ADVERTISEMENT

ಚಿಂಚೋಳಿ: ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ ಜಲಪಾತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 5:54 IST
Last Updated 3 ಜುಲೈ 2020, 5:54 IST
ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ ಜಲಪಾತ
ಮೈದುಂಬಿ ಹರಿಯುತ್ತಿರುವ ಎತ್ತಿಪೋತೆ ಜಲಪಾತ   

ಚಿಂಚೋಳಿ: ತಾಲ್ಲೂಕಿನ ಒಂಟಿಚಿಂತಾ ಸಂಗಾಪುರ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಮರು ಜೀವ ಪಡೆದುಕೊಂಡಿದ್ದು ಶುಕ್ರವಾರ ಸುರಿದ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದೆ.

ಜಲಪಾತದ ಮೇಲ್ಭಾಗದ ತೆಲಂಗಾಣದಲ್ಲಿ ಸುರಿದ ಮಳೆಯಿಂದ ಎತ್ತಿಪೋತೆ ನಾಲೆಗೆ ಪ್ರವಾಹ ಬಂದಿದೆ. ಇದರಿಂದ ಮೇಲಿಂದ ನೀರು ಬೀಳುವ ಎರಡು ತಾಣಗಳು ನಯನ ಮನೋಹರವಾಗಿ ಗೋಚರಿಸುತ್ತ ಪ್ರವಾಸಿಗರನ್ನು ಸೆಳೆಯುತ್ತಿವೆ.

ಕುಂಚಾವರಂ ಕಾಡಿನಲ್ಲಿ ಬರುವ ಚಿಂಚೋಳಿ ವನ್ಯಜೀವಿ ಧಾಮದ ಪ್ರಕೃತಿಯ ರಮಣೀಯ ತಾಣ ಸುವರ್ಣ ವರ್ಣದ ನೀರಿನಿಂದ ಕಂಗೊಳಿಸುತ್ತಿದೆ. ಇದರ ಜತೆಗೆ ತಾಲ್ಲೂಕಿನ ಕುಸ್ರಂಪಳ್ಳಿ ಗೊಟ್ಟಮಗೊಟ್ಟ ಮಧ್ಯೆ ಕಾಡಿನಲ್ಲಿ ರಾಚೇನಹಳ್ಳಿ ನಾಲಾ ಮೈದುಂಬಿ ಹರಿಯುತ್ತಿರುವುದರಿಂದ ಮಾಣಿಕಪುರ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.

ADVERTISEMENT

ಇಲ್ಲಿ ಮೂರು ಕಡೆಗಳಲ್ಲಿ‌ ನೀರು‌ ಮೇಲಿಂದ ಕೆಳಗೆ ಬೀಳುವ ದೃಶ್ಯ ಮನಸ್ಸಿಗೆ ಮುದ ನೀಡಲಿದೆ. ದಟ್ಟ ಕಾಡಿನ‌ ಮಧ್ಯೆ ಇರುವ ಈ ಜಲಪಾತಕ್ಕೆ ಒಬ್ಬರೇ ಹೋಗುವುದು ಅಪಾಯಕಾರಿ ಜತೆಗೆ ಇದೇ ಕಾಡಿನಲ್ಲಿ ಚಿರತೆ ಗೋಚರಿಸಿದ್ದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಪರಿಸರ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.

ಮಹಾ ಮಳೆಯಿಂದ ಚಂದ್ರಪಳ್ಳಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ ಕೆಲವೇ ಗಂಟೆಗಳಲ್ಲಿ 2 ಮೀಟರ್ ನೀರು ಹರಿದು ಬಂದಿದೆ ಎಂದು ಸಿದ್ದಾರೂಢ ಹೊಕ್ಕುಂಡಿ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.