ADVERTISEMENT

ಹಾವೇರಿಯಲ್ಲಿ ಪ್ರಚೋದನಕಾರಿ ಭಾಷಣ ಆರೋಪ: ರಾಕೇಶ್‌ ಟಿಕಾಯತ್‌ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 15:23 IST
Last Updated 24 ಮಾರ್ಚ್ 2021, 15:23 IST
ರಾಕೇಶ್‌ ಟಿಕಾಯತ್ 
ರಾಕೇಶ್‌ ಟಿಕಾಯತ್    

ಹಾವೇರಿ: ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಾರ್ಚ್‌ 21ರಂದು ನಡೆದ ‘ರೈತ ಮಹಾ ಪಂಚಾಯತ್’‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾದ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಮ್ಮ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಹೋರಾಟ ಮಾಡಬೇಕಿದೆ. ನಾವು ದೆಹಲಿಯಲ್ಲಿ ಹೋರಾಟಕ್ಕೆ ಮೂರು ಲಕ್ಷ ಟ್ರ್ಯಾಕ್ಟರ್‌ ತಂದಿದ್ದೆವು. ನಿಮ್ಮ– ನಿಮ್ಮ ಊರುಗಳಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯಲು ನೀವು ಅಭ್ಯಾಸ ಮಾಡಿಕೊಳ್ಳಿರಿ. ದೆಹಲಿ ಮಾದರಿಯಲ್ಲೇ ಟ್ರ್ಯಾಕ್ಟರ್‌ಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಎಂದು ರೈತರನ್ನು ಉದ್ರೇಕಗೊಳ್ಳುವಂತೆ ಮಾಡಿದ್ದಾರೆ’ ಎಂದು ಐಪಿಸಿ ಕಲಂ 153ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಚಳವಳಿ ಮಾಡುವವರಿಗೆ ಪ್ರಕರಣಗಳು ಹೊಸದೇನಲ್ಲ. ಟಿಕಾಯತ್ ಅವರು‌ ಉದ್ರೇಕ ಭಾಷಣ ಮಾಡಿಲ್ಲ. ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಹುನ್ನಾರ ನಡೆಸಿದೆ. ಪೊಲೀಸರ ವರ್ತನೆಯನ್ನು ಜಿಲ್ಲಾ ರೈತ ಸಂಘದಿಂದ ಖಂಡಿಸುತ್ತೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ADVERTISEMENT

‘ಮಾರ್ಚ್‌ 21ರಂದು ರೈತ ಮಹಾ ಪಂಚಾಯತ್‌ ನಡೆದಿದೆ. ಎರಡು ದಿನ ಬಿಟ್ಟು (ಮಾರ್ಚ್‌ 23) ಎಫ್‌ಐಆರ್‌ ಹಾಕುತ್ತಾರೆ ಅಂದರೆ, ಇದು ಉದ್ದೇಶಪೂರ್ವಕ ಅಂತ ಸ್ಪಷ್ಟವಾಗಿ ಗೊತ್ತಾಗುತ್ತದೆ. ಶಿವಮೊಗ್ಗ ಮತ್ತು ಹಾವೇರಿ ಎರಡೂ ಕಡೆ ರಾಜ್ಯ ಸರ್ಕಾರವೇ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣ ಹಾಕುವಂತೆ ಮಾಡಿದೆ. ಇಂಥ ತಂತ್ರಗಳಿಂದ ರೈತರ ಹೋರಾಟ ಮಣಿಸಲು ಸಾಧ್ಯವಿಲ್ಲ. ಮಾರ್ಚ್‌ 26ರಂದು ರಾಜ್ಯದಾದ್ಯಂತ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ’ ಎಂದು ಜಿಲ್ಲಾ ರೈತ ಮುಖಂಡರಾದಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.