ADVERTISEMENT

ಹಾವೇರಿ | ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ಕಳ್ಳತನ: ಇಬ್ಬರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 16:57 IST
Last Updated 18 ಫೆಬ್ರುವರಿ 2026, 16:57 IST
   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಕಳ್ಳತನ ಮಾಡಿರುವ ಆರೋಪದಡಿ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ) ಶೇಖಣ್ಣ ಭಜಂತ್ರಿ ಹಾಗೂ ಬಸವರಾಜ ಚೂರಿ ಎಂಬುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಫೆ. 17ರಂದು ಮಧ್ಯಾಹ್ನ ನಡೆದಿರುವ ಘಟನೆ ಸಂಬಂಧ ದೇವಸ್ಥಾನದ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಭರಮಪ್ಪ ಉರ್ಮಿ ಅವರು ದೂರು ನೀಡಿದ್ದಾರೆ. ಆರೋಪಿಗಳಾದ ಶೇಖಣ್ಣ ಹಾಗೂ ಬಸವರಾಜ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಧಿಕಾರ ವಿಚಾರವಾಗಿ ದೇವಸ್ಥಾನದಲ್ಲಿ ಜಟಾಪಟಿ ನಡೆಯುತ್ತಿದೆ. ಶೇಖಣ್ಣ ಅವರನ್ನು ನಿವೃತ್ತಿಗೊಳಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಅದನ್ನು ಪ್ರಶ್ನಿಸಿ ಶೇಖಣ್ಣ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಇದರ ನಡುವೆಯೇ, ದೇವಸ್ಥಾನದ ಸಿ.ಸಿ.ಟಿ.ವಿ ಕ್ಯಾಮೆರಾದ ತಂತಿ ಕತ್ತರಿಸಿ ಚೆಕ್‌ ನೋಂದಣಿ ಪುಸ್ತಕ ಸೇರಿ ಹಲವು ವಸ್ತುಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ತನಿಖೆಯಿಂದ ನಿಜಾಂಶ ತಿಳಿಯಬೇಕಿದೆ’ ಎಂದು ತಿಳಿಸಿದರು.

ADVERTISEMENT