
ಕಲಬುರಗಿ: ರಾತ್ರಿ ಸಮಯದಲ್ಲಿ ತ್ರಿಫೇಸ್ ವಿದ್ಯುತ್ ಪೂರೈಸುವ ಬದಲು ಹಗಲು ಹೊತ್ತಿನಲ್ಲಿ 12 ಗಂಟೆ ವಿದ್ಯುತ್ ಪೂರೈಸಬೇಕು, ಸುಟ್ಟ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಕಾಲಮಿತಿಯಲ್ಲಿ ಬದಲಾಯಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯ ರೈತರು ನಗರದ ಜೆಸ್ಕಾಂ ಕಾರ್ಪೋರೆಟ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರಾತ್ರಿ ಹೊತ್ತು ತ್ರಿಫೇಸ್ ವಿದ್ಯುತ್ ಪೂರೈಕೆ ಕೈಬಿಡಬೇಕು, ಹಗಲು ಹೊತ್ತಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ6ರ ತನಕ ವಿದ್ಯುತ್ ಪೂರೈಸಬೇಕು. ಸುಟ್ಟ ಟಿಸಿಗಳನ್ನು 24 ಗಂಟೆಗಳಲ್ಲಿ ಬದಲಾಯಿಸಬೇಕು, ಲೋಡ್ ಹೆಚ್ಚಳದಿಂದ ಪದೇಪದೆ ಟಿಸಿಗಳು ಸುಡುವುದನ್ನು ತಪ್ಪಿಸಲು ಹೆಚ್ಚುವರಿ ಟಿಸಿಗಳನ್ನು ಅಳವಡಿಸಬೇಕು, ಕೃಷಿ ಪಂಪ್ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು, ವಿದ್ಯುತ್ ಖಾಸಗಿಕರಣ ಮಸೂದೆ ಹಿಂಪಡೆಯಬೇಕು, ರೈತರ ಹೊಲಗಳಲ್ಲಿ ಜೋತು ಬಿದ್ದ ತಂತಿ ಬಿಗಿಯಬೇಕು, ಬಾಗಿದ ಹಾಗೂ ಶಿಥಿಲಗೊಂಡ ಕಂಬಗಳ ದುರಸ್ತಿಗೆ ಕ್ರಮವಹಿಸಬೇಕು ಎಂದು ಪ್ರತಿಭಟನೆ ನಿರತರು ಆಗ್ರಹಿಸಿದರು.
ಬಳಿಕ ಈ ಸಂಬಂಧ ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರಿಗೆ ರೈತರು ಮನವಿ ಸಲ್ಲಿಸಿದರು.
ಕೆಪಿಆರ್ಎಸ್ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿದ್ದಪ್ಪ ಕಲಶೆಟ್ಟಿ, ದಿಲೀಪ್ ನಾಗೂರೆ, ಬಾಬು ಮೇಳಕುಂದಿ, ಸಾಯಬಣ್ಣ ಕೊರಬಾ ಸೇರಿದಂತೆ ವಿವಿಧೆಡೆಯ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.