ADVERTISEMENT

‘ಮಾನಸಿಕ ರೋಗಿಗಳ ನಿರ್ಲಕ್ಷ್ಯ ಸಲ್ಲದು’

ಆರೋಗ್ಯ ಇಲಾಖೆ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:15 IST
Last Updated 10 ಸೆಪ್ಟೆಂಬರ್ 2020, 16:15 IST
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ ಮಾತನಾಡಿದರು. ಡಾ. ಸುಧಾರಾಣಿ, ಡಾ. ಶ್ರೀಕಾಂತ, ಡಾ. ವಿಜಯಕುಮಾರ್, ಡಾ. ರಾಜಕುಮಾರ ಕುಲಕರ್ಣಿ ಇದ್ದರು
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ ಮಾತನಾಡಿದರು. ಡಾ. ಸುಧಾರಾಣಿ, ಡಾ. ಶ್ರೀಕಾಂತ, ಡಾ. ವಿಜಯಕುಮಾರ್, ಡಾ. ರಾಜಕುಮಾರ ಕುಲಕರ್ಣಿ ಇದ್ದರು   

ಕಲಬುರ್ಗಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರನ್ನು ನಿರ್ಲಕ್ಷಿಸುವುದು ಸಲ್ಲ. ಮಾನಸಿಕ ಕಾಯಿಲೆ ರೋಗವೆಂದು ಪರಿಗಣಿಸಿ ಖಿನ್ನತೆಯಿಂದ ಬಳಲುತ್ತಿರುವುವವರಿಗೆ ಆಪ್ತ ಸಮಾಲೋಚನೆ ಮತ್ತು ಸೂಕ್ತ ಉಪಚಾರ ನೀಡುವ ಮೂಲಕ ಅವರನ್ನು ಗುಣಪಡಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ ಹೇಳಿದರು.

ಗುರುವಾರ ಇಲ್ಲಿನ ಎಚ್.ಐ.ಟಿ. ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜರುಗಿದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಅವಿಭಕ್ತ ಕುಟಂಬದ ಜೀವನ ಶೈಲಿಯಲ್ಲಿ ಯಾವುದೇ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಯಾದಾಗ ಹಿರಿಯರು, ಕುಟುಂಬಸ್ಥರು ಸಂತೈಸುವ ಉತ್ತಮ ಮಾರ್ಗದರ್ಶಕಗಳಾಗಿದ್ದರು. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಮತ್ತು ಪ್ರತ್ಯೇಕ ವಾಸದ ಜೀವನ ಶೈಲಿಯಿಂದ ಒಂಟಿತನ, ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಕಾಣಬಹುದಾಗಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗದಲ್ಲಿ ಆತನ ಇಡೀ ಕುಟುಂಬದ ಜೀವನವೇ ಕಳೆದುಕೊಂಡಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ವಿಶ್ವದಲ್ಲಿ ಪ್ರತಿ 40 ಸೆಕೆಂಡ್‍ಗೆ ಒಬ್ಬರಂತೆ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿ 1 ಲಕ್ಷದ ಜನಸಂಖ್ಯೆಗೆ 11ರಿಂದ 12 ಜನರು ಇದಕ್ಕೆ ಬಲಿಯಾಗುತ್ತಿದ್ದರೆ, ಕರ್ನಾಟಕದಲ್ಲಿ ಇದರ ಸಂಖ್ಯೆ 17–18ರಷ್ಟಿದೆ’ ಎಂದರು.

ಇಲಾಖೆಯ ಬೆಂಗಳೂರು ವಿಭಾಗದ ಉಪನಿರ್ದೇಶಕ ಡಾ.ವಿಜಯಕುಮಾರ ಮಾತನಾಡಿ, ಇತ್ತೀಚೆಗೆ ಶಾಲಾ–ಕಾಲೇಜು ಮಕ್ಕಳು ಮತ್ತು ಯುವ ಸಮೂಹ ಆತ್ಮಹತ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣವಾದರೂ ಪ್ರಾಣ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುವ ಶಿಕ್ಷಕರು ಆಪ್ತ ಸಮಾಲೋಚನೆ ಮೂಲಕ ಮಕ್ಕಳ ಮತ್ತು ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಿಂದ ತಡೆಗಟ್ಟಬಹುದಾಗಿದೆ’ ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್ಒ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ‘ಕೋವಿಡ್–19 ತುರ್ತು ಪರಿಸ್ಥಿತಿಯಲ್ಲಿ 24 ಗಂಟೆ ನಾವೆಲ್ಲರೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ದೈಹಿಕ ಮತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. 365 ದಿನಗಳ ಕಾಲ ವೈದ್ಯ ಮತ್ತು ಆರೋಗ್ಯ ಸಿಬ್ಬಂದಿ ವಾರಿಯರ್‌ಗಳಾಗಿಯೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ’ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ಮಾತನಾಡಿ, ಸಂಖ್ಯೆವಾರು ಪ್ರಮಾಣ ನೋಡಿದರೆ ಪುರುಷರು ಮಹಿಳೆಯರಿಗಿಂತ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಾರೆ. ಮಹಿಳೆಯರು ಆತ್ಮಹತ್ಯೆಗೆ ಹೆಚ್ಚು ಪ್ರಯತ್ನಿಸುತ್ತಾರೆ. ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೊದಲನೇ ಮತ್ತು ಎರಡನೇ ಮಂಗಳವಾರದಂದು ಮನೋಚೈತನ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಾನಸಿಕ ಅಸ್ವಸ್ಥರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.

ಮನೋವೈದ್ಯರಾದ ಡಾ.ಶ್ರೀಕಾಂತ ಮತ್ತು ಡಾ.ಸುಧಾರಾಣಿ ಆತ್ಮಹತ್ಯೆ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು.

ಪ್ರೌಢಶಾಲಾ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಇದ್ದರು. ಆಪ್ತ ಸಮಾಲೋಚಕಿ ಸಂತೋಷಿ ಎಂ. ಗೊಳೆ ಸ್ವಾಗತಿಸಿದರು. ನಾಗರಾಜ ಬಿರಾದರ ವಂದಿಸಿದರು. ರೇಖಾ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.