ADVERTISEMENT

ಕಲಬುರಗಿ: 10 ತಿಂಗಳಲ್ಲಿ 4,799 ರಸ್ತೆ ಅಪಘಾತ; 1,571 ಮಂದಿ ಸಾವು

2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗಿನ ವರದಿ

ಭೀಮಣ್ಣ ಬಾಲಯ್ಯ
Published 18 ಡಿಸೆಂಬರ್ 2025, 4:27 IST
Last Updated 18 ಡಿಸೆಂಬರ್ 2025, 4:27 IST
ಅಪಘಾತ
ಅಪಘಾತ   

ಕಲಬುರಗಿ: ಅತಿಯಾದ ವೇಗ, ಅಜಾಗರೂಕತೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನಗಳಲ್ಲಿ ತಾಂತ್ರಿಕ ದೋಷ, ಹಾಳಾದ ರಸ್ತೆ, ತರಬೇತಿ ಕೊರತೆ ಸೇರಿ ವಿವಿಧ ಕಾರಣಗಳಿಗಾಗಿ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.

2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೂ 10 ತಿಂಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬರೋಬ್ಬರಿ 4,799 ರಸ್ತೆ ಅಪಘಾತಗಳು ಸಂಭವಿಸಿವೆ. 1,571 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ತಿಂಗಳಿಗೆ ಸರಾಸರಿ 157 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. 6,517 ಮಂದಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಪ್ಪಳದಲ್ಲಿ ಹೆಚ್ಚು ಅಪಘಾತ: ಕೊಪ್ಪಳ ಹೆಚ್ಚು ಅಪಘಾತ ಸಂಭವಿಸಿದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 1,014 ಅಪಘಾತಗಳು ಸಂಭವಿಸಿವೆ. ಎರಡನೇ ಸ್ಥಾನದಲ್ಲಿ ಕಲಬುರಗಿ ಜಿಲ್ಲೆ ಇದೆ. ಕಲಬುರಗಿ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 954 ಅಪಘಾತಗಳು ಸಂಭವಿಸಿವೆ. ಬೀದರ್‌ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 818 ರಸ್ತೆ ಅಪಘಾತಗಳು ನಡೆದಿವೆ. ರಾಯಚೂರಿನಲ್ಲಿ 736, ಬಳ್ಳಾರಿ 471, ವಿಜಯನಗರ 461 ಮತ್ತು ಯಾದಗಿರಿಯಲ್ಲಿ 345 ಅಪಘಾತಗಳು ನಡೆದಿವೆ.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಮಂದಿ ಸಾವು: ರಸ್ತೆ ಅಪಘಾತದಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಹೆಚ್ಚು ಜನ ಅಂದರೆ 282 ಮಂದಿ ಉಸಿರು ಚೆಲ್ಲಿದ್ದಾರೆ. ರಾಯಚೂರು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, 264 ಮಂದಿ ಕಣ್ಣು ಮುಚ್ಚಿದ್ದಾರೆ. ಬೀದರ್‌ ಜಿಲ್ಲೆ 263, ಕೊಪ್ಪಳ 260, ಬಳ್ಳಾರಿ 181, ವಿಜಯನಗರ 178 ಹಾಗೂ ಯಾದಗಿರಿಯಲ್ಲಿ 143 ಮಂದಿ ಮೃತಪಟ್ಟಿದ್ದಾರೆ.

ಕೊಪ್ಪಳದಲ್ಲಿ ಹೆಚ್ಚು ಮಂದಿಗೆ ಗಾಯ: ಏಳು ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು ಮಂದಿ ಅಂದರೆ 1,407 ಮಂದಿ ಗಾಯಗೊಂಡಿದ್ದಾರೆ. ಕಲಬುರಗಿ 1,233, ಬೀದರ್‌ 1,111, ರಾಯಚೂರು 936, ವಿಜಯನಗರ 691, ಬಳ್ಳಾರಿ 620 ಮತ್ತು ಯಾದಗಿರಿಯಲ್ಲಿ 519 ಮಂದಿಗೆ ಗಾಯಗಳಾಗಿವೆ.  

‘ತಪಾಸಣೆಗೆ ಬೇಕು ವೇಗ’: ‘ರಾತ್ರಿ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸರು ರಾತ್ರಿ ವೇಳೆ ಬ್ರೀಥ್ ಅನಲೈಸರ್‌ (ಆಲ್ಕೋ ಮೀಟರ್‌) ಬಳಸಿ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಬೇಕು. ಇದನ್ನು ನಿಯಮಿತವಾಗಿ ನಡೆಸಿ ದಂಡ ವಿಧಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ರಸ್ತೆ ಸುರಕ್ಷತಾ ನಿಯಮ ಪಾಲಿಸದವರ ಪರವಾನಗಿ ಅಮಾನತು ಮಾಡಬೇಕು. ಅಪಘಾತ ವಲಯಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು’ ಎಂದು ಕಲಬುರಗಿ ನಿವಾಸಿ ವಿಜಯಕುಮಾರ ಒತ್ತಾಯಿಸುತ್ತಾರೆ.

ಸೂಚನಾ ಫಲಕ

‘ಸಾರ್ವಜನಿಕ ಸಾರಿಗೆ ಆದ್ಯತೆಯಾಗಲಿ’

‘ಇಲಾಖೆಯಿಂದ ನಿಯಮಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ತಪಾಸಣೆಯನ್ನೂ ಹೆಚ್ಚಿಸಿದ್ದೇವೆ. ನಿಯಮ ಉಲ್ಲಂಘನೆ ಕಂಡುಬಂದರೆ ಕೂಡಲೇ ಪರವಾನಗಿ ಅಮಾನತು ಮಾಡುತ್ತಿದ್ದೇವೆ. ಆದರೂ ಜನರು ಜಾಗೃತಿಗೊಳ್ಳುತ್ತಿಲ್ಲ. ನಿಯಮ ಪಾಲಿಸುತ್ತಿಲ್ಲ. ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ. ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ನಿಯಮ ಪಾಲಿಸಬೇಕು. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚು ಮಾಡಿದರೆ ಅಪಘಾತ ತಗ್ಗಿಸಬಹುದು’ ಎಂದು ರಸ್ತೆ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಸಿದ್ದಪ್ಪ ಕಲ್ಹೇರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.