ಕಮಲಾಪುರ (ಕಲಬುರ್ಗಿ ಜಿಲ್ಲೆ): ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಾಲ್ಲೂಕಿನ ದಿನಸಿ ತಾಂಡಾದಲ್ಲಿ ಶುಕ್ರವಾರ ರಾತ್ರಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಮಾರುತಿ ದೇವಲಾ (45) ಹಾಗೂ ಇವರ ಪತ್ನಿ ಶಾರದಾಬಾಯಿ ಮಾರುತಿ (35) ಕೊಲೆಯಾದ ದಂಪತಿ. ಶಾರದಾಬಾಯಿ ಏಳು ತಿಂಗಳ ಗರ್ಭಿಣಿ ಆಗಿದ್ದರು. ಅಲ್ಲದೇ, ಈ ದಂಪತಿಗೆ ಈಗಾಗಲೇ ಆರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾನೆ.
ಶುಕ್ರವಾರ ರಾತ್ರಿ 11.30ರ ಸುಮಾರಿಗೆ ದಂಪತಿ ಮಕ್ಕಳ ಜೊತೆ ಮಲಗಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಗುಂಪು ಚಾಕುವಿನಿಂದ ಇರಿದು, ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿತು.
ಅದೇ ಘಟನೆ ಕಾರಣವೇ?
ಕೆಲ ವರ್ಷಗಳ ಹಿಂದೆ ತಾಂಡಾದ ಯುವಕರಿಬ್ಬರ ವಿರುದ್ಧ ಈ ದಂಪತಿ ಕಿರುಕುಳಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಿದ್ದರು. ಅದರಲ್ಲಿ ಒಬ್ಬನಿಗೆ ಶಿಕ್ಷೆಯಾಗಿದ್ದು, ಜೈಲಿನಲ್ಲಿದ್ದಾನೆ. ಇನ್ನೊಬ್ಬ ಪರಾರಿಯಾಗಿದ್ದಾನೆ. ಈ ಜೋಡಿ ಕೊಲೆಗೆ ಇದೇ ವಿಷಯ ಕಾರಣವಾಗಿರಬಹುದೇ ಎಂದೂ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಇಡೀ ತಾಂಡಾ ನಿವಾಸಿಗಳಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಕಮಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.