ADVERTISEMENT

ಕಲಬುರಗಿ–ಯಾದಗಿರಿ ಹೆದ್ದಾರಿಯಲ್ಲಿ ಕಾನ್‌ಸ್ಟೆಬಲ್ ಶವ ಪತ್ತೆ: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 6:03 IST
Last Updated 21 ಮಾರ್ಚ್ 2023, 6:03 IST
ಕರಿಯಪ್ಪ ಮಿರಗಿ
ಕರಿಯಪ್ಪ ಮಿರಗಿ   

ವಾಡಿ: ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ–150ರ ಲಾಡ್ಲಾಪುರ ಸಮೀಪ ವಾಡಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕರಿಯಪ್ಪ ಮಿರಗಿ (33) ಎಂಬುವರ ಶವ ಪತ್ತೆಯಾಗಿದೆ. ಅವರ ಮುಖಕ್ಕೆ ಮಾತ್ರ ಪೆಟ್ಟಾಗಿದ್ದು, ಇದು ಅಪಘಾತ ಅಥವಾ ಕೊಲೆಯೇ ಎಂಬುದರ ಬಗ್ಗೆ ಅನುಮಾನ ಮೂಡಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತೆಗ್ಗಳ್ಳಿ ನಿವಾಸಿ ಕರಿಯಪ್ಪ 8 ತಿಂಗಳ ಹಿಂದೆ ವಾಡಿ ಠಾಣೆಗೆ ವರ್ಗವಾಗಿದ್ದರು. ವಿಜಯಪುರ ಜಿಲ್ಲೆಗೆ ವರ್ಗಾವಣೆ ಬಯಸಿ ಈಚೆಗೆ ಇಲಾಖೆಗೆ ಪತ್ರ ಬರೆದಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

‘ನಾಲವಾರ ಚೆಕ್ ಪೋಸ್ಟ್ ಕರ್ತವ್ಯ ಮುಗಿಸಿಕೊಂಡು ಭಾನುವಾರ ರಾತ್ರಿ 8ಕ್ಕೆ ಮನೆಗೆ ಬಂದ ಕರಿಯಪ್ಪ ಕುಟುಂಬದ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಊಟದ ಬಳಿಕ ಹೊರಗೆ ಹೋಗಿ ಬರುವುದಾಗಿ ಪತ್ನಿ ಹೇಳಿದವರು ಪುನಃ ವಾಪಸ್ ಬರಲಿಲ್ಲ. ಅವರ ಶವ ಪತ್ತೆಯಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಶಹಾಬಾದ್ ಡಿವೈಎಸ್ಪಿ ಶೀಲವಂತ ಹೊಸಮನಿ, ವಾಡಿ ಪಿಎಸ್ಐ ಸುದರ್ಶನ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.