ಹಾವೇರಿ: ‘ನಮ್ಮ ವಾರ್ಡುಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ, ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದು, ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ’ ಎಂದು ಆರೋಪಿಸಿ, ಆಡಳಿತರೂಢಕಾಂಗ್ರೆಸ್ ಸದಸ್ಯರಿಂದಲೇ ನಗರಸಭೆ ಮುಂಭಾಗ ಸೋಮವಾರ ದಿಢೀರ್ ಧರಣಿ ನಡೆಯಿತು.
ಅರ್ಧಗಂಟೆಗೂ ಹೆಚ್ಚು ಕಾಲ ನಗರಸಭೆ ಬಾಗಿಲು ಮುಚ್ಚಿದ ಕಾಂಗ್ರೆಸ್ ಸದಸ್ಯರು ಬಾಗಿಲ ಬಳಿಯೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ. ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಿಡಿಕಾರಿದರು.
ನಗರಸಭೆ ಸದಸ್ಯ ಐ.ಯು. ಪಠಾಣ, ನಿಂಗರಾಜ ಶಿವಣ್ಣನವರ, ನಗರಸಭೆ ಉಪಾಧ್ಯಕ್ಷರ ಪತಿ ಐ.ಎ. ಜಮಾದಾರ, ಕಾಂಗ್ರೆಸ್ ಕಾರ್ಯಕರ್ತರಾದ ಉಮೀದ ನದಾಫ, ಮಾಹಾಲಿಂಗಯ್ಯ ಪಾಟೀಲ, ರವಿ ಪುತ್ರನ್ ಮತ್ತಿತರರು ಪ್ರತಿಭಟನೆ ನಡೆಸಿದರು. 16,17,1 ಹಾಗೂ ಇತರೆ ವಾರ್ಡಿನ ಸದಸ್ಯರು ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ತಮ್ಮ ಪಕ್ಷದ ಸದಸ್ಯರೇ ಪ್ರತಿಭಟನೆ ನಡೆಸುತ್ತಿರುವುದರಿಂದ ತೀವ್ರ ಮುಜಗುರಕ್ಕೆ ಒಳಗಾದರು. ನಂತರ ಪ್ರತಿಭಟನಾಕಾರರ ಮನವೊಲಿಸಿ, ಸದಸ್ಯರನ್ನು ಕಚೇರಿ ಒಳಗೆ ಕರೆದೊಯ್ದು ಮಾತುಕತೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.