ADVERTISEMENT

ಸಿದ್ದರಾಮಯ್ಯ ಅವರ ವಾಚ್ ಮೂಲ ತಿಳಿಯಲು ಐಟಿಯಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಸವಾಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:02 IST
Last Updated 6 ಡಿಸೆಂಬರ್ 2025, 14:02 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕಟ್ಟಿರುವ ದುಬಾರಿ ವಾಚ್ ಯಾವ ಮೂಲದಿಂದ ಬಂದಿದೆ ಎಂದು ಬಿಜೆಪಿಯವರು ವೃಥಾ ಆರೋಪ ಮಾಡುವ ಬದಲು ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಯಾರು ಏನು ಊಟ ಮಾಡಿದರು, ಯಾವ ಬಟ್ಟೆ ಹಾಕಿಕೊಂಡರು, ಯಾವ ಕಂಪನಿ ವಾಚ್ ಧರಿಸಿದರು ಎಂಬುದೇ ಮುಖ್ಯವಾದಂತಿದೆ. ಪ್ರಧಾನಿ ನರೇಂದ್ರ ಮೋದಿಯವರು ₹10 ಲಕ್ಷ ಮೊತ್ತದ ತಮ್ಮದೇ ಹೆಸರನ್ನು ಅಳವಡಿಸಿದ್ದ ಸೂಟ್ ಹಾಕಿಕೊಂಡಾಗ ಅದರ ಆದಾಯ ಮೂಲ ಎಲ್ಲಿಯದು ಎಂಬುದನ್ನು ಏಕೆ ಪ್ರಶ್ನಿಸಲಿಲ್ಲ’ ಎಂದು ತಿರುಗೇಟು ನೀಡಿದರು.

ADVERTISEMENT

‘ಈ ವಾಚ್ ಧರಿಸಿದವರು ಆಸ್ತಿವಂತರಿದ್ದಾರೆ. ತಮಗಿಷ್ಟವಾದ ವಾಚ್ ಹಾಕಿಕೊಂಡಿರಬಹುದು. ಬಿಜೆಪಿಯವರಿಗೇಕೆ ಇಷ್ಟು ಅಸಹನೆ’ ಎಂದು ಹರಿಹಾಯ್ದರು.

‘ತಮ್ಮದು ಸಾಂಸ್ಕೃತಿಕ ಸಂಘಟನೆ ಎಂದು ನೂರು ವರ್ಷಗಳ ಇತಿಹಾಸ ಹೊಂದಿರುವ ಆರ್‌ಎಸ್‌ಎಸ್‌ ಹೇಳುತ್ತಿದ್ದು, ಗುರುದಕ್ಷಿಣೆ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ನಿಧಿ ಸಂಗ್ರಹಿಸಿದೆ. ಅದಕ್ಕೆ ಆದಾಯ ತೆರಿಗೆ ಕಟ್ಟಿದ್ದಾರೆಯೇ? ಅಮೆರಿಕದಲ್ಲಿ ತನ್ನ ಪರ ಲಾಬಿ ಮಾಡಲು ಆರ್‌ಎಸ್‌ಎಸ್‌ 330 ಸಾವಿರ ಡಾಲರ್ ವೆಚ್ಚ ಮಾಡಿದೆ. ಇದಕ್ಕೆ ಹಣ ಎಲ್ಲಿಂದ ಬಂತು? ಇವುಗಳಿಗೆ ಮೊದಲು ಬಿಜೆಪಿಯವರು ಉತ್ತರ ಹೇಳಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.