ADVERTISEMENT

ಕಲಬುರಗಿ: ಪ್ರತಿಭಟನೆಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಸಾವಿರಾರು ಮಂದಿ ಭಾಗಿ

ಎಸ್‌ಟಿಗೆ ಸೇರ್ಪಡೆಗಾಗಿ ಬೀದಿಗಿಳಿದು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 9:43 IST
Last Updated 29 ಡಿಸೆಂಬರ್ 2025, 9:43 IST
   

ಕಲಬುರಗಿ: ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ಕೋಲಿ, ಕಬ್ಬಲಿಗ ಸಮಾಜದ ಸಾವಿರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ‌ವ್ಯಕ್ತಪಡಿಸಿದರು. ಜಗತ್ ವೃತ್ತದಲ್ಲಿ‌ ಜನರು ಸೇರುವ ತನಕ ಎರಡು ಗಂಟೆ ಕಾಲ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಎಲ್ಲಿ ನೋಡಿದರೂ ನಿಜಶರಣ ಚೌಡಯ್ಯ ಅಂಬಿಗರ‌‌ ಚಿತ್ರವುಳ್ಳ ಬಾವುಟಗಳು, 'ಜೈ ಕೋಲಿ, ಜೈ ಅಂಬಿಗ' ಬರೆದ ಕೇಸರಿ ಟೊಪ್ಪಿಗೆಗಳು ರಾರಾಜಿಸಿದವು.

ಪ್ರತಿಭಟನೆ ಜಾಥಾ ಆರಂಭಕ್ಕೂ‌ ಮುನ್ನ ಡಾ.ಅಂಬೇಡ್ಕರ್ ಮೂರ್ತಿ ಹಾಗೂ ಬಸವೇಶ್ವರ ಪ್ರತಿಮೆಗೆ ಪುಷ್ಪಹಾರ ಹಾಕಿ ಗೌರವಿಸಲಾಯಿತು.

ADVERTISEMENT

ಬಳಿಕ ಮಧ್ಯಾಹ್ನ 1.30ಕ್ಕೆ ಹಾವೇರಿಯ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹಾಗೂ ವಿಧಾನ ಪರಿಷತ್ ‌ಸದಸ್ಯ ಎನ್.ರವಿಕುಮಾರ್ ‌ಅವರು ಅಂಬಿಗರ‌ ಚೌಡಯ್ಯ ಬಾವುಟ ಬೀಸುವ‌ ಮೂಲಕ ಮೆರವಣಿಗೆಗೆ ಚಾಲನೆ‌ ನೀಡಿದರು.

ಮಲ್ಲಣ್ಣಯ್ಯ ಸ್ವಾಮೀಜಿ, ಜೆಡಿಎಸ್‌ ಮುಖಂಡ ಶಿವಕುಮಾರ ನಾಟೀಕಾರ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಸೇರಿದಂತೆ ‌ಹಲವರು ಇದ್ದರು‌.

ಪ್ರತಿಭಟನಾ ಜಾಥಾವು ಜಗತ್ ವೃತ್ತದಿಂದ ಅನ್ನಪೂರ್ಣ ‌ಕ್ರಾಸ್, ಲಾಹೋಟಿ ಪೆಟ್ರೋಲ್ ಬಂಕ್ ಎದುರಿನಿಂದ ಜಿಲ್ಲಾಧಿಕಾರಿ ಕಚೇರಿ ‌ತನಕ ಪ್ರತಿಭಟನೆ ‌ನಡೆಯಿತು.

'ಜೈ ಕೋಲಿ, ಜೈ ಅಂಬಿಗ' ಎಂದು ಬರೆದ ಟೊಪ್ಪಿಗೆ ಧರಿಸಿದ್ದ ನೂರಾರು ಮಂದಿ, ನಿಜಶರಣ ಅಂಬಿಗರ ಚೌಡಯ್ಯರ ಬಾವುಟಗಳನ್ನು‌ ಬೀಸುತ್ತ ಮೆರವಣಿಗೆಯಲ್ಲಿ ಸಾಗಿದರು.

ಪ್ರತಿಭಟನೆ‌ಯಿಂದಾಗಿ ಸರ್ದಾರ್ ವಲ್ಲಭಭಾಯಿ ‌ಪಟೇಲ್‌ ವೃತ್ತದಿಂದ ಜಗತ್‌ವೃತ್ತದ ತನಕ ವಾಹನ ‌ಸಂಚಾರದಲ್ಲಿ ಅಸ್ತವ್ಯಸ್ತವಾಯಿತು.

ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ತಲುಪಿದ್ದು, ಇಲ್ಲಿ ಸಮಾಜದ‌ ಸ್ವಾಮೀಜಿಗಳು, ಮುಖಂಡರು ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿಭಟನೆ ಅಂಗವಾಗಿ ನಗರದ‌ ಹಲವು ರಸ್ತೆಗಳಲ್ಲಿ ಪೊಲೀಸರು ಮೊದಲೇ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ‌ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.