕ್ರವಾಗಿದೆ. ಎಲ್ಲವನ್ನೂ ತ್ಯಾಗ ಮಾಡಿರುವ ಶಕ್ತಿ ಪರಮಪೂಜ್ಯರು. ತ್ಯಾಗದಲ್ಲಿ ಶಕ್ತಿ ಇದೆ. ಭೋಗದಲ್ಲಿ ಇಲ್ಲ. ಮನುಷ್ಯ ಏನಾದರೂ ಕೇಳಿ ಬೇಕು ಎಂದರೆ ಭಿಕ್ಷುಕನಾಗುತ್ತಾನೆ. ಬೇಡ ಎಂದರೆ ಭಗವಂತ ಆಗುತ್ತಾನೆ. ಬೇಡ ಎನ್ನುವುದೇ ಭಗವಂತನ ಪ್ರಕ್ರಿಯೆ’ ಎಂದು ಹೇಳಿದರು.
‘ನಾವು ಒಂದು ಕುರ್ಚಿ ಸಲುವಾಗಿ ಹೊಡೆದಾಡುತ್ತೇವೆ. ತಮ್ಮಲ್ಲಿರುವ ಎಲ್ಲ ಸಂಪತ್ತು, ವಜ್ರ, ಅರಮನೆ, ಸಿಂಹಾಸನ ಎಲ್ಲವನ್ನೂ ತ್ಯಾಗ ಮಾಡಿ ಪರಮಪೂಜ್ಯರಾದರು. ಮಹಾವೀರರ ಪ್ರತಿ ರೂಪವಾಗಿ ವಿದಿತಸಾಗರ ಮಹಾರಾಜರು ನಮ್ಮ ಮುಂದೆ ಕುಳಿತಿದ್ದಾರೆ. ಯಾವುದರ ಮೇಲೂ ಅವರಿಗೆ ಮೋಹವಿಲ್ಲ. ಅವರ ಶಕ್ತಿಯನ್ನು ಬೇರೆ ಯಾರೂ ಮುಟ್ಟಲು ಆಗುವುದಿಲ್ಲ. ಹತ್ತು ದಿನ ಮಹೋತ್ಸವದಲ್ಲಿ ಪಾಲ್ಗೊಂಡು ವೃತ ಮಾಡಿದವರು ಪುಣ್ಯವಂತರು’ ಎಂದರು.
ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಸ್ವಾದಿ ದಿಗಂಬರ ಜೈನ ಮಠ ಸೋಂದಾ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.