ಆರ್.ಅನಿತಾ
ಕಲಬುರಗಿ: ಇಲ್ಲಿನ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ಅವರನ್ನು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಗೆ ‘ವಿಶೇಷ ಕರ್ತವ್ಯ’ಕ್ಕಾಗಿ ವರ್ಗಾಯಿಸಿ ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ, ಐಪಿಎಸ್ ಅಧಿಕಾರಿ ಅಲೋಕಕುಮಾರ್ ಆದೇಶಿಸಿದ್ದಾರೆ.
ಸದರಿ ಮುಖ್ಯ ಅಧೀಕ್ಷಕರ ಪ್ರಭಾರವನ್ನು ವಹಿಸಿಕೊಂಡು ಮುಂದಿನ ಆದೇಶದ ತನಕ ಕರ್ತವ್ಯ ನಿರ್ವಹಿಸುವಂತೆ ಬೆಂಗಳೂರಿನ ಪ್ರಧಾನ ಕಚೇರಿಯ ಮುಖ್ಯ ಅಧೀಕ್ಷಕ ಕೆ.ಸುರೇಶ ಅವರನ್ನು ನಿಯೋಜಿಸಲಾಗಿದೆ.
ಇತ್ತೀಚೆಗೆ ಕಲಬುರಗಿ ಸೆಂಟ್ರಲ್ ಜೈಲು ಕೈದಿಗಳ ನಡುವೆ ಮಾರಾಮಾರಿ, ಲೋಕಲ್ ವರ್ಸಸ್ ವಲಸೆ ಕೈದಿಗಳ ಕಿತ್ತಾಟ, ಜೈಲು ಅಧಿಕಾರಿಗಳ ವಿರುದ್ಧ ಕೈದಿಗಳಿಂದ ಲಂಚದ ಆರೋಪ, ಜೈಲಿನಲ್ಲಿ ಕೈದಿಗಳಿಗೆ ದುಬಾರಿ ಮದ್ಯ, ಸಿಗರೇಟ್ನ ರಾಜಾತಿಥ್ಯ, ಕೈದಿಗಳ ಬಳಿ ಮೊಬೈಲ್ ಫೋನ್ ಪತ್ತೆಯಂಥ ಚಟುವಟಿಕೆಗಳಿಂದ ‘ಸದ್ದು’ ಮಾಡಿತ್ತು.
ಪದೇಪದೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ತನಿಖೆ ನಡೆಸಲು ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ಆನಂದ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸಲು ಅಲೋಕ್ಕುಮಾರ್ ಆದೇಶಿಸಿದ್ದರು. ಜೊತೆಗೆ ಅಲೋಕ್ಕುಮಾರ್ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.