ADVERTISEMENT

ಹಾವೇರಿ | ಬಸ್‌ ಬಂದ್: ವಿದ್ಯಾರ್ಥಿಗಳ ಪರದಾಟ

ಹಳೇ ಶೀಗಿಹಳ್ಳಿ; ಕಬ್ಬು ಸಾಗಣೆ ವಾಹನಗಳ ನೆಪ ಹೇಳುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 2:45 IST
Last Updated 25 ಡಿಸೆಂಬರ್ 2025, 2:45 IST
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗಡಿಗ್ರಾಮ ಹಳೇ ಶೀಗಿಹಳ್ಳಿಯಲ್ಲಿರುವ ಬಸ್‌ ತಂಗುದಾಣ
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗಡಿಗ್ರಾಮ ಹಳೇ ಶೀಗಿಹಳ್ಳಿಯಲ್ಲಿರುವ ಬಸ್‌ ತಂಗುದಾಣ   
ಹಾನಗಲ್ ತಾಲ್ಲೂಕಿನ ಗಡಿಗ್ರಾಮ ಹಳೇ ಶೀಗಿಹಳ್ಳಿ  ಬೆಳಿಗ್ಗೆ–ಸಂಜೆ ಬಂದುಹೋಗುತ್ತಿದ್ದ ಬಸ್ ಬಂದ್‌

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗಡಿಭಾಗದಲ್ಲಿರುವ ಹಳೇ ಶೀಗಿಹಳ್ಳಿ ಗ್ರಾಮಕ್ಕೆ ಬಸ್‌ ಸಂಚಾರವನ್ನು ದಿಢೀರ್ ಬಂದ್ ಮಾಡಿದ್ದರಿಂದ ಶಾಲೆ–ಕಾಲೇಜಿಗೆ ಹೋಗಿ, ಬರಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರದಿಂದ 31 ಕಿ.ಮೀ. ದೂರದಲ್ಲಿರುವ ಸುಮಾರು 1,300 ಜನಸಂಖ್ಯೆ ಇರುವ ಗ್ರಾಮ ಇದಾಗಿದೆ. ಗ್ರಾಮದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಒದಗಿಸಲು 1ನೇ ತರಗತಿಯಿಂದ 8ನೇ ತರಗತಿವರೆಗಿನ ಶಾಲೆಯಿದೆ. ಆದರೆ, 9ನೇ ತರಗತಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪರ ಊರಿಗೆ ಹೋಗಿ, ಬರಬೇಕು.

20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡೂರು, ಹಾನಗಲ್, ಹಾವೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ನಿತ್ಯವೂ ಪ್ರಯಾಣಿಸುತ್ತಾರೆ. ಗ್ರಾಮಸ್ಥರು, ವ್ಯಾಪಾರ ಹಾಗೂ ಉದ್ಯೋಗಕ್ಕಾಗಿ ಸಂಚರಿಸುತ್ತಾರೆ.

ADVERTISEMENT

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ, ಹಾನಗಲ್‌–ಶೀಗಿಹಳ್ಳಿ–ಹಾವೇರಿ ಮಾರ್ಗದಲ್ಲಿ ಬಸ್‌ ಸಂಚರಿಸುತ್ತು. ಆದರೆ, ತಿಂಗಳಿನಿಂದ ಬಸ್‌ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ, ಒಂದೂ ಬಸ್‌ ಗ್ರಾಮಕ್ಕೆ ಬರುತ್ತಿಲ್ಲ.

ಬಸ್‌ ಇಲ್ಲದ್ದರಿಂದ ಶಾಲೆ–ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾಮದಿಂದ 2 ಕಿ.ಮೀ. ದೂರದಲ್ಲಿರುವ ರಾಜ್ಯ ಹೆದ್ದಾರಿವರೆಗೂ (ಹಾನಗಲ್–ಹಾವೇರಿ) ನಡೆದು ಹೋಗಬೇಕಿದೆ. ಹೆದ್ದಾರಿಯಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಿ, ಜನರನ್ನು ಹತ್ತಿಸಿಕೊಳ್ಳಲು ಚಾಲಕರು ಹಿಂದೇಟು ಹಾಕುತ್ತಾರೆ. ರಸ್ತೆಯಲ್ಲಿ ಅಡ್ಡನಿಂತು ಬಸ್‌ಗಳನ್ನು ನಿಲ್ಲಿಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಬ್ಬು ಸಾಗಣೆ ವಾಹನ ನೆಪ: ಬಸ್‌ ಸಂಚಾರವನ್ನು ದಿಢೀರ್ ಬಂದ್ ಮಾಡಿರುವ ಬಗ್ಗೆ ಗ್ರಾಮಸ್ಥರು, ಹಾನಗಲ್ ಡಿಪೊ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ‘ನಿಮ್ಮ ಊರಿನಲ್ಲಿ ತಿಂಗಳಿನಿಂದ ಕಬ್ಬು ಸಾಗಣೆ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿವೆ. ರಸ್ತೆ ಚಿಕ್ಕದಾಗಿರುವುದರಿಂದ ಬಸ್‌ ಸಾಗುವ ಸಂದರ್ಭದಲ್ಲಿ, ಎದುರಿಗೆ ಕಬ್ಬಿನ ವಾಹನ ಬಂದರೆ ದಾರಿ ಸಿಗುವುದಿಲ್ಲ. ಇದೇ ಕಾರಣಕ್ಕೆ ಬಸ್ ಸಂಚಾರ ಬಂದ್ ಮಾಡಿದ್ದೇವೆ’ ಎಂದು ಉತ್ತರಿಸುತ್ತಾರೆ.

ಪ್ರತಿಭಟನೆ ನಡೆಸುವ ಎಚ್ಚರಿಕೆ

‘ನಮ್ಮೂರಿಗೆ ಬೆಳಿಗ್ಗೆ 9 ಗಂಟೆಗೆ ಹಾಗೂ ಸಂಜೆ 5.30ಕ್ಕೆ ಒಂದು ಬಸ್‌ ಬರುತ್ತಿತ್ತು. ಕಬ್ಬು ಸಾಗಣೆ ವಾಹನದ ನೆಪ ಹೇಳಿ ಈಗ ಅದನ್ನೂ ಬಂದ್ ಮಾಡಿದ್ದಾರೆ. ಶಾಲೆ–ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಸ್‌ ತಂಗುದಾಣವಿದ್ದರೂ ಬಸ್‌ ಇಲ್ಲ. ಖಾಸಗಿ ವಾಹನಗಳಿಗೆ ಕೈ ಮಾಡಿ ನಿಲ್ಲಿಸಿ ರಾಜ್ಯ ಹೆದ್ದಾರಿವರೆಗೂ ಹೋಗಬೇಕಿದೆ. ಮಕ್ಕಳ ಗೋಳು ಹೇಳತೀರದು’ ಎಂದು ಗ್ರಾಮಸ್ಥರು ತಿಳಿಸಿದರು. ‘ಈ ಹಿಂದೆ ಬರುತ್ತಿದ್ದ ಬಸ್‌ ಅನ್ನೇ ಪುನರಾರಂಭಿಸಬೇಕು. ಈ ರೀತಿ ವ್ಯತ್ಯವಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಬಸ್‌ಗಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಪ್ರಭು ಶಿವಲಿಂಗಪ್ಪ ಉಳ್ಳಾಗಡ್ಡಿ ಶಂಭುಲಿಂಗ ಅಜಗುಂಡಿ ಎಚ್ಚರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.