ADVERTISEMENT

ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಸುಸಜ್ಜಿತ ತಂಡ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:28 IST
Last Updated 7 ಡಿಸೆಂಬರ್ 2025, 8:28 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: ಜಿಲ್ಲೆಯನ್ನು ಸ್ಟಾರ್ಟಪ್‌ ಹಬ್ ಆಗಿಸುವ ಉದ್ದೇಶದಿಂದ ಖಾಸಗಿಯವರ ನೆರವಿನೊಂದಿಗೆ ನಗರದಲ್ಲಿ ಸುಮಾರು 15 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕ ವರ್ಕ್‌ಸ್ಪೇಸ್‌ ಆರಂಭಿಸಿ ಅಲ್ಲಿ ಐಟಿ ಸಂಬಂಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಲ್ ಎಕಾನಮಿ ಅಕ್ಸೆಲರೇಟರ್ ಪ್ರೋಗ್ರಾಂ’ (ಲೀಪ್) ಯೋಜನೆಯಡಿ ಕಲಬುರಗಿ ಸೇರಿದಂತೆ ರಾಜ್ಯದ ಆರು ಕಡೆ ಬಲವರ್ಧನೆ ಕೇಂದ್ರಗಳ ಸ್ಥಾಪನೆಗೆ ಐಟಿ, ಬಿಟಿ ಇಲಾಖೆ ಆಲೋಚಿಸಿದೆ. ಬೆಂಗಳೂರು ಹೊರತುಪಡಿಸಿ ಕಲ್ಯಾಣ‌ ಕರ್ನಾಟಕದ ಕಲಬುರಗಿಯನ್ನು ಕೇಂದ್ರೀಕರಿಸಿ ಐಟಿ ವಲಯ ವಿಸ್ತರಿಸುವ ಗುರಿಯೊಂದಿಗೆ ಸರ್ಕಾರದ ಉಪಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಗುಪ್ತಾ ಹಾಗೂ ಕೃಷಿ‌ಕಲ್ಪ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಂ. ಪಾಟೀಲ ಅವರನ್ನು ಸೇರಿಸಿಕೊಂಡು ನೂತನ ಸ್ಟಾರ್ಟ್‌ಅಪ್‌ಗಳು, ಜಿಸಿಸಿಗಳು (ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳು) ಮತ್ತು ನಾವೀನ್ಯತಾ ಕೇಂದ್ರಗಳ ಸ್ಥಾಪನೆ, ಮಾರುಕಟ್ಟೆ ವೃದ್ದಿ ಹಾಗೂ ನವೋದ್ಯಮ ಸ್ಥಾಪನೆ ಉದ್ದೇಶ ಹೊಂದಲಾಗಿದೆ’ ಎಂದರು.

ADVERTISEMENT

‘ನಗರದ ಐದಾರು ಕಡೆಗಳಲ್ಲಿ ಜಾಗಗಳನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಒಂದನ್ನು ಅಂತಿಮಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಕಲಬುರಗಿಯಲ್ಲಿ ಐಟಿ ಪಾರ್ಕ್ ಆರಂಭಿಸಲಾಗುವುದು’ ಎಂದು ಹೇಳಿದರು.

ಕೃಷಿಕಲ್ಪ ಸಂಸ್ಥೆ ಸಿಇಒ ಸಿ.ಎಂ. ಪಾಟೀಲ ಮಾತನಾಡಿ, ‘ಹಿಂದೆ ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್‌ಗಳನ್ನು ಬೆಳೆಸಲು ಮುಂದಾದಾಗ ಕಲಬುರಗಿಯಲ್ಲಿ ಇರುವಷ್ಟು ಸೌಲಭ್ಯಗಳೂ ಇರಲಿಲ್ಲ. ಆದರೂ ನಿರೀಕ್ಷೆಗಿಂತ ಹೆಚ್ಚಿನ ಪ್ರತಿಫಲ ಸಿಕ್ಕಿದೆ. ಕಲಬುರಗಿಯಲ್ಲಿ ಉದ್ಯಮಶೀಲ ಚಟುವಟಿಕೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಗ್ರಾಮೀಣ ನವೀನತೆ ಮತ್ತು ಉದ್ಯಮಿತ್ವ ಉತ್ಕೃಷ್ಟ ಕೇಂದ್ರ ಹಾಗೂ ಯುವ ಮತ್ತು ಧ್ಯೇಯಚೇತನ ಉದ್ಯಮಿಗಳಿಗೆ ಪ್ರೋಟೋಟೈಪಿಂಗ್ ಲ್ಯಾಬ್ ಅನ್ನು ಸ್ಥಾಪಿಸುತ್ತಿದೆ’ ಎಂದರು.

ಈ ಯೋಜನೆಯ ಉದ್ಘಾಟನೆ ಬರುವ ಜನವರಿಯಲ್ಲಿ ನಡೆಯಲಿದೆ. ಇದು ಪ್ರದೇಶದಲ್ಲಿ ನಿರಂತರ ಮತ್ತು ಗುರಿಪಡಿಸಿದ ಉದ್ಯಮಶೀಲ ಚಟುವಟಿಕೆಗಳಿಗೆ ಚಾಲನೆ ನೀಡುತ್ತದೆ ಎಂದು ಹೇಳಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ,‌ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಅಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಡಿಎಫ್‌ಒ ಸುಮಿತ್ ಪಾಟೀಲ, ಮಹಾನಗರ ಪಾಲಿಕೆ‌ ಕಮಿಷನರ್ ಅವಿನಾಶ್ ಶಿಂದೆ, ಕುಡಾ ಕಮಿಷನರ್ ಶಿವಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.

ಕೃಷಿ ವಲಯದ ಅಭಿವೃದ್ದಿಗೆ ಸರ್ಕಾರ ಸಿದ್ದವಿದ್ದು ಕಲಬುರಗಿಯಲ್ಲಿ ಅಂದಾಜು ₹ 50 ಕೋಟಿ ವೆಚ್ಚದಲ್ಲಿ ಕೃಷಿ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಶ್ರೇಷ್ಠತೆಯ ಕೇಂದ್ರ ಸ್ಥಾಪಿಸಲಿದೆ
ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ

‘ಕೇಂದ್ರದ ಅನ್ಯಾಯಗಳ ಬಗ್ಗೆ ಧ್ವನಿ ಎತ್ತದ ಸಂಸದರು’

ಜಲ ಜೀವನ ಮಿಷನ್ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದ್ದು ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಎಂದಾದರೂ ಬಾಯಿ ಬಿಟ್ಟಿದ್ದಾರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ‍‍ಪ್ರಶ್ನಿಸಿದರು. ‘ಜಲಜೀವನ್ ಮಿಷನ್ ನಡಿ ತಮ್ಮ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೇ ಕೆಲಸ ನಿಲ್ಲಿಸಬಾರದು ಎಂದು ಹೇಳಿ ₹ 517 ಕೋಟಿ ಹಣ ಒದಗಿಸಿದೆ. ಜಿಎಸ್ಟಿಯಿಂದಾಗಿ ₹ 15 ಸಾವಿರ ಕೋಟಿ ನಷ್ಟವಾಗಿದ್ದರ ಬಗ್ಗೆ ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆಯೇ? ನರೇಗಾದಡಿ ಕೂಸಿನ ಮನೆಗಳ ನಿರ್ವಹಣೆಗೆ ಇದ್ದ ಕಾರ್ಮಿಕರಿಗೆ ಕೂಲಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾದರೆ ಮಕ್ಕಳೊಂದಿಗೆ ಕೂಲಿಗೆ ಬರುವ ಮಹಿಳಾ ಕಾರ್ಮಿಕರ ಕಥೆಯೇನು? ಕೇಂದ್ರಕ್ಕೆ ಇಷ್ಟು ಸಂವೇದನೆಯೂ ಇಲ್ಲವೇ’ ಎಂದರು. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ರೂಪಾಯಿಯಾದರೂ ರಾಜ್ಯದ ಅಭಿವೃದ್ಧಿಗೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಡಿಸಿ ಕಚೇರಿ ಎದುರು ಕೆಲ ಕಾಲ ಸಂಚಾರ ಸ್ಥಗಿತ  

ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಐವಾನ್ ಇ ಶಾಹಿಯತ್ತ ತೆರಳಿದ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಗಾವಲು ವಾಹನಗಳು ಶಾಸಕರು ವಿವಿಧ ನಿಗಮಗಳ ಅಧ್ಯಕ್ಷರು ಅಧಿಕಾರಿಗಳ ವಾಹನಗಳು ದಾಟಲು ಕೆಲ ಕಾಲ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಎಸ್‌ವಿಪಿ ವೃತ್ತದಿಂದ ಜಗತ್ ವೃತ್ತದ ಕಡೆಗೆ ತೆರಳುವ ವಾಹನಗಳನ್ನು ಸಚಿವರ ಬೆಂಗಾವಲು ವಾಹನಗಳ ಸುಗಮ ಸಂಚಾರಕ್ಕಾಗಿ ಪೊಲೀಸರು ತಡೆದಿದ್ದರಿಂದ ವಾಹನಗಳ ಸಾಲು ಎಸ್‌ವಿಪಿ ವೃತ್ತದವರೆಗೂ ಇತ್ತು. ಈ ಬಾರಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.