
ಕಲಬುರಗಿ: ಕಕ್ಷಿದಾರರೊಬ್ಬರ ಪರವಾಗಿ ಉತ್ತಮವಾಗಿ ವಾದ ಮಂಡಿಸಲು ₹ 50 ಸಾವಿರಕ್ಕೆ ಬೇಡಿಕೆ ಇಟ್ಟು, ₹ 25 ಸಾವಿರ ಲಂಚ ಪಡೆಯುತ್ತಿದ್ದ ನಗರದ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕಂದನುಲಿ ಗ್ರಾಮದ ಕಕ್ಷಿದಾರ ನವೀನ್ ಅನಂತಯ್ಯ ಎಂಬುವವರು ದಾಖಲಿಸಿದ್ದ ಜಾತಿನಿಂದನೆ ಪ್ರಕರಣವನ್ನು ರಾಜಮಹೇಂದ್ರ ಅವರು ನಿರ್ವಹಿಸುತ್ತಿದ್ದರು. ಪ್ರಕರಣದಲ್ಲಿ ಉತ್ತಮವಾಗಿ ವಾದ ಮಾಡಲು ಆರೋಪಿ ರಾಜಮಹೇಂದ್ರ ನವೀನ್ಗೆ ₹ 50 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ₹ 20 ಸಾವಿರ ಹಣವನ್ನೂ ಪಡೆದಿದ್ದರು. ಉಳಿದ ಹಣಕ್ಕೆ ಬೇಡಿಕೆ ಇಟ್ಟಾಗ ಬೇಸತ್ತ ನವೀನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿ ಶೀಲವಂತ ಅವರು ₹ 25 ಸಾವಿರ ನಗದು ಪಡೆಯುವಾಗ ದಾಳಿ ನಡೆಸಿ ವಶಕ್ಕೆ ಪಡೆದರು.
ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.