ADVERTISEMENT

ಹಾವೇರಿ | ಟನ್ ಕಬ್ಬಿಗೆ ₹3,200 ನೀಡಲು ರೈತರ ಪಟ್ಟು: ಸಂಧಾನ ವಿಫಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:23 IST
Last Updated 10 ನವೆಂಬರ್ 2025, 2:23 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರು   

ಹಾವೇರಿ: ‘ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ₹ 3,200 (ಒಂದು ಟನ್‌ಗೆ) ನೀಡಬೇಕು’ ಎಂದು ಕಬ್ಬು ಬೆಳೆಗಾರರು ಒತ್ತಾಯಿಸುತ್ತಿದ್ದು, ‘ರೈತರು ಕೇಳಿದ ಬೆಲೆ ನೀಡಲು ಸಾಧ್ಯವಿಲ್ಲ’ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ನಿರಾಕರಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಧಾನ ಸಭೆ, ಒಮ್ಮತದ ತೀರ್ಮಾನಕ್ಕೆ ಬಾರದೇ ವಿಫಲವಾಗಿದೆ.

‘ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಟನ್‌ಗೆ ₹ 3,300 ಬೆಲೆ ನೀಡಲಾಗಿದೆ. ಅದೇ ಮಾದರಿಯಲ್ಲೇ ಹಾವೇರಿ ಜಿಲ್ಲೆಯ ರೈತರಿಗೂ ₹ 3,300 ಬೆಲೆ ಘೋಷಿಸಬೇಕು’ ಎಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ನವೆಂಬರ್ 10ರಂದು ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಪ್ರತಿಭಟನೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಕಬ್ಬು ಬೆಳೆಗಾರರ ಮುಖಂಡರು ಹಾಗೂ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ ಮತ್ತು ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್‌ ಕಂಪನಿ ಪ್ರತಿನಿಧಿಗಳ ಸಮ್ಮುಖದಲ್ಲಿ ಭಾನುವಾರ ಸಂಧಾನ ಸಭೆ ನಡೆಸಿದರು.

ವಿಷಯ ಪ್ರಸ್ತಾಪಿಸಿದ ವಿಜಯ ಮಹಾಂತೇಶ, ‘ಕಬ್ಬು ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಸದ್ಯದ ದರದ ಮೇಲೆ ಹೆಚ್ಚುವರಿಯಾಗಿ ಕಾರ್ಖಾನೆಯವರು ₹ 50 ನೀಡಬೇಕು. ಸರ್ಕಾರವೂ ಹೆಚ್ಚುವರಿಯಾಗಿ ₹ 50 ನೀಡುವುದಾಗಿ ಘೋಷಿಸಿದೆ. ಹೀಗಾಗಿ, ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಯವರು ಸರ್ಕಾರ ನಿಗದಿಪಡಿಸಿರುವ ದರ ನೀಡಬೇಕು’ ಎಂದು ಕೋರಿದರು.

ADVERTISEMENT

ಕಬ್ಬು ಬೆಳೆಗಾರರ ಪರ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ‘ಸಕ್ಕರೆ ಇಳುವರಿ ಆಧರಿಸಿ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ಹಾವೇರಿ ಜಿಲ್ಲೆಯ ಮೂರು ಕಾರ್ಖಾನೆಯಲ್ಲಿಯೂ ಇಳುವರಿ ಪರೀಕ್ಷೆಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಹೀಗಾಗಿ, ಎಫ್‌ಆರ್‌ಪಿ ಸಹ ರೈತರ ಪರವಿಲ್ಲ. ಹೀಗಾಗಿ, ಬೆಳಗಾವಿ ಮಾದರಿಯಲ್ಲಿ ₹3,300 ನೀಡಬೇಕು. ಕೊನೆಯದಾಗಿ ₹ 3,200 ಕೊಟ್ಟರೂ ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬಿನಿಂದ ತೆಗೆಯುವ ಸಕ್ಕರೆ ಇಳುವರಿ 11.25ರಷ್ಟಿದೆ. ಎರಡೂ ಜಿಲ್ಲೆಗಳ ಕಬ್ಬಿಗೆ ಟನ್‌ಗೆ 3,300 ಘೋಷಿಸಲಾಗಿದೆ. ಆದರೆ, ಹಾವೇರಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು 9.42ರಷ್ಟು ಇಳುವರಿ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಹೀಗಾಗಿ, ಸರ್ಕಾರದವರೇ ಇಳುವರಿ ಪರೀಕ್ಷೆ ಮಾಡಿಸಬೇಕು. ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಜಿ.ಎಂ. ಶುಗರ್ ಆ್ಯಂಡ್ ಎನರ್ಜಿ ಕಂಪನಿ ಪ್ರತಿನಿಧಿ, ‘ನಮ್ಮ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಕಡಿಮೆಯಿದೆ. ಎಫ್‌ಆರ್‌ಪಿ ದರಕ್ಕಿಂತಲೂ ಹೆಚ್ಚಿನ ದರ ನೀಡುತ್ತಿದ್ದೇವೆ. ಈಗ ಸರ್ಕಾರ, ಕಬ್ಬಿನ ಖರೀದಿಗೆ ಹೊಸ ದರ ನಿಗದಿಪಡಿಸಿದೆ. ಅದಕ್ಕೆ ತಕ್ಕಂತೆ, ಟನ್‌ ಕಬ್ಬಿಗೆ ₹2,740 (ಹೆಚ್ಚುವರಿ ₹100 ಸೇರಿ) ನೀಡಲು ಸಿದ್ಧರಿದ್ದೇವೆ. ಅದಕ್ಕಿಂತ ಹೆಚ್ಚು ಬೆಲೆ ನೀಡುವ ಆರ್ಥಿಕ ಶಕ್ತಿ ನಮಗಿಲ್ಲ’ ಎಂದರು.

ವಿ.ಐ.ಎನ್.ಪಿ ಡಿಸ್ಟಿಲರೀಸ್ ಮತ್ತು ಶುಗರ್ಸ್‌ ಕಂಪನಿ ಪ್ರತಿನಿಧಿ ಮಾತನಾಡಿ, ‘ನಾವು ಈಗಾಗಲೇ ಎಫ್‌ಆರ್‌ಪಿ ತಕ್ಕಂತೆ ₹ 2,711 ನೀಡುತ್ತಿದ್ದೇವೆ. ಈಗ ಸರ್ಕಾರ ಹೆಚ್ಚುವರಿಯಾಗಿ ₹ 50 ನೀಡುವಂತೆ ಹೇಳಿದೆ. ಅದಕ್ಕೆ ನಾವು ಒಪ್ಪುತ್ತೇವೆ’ ಎಂದರು.

ಎರಡೂ ಕಾರ್ಖಾನೆಗಳ ದರವನ್ನು ನಿರಾಕರಿಸಿದ ಕಬ್ಬು ಬೆಳೆಗಾರರು, ‘ನಮಗೆ ₹3,200 ಬೆಲೆ ಬೇಕೇ ಬೇಕು. ಹಲವು ವರ್ಷಗಳಿಂದ ನ್ಯಾಯಯುತ ಬೆಲೆಗೆ ಒತ್ತಾಯಿಸುತ್ತಿದ್ದೇವೆ. ಆದರೆ, ನಮಗೆ ನ್ಯಾಯ ಸಿಗುತ್ತಿಲ್ಲ. ಈ ಬಾರಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿಯೂ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ₹ 3,200 ದರ ನೀಡದಿದ್ದರೆ, ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘₹ 3,200 ದರ ನೀಡಲು ಸಾಧ್ಯವಿಲ್ಲ’ ಎಂದು ಕಾರ್ಖಾನೆ ಪ್ರತಿನಿಧಿಗಳು ಹೇಳಿದ್ದರಿಂದ, ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ‘ಹೋರಾಟ ಮಾಡಿಯೇ ಬೆಲೆ ಪಡೆಯುತ್ತೇವೆ’ ಎಂದು ಘೋಷಿಸಿದ ರೈತರು, ಸಭೆಯಿಂದ ಹೊರಗಡೆ ಬಂದರು.

₹3300 ಆಗದಿದ್ದರೂ ₹3200 ಬೆಲೆಯನ್ನಾದರೂ ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ ಕಾರ್ಖಾನೆಯವರು ಒಪ್ಪುತ್ತಿಲ್ಲ. ಹೀಗಾಗಿ ನ. 10ರಂದು ಪ್ರತಿಭಟನೆ ನಡೆಸಲಿದ್ದೇವೆ
ಭುವನೇಶ್ವರ ಶಿಡ್ಲಾಪೂರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.