
ಕಲಬುರಗಿ: ‘ಮಹಾದಾಸೋಹಿ ಶರಣಬಸವೇಶ್ವರ 204ನೇ ಮಹಾದಾಸೋಹ ಯಾತ್ರಾ ಮಹೋತ್ಸವದ ನಿಮಿತ್ತ ಮಾ. 7ರಂದು ಸಂಜೆ 6 ಗಂಟೆಗೆ ಉಚ್ಚಾಯ ಮತ್ತು ಮಾ.8ರಂದು ಸಂಜೆ 6 ಗಂಟೆಗೆ ರಥೋತ್ಸವ ಜರುಗಲಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ದಾಕ್ಷಾಯಣಿ ಎಸ್. ಅಪ್ಪ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.
ನಗರದ ಶರಣಬಸವೇಶ್ವರ ಮಹಾಸಂಸ್ಥಾನದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಉಚ್ಚಾಯ ಮತ್ತು ರಥೋತ್ಸವಕ್ಕೆ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಚಾಲನೆ ನೀಡುವವರು. ಅಲ್ಲದೆ ರಥೋತ್ಸವದ ದಿನ ಭಕ್ತ ಸಂಕುಲಕ್ಕೆ ಶರಣಬಸವೇಶ್ವರ ಪರುಷ ಬಟ್ಟಲು ಮತ್ತು ಲಿಂಗದ ಸಜ್ಜಿಕೆಗಳನ್ನು ತೋರಿಸಲಿದ್ದಾರೆ’ ಎಂದು ಹೇಳಿದರು.
‘8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಅವರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಭಾರವಾದ ಮನಸ್ಸಿನಿಂದ ರಥೋತ್ಸವದ ತಯಾರಿಗಳನ್ನು ಮಾಡುತ್ತಿದ್ದೇವೆ. ದೇವಸ್ಥಾನದ ಆವರಣದಲ್ಲಿ ಜಾತ್ರಾ ನಿಮಿತ್ತ 30 ಅಡಿ ಎತ್ತರದ ಲಿಂ. ಶರಣಬಸಪ್ಪ ಅಪ್ಪ ಅವರ ಕಟೌಟ್ ನಿಮಿಸಲಾಗುತ್ತಿದೆ. ಅಲ್ಲದೆ ಅವರ ಸಂಕಲ್ಪದಂತೆ ದೇವಸ್ಥಾನ ಆವರಣದಲ್ಲಿನ ಈ ಹಿಂದಿನ ಎಲ್ಲ ಪಿಠಾಧಿಪತಿಗಳ ಸಮಾಧಿಗಳಿಗೆ ಗೋಪುರ ನಿರ್ಮಿಸಲಾಗುತ್ತಿದೆ’ ಎಂದರು.
ನಾಟಕ ಪ್ರದರ್ಶನ: ‘ರಥೋತ್ಸವ ಪೂರ್ವಭಾವಿಯಾಗಿ ದೇವಸ್ಥಾನದ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಲಿಂ. ಶರಣಬಸಪ್ಪ ಅಪ್ಪ ಜೀವನ ಮತ್ತು ಅವರ ನೀಡಿದ ಕೊಡುಗೆ ಕುರಿತ ಜ್ಞಾನ ದಾಸೋಹಿ ಎಂಬ ಸರಣಿ ನಾಟಕ ಪ್ರದರ್ಶನವು ಮಾ. 4ರಿಂದ 7 ರವರೆಗೆ ನಿತ್ಯ ಸಂಜೆ 5.30ಕ್ಕೆ ನಡೆಯಲಿದೆ. ಅಲ್ಲದೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಗೀಗೀ ಪದ ಸಮ್ಮೇಳನ: ‘ಜನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಡಿಕೆಯಂತೆ ಮಾ. 8, 9 ಮತ್ತು 10ರಂದು ರಾತ್ರಿ ರಾಜ್ಯದ ಪ್ರಖ್ಯಾತ ಕಲಾವಿದರಿಂದ ಗೀಗೀ ಪದಗಳ ಸಮ್ಮೇಳನ ನಡೆಯಲಿದೆ’ ಎಂದರು.
ಸಂಸ್ಥಾನದ ಆಡಳಿತ ಅಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡೀನ್ ಟಿ.ವಿ ಶಿವಾನಂದನ್, ನೀಲಾಂಬಿಕಾ ಪೊಲೀಸ್ ಪಾಟೀಲ ಉಪಸ್ಥಿತರಿದ್ದರು.
ರಥೋತ್ಸವ ವೇಳೆಯಲ್ಲಿ ಎಲ್ಲ ಭಕ್ತರು ಶಾಂತಿ ಮತ್ತು ಶಿಸ್ತಿನಿಂದ ಪಾಲ್ಗೊಂಡು ಜಾತ್ರೆಯ ಯಶಸ್ಸಿಗೆ ಕೈಜೊಡಿಸಬೇಕುದಾಕ್ಷಾಯಣಿ ಎಸ್. ಅಪ್ಪ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್
ಮಾ. 7 ಮತ್ತು 8ರಂದು ನಡೆಯುವ ಉಚ್ಚಾಯ ಹಾಗೂ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕುದೊಡ್ಡಪ್ಪ ಅಪ್ಪ ಶರಣಬಸವೇಶ್ವರ ಸಂಸ್ಥಾನ 9ನೇ ಪಿಠಾಧಿಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.