ADVERTISEMENT

ಚೆಪ್ಪುಡಿರ ತಂಡಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ

5 ದಿನಗಳ ಕಾಲ ನಡೆದ ಟೂರ್ನಿಗೆ ವೈಭವೋಪೇತ ತೆರೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:46 IST
Last Updated 31 ಡಿಸೆಂಬರ್ 2025, 6:46 IST
ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಮಂಗಳವಾರ ನಡೆದ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್ ಟೂರ್ನಿಯನ್ನು ಜಯಿಸಿದ ಚೆಪ್ಪುಡಿರ ತಂಡ 
ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಮಂಗಳವಾರ ನಡೆದ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್ ಟೂರ್ನಿಯನ್ನು ಜಯಿಸಿದ ಚೆಪ್ಪುಡಿರ ತಂಡ    

ಮಡಿಕೇರಿ: ಚೊಚ್ಚಲ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಚೆಪ್ಪುಡಿರ ತಂಡ ತನ್ನ ಮುಡಿಗೇರಿಸಿಕೊಂಡಿತು. ಕುಲ್ಲೇಟಿರ ತಂಡ 2ನೇ ಸ್ಥಾನ ಪಡೆದುಕೊಂಡಿತು. ಈ ಮೂಲಕ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಟೂರ್ನಿಗೆ ತೆರೆ ಬಿತ್ತು.

ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಚೆಪ್ಪುಡಿರ ಮತ್ತು ಕುಲ್ಲೇಟಿರ ನಡುವೆ ನಡೆದ ಅಂತಿಮ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ಸಾಧಿಸಿತು. ಚೆಪ್ಪುಡಿರ ಸೋಮಣ್ಣ ಒಂದು ಗೋಲು ದಾಖಲಿಸಿ ಗೆಲುವಿಗೆ ಕಾರಣರಾದರು. ಉಳಿದೆ‌ಲ್ಲಾ ಆಟಗಾರರು ರಕ್ಷಣಾತ್ಮಕವಾಗಿ ಆಡಿ ಎದುರಾಳಿ ತಂಡವು ಒಂದೇ ಒಂದು ಗೋಲಿ ಗಳಿಸದಂತೆ ತಡೆಯುವಲ್ಲಿ ಸಫಲರಾದರು.

ವಿಜೇತ ಚೆಪ್ಪುಡಿರ ತಂಡಕ್ಕೆ ₹ 2 ಲಕ್ಷ,  ದ್ವಿತೀಯ ಸ್ಥಾನ ಪಡೆದ ಕುಲ್ಲೇಟಿರ ತಂಡಕ್ಕೆ ₹ 1 ಲಕ್ಷ, ಸೆಮಿಫೈನಲ್‌ಗೆ ಅರ್ಹತೆ ಪಡೆದ ಮಂಡೇಪಂಡ ಮತ್ತು ಕುಪ್ಪಂಡ ತಂಡಕ್ಕೆ ತಲಾ ₹ 50 ಸಾವಿರ ಹಾಗೂ ಉಳಿದ 8 ತಂಡಗಳಿಗೆ ತಲಾ ₹ 25 ಸಾವಿರ ಬಹುಮಾನ ಮತ್ತು ಸ್ಮರಣಿಕೆಯನ್ನು ನೀಡಲಾಯಿತು.

ADVERTISEMENT

ಬೆಸ್ಟ್ ಗೋಲ್ ಕೀಪರ್ ಕುಲ್ಲೇಟಿರ ವಚನ್ ಕಾಳಪ್ಪ, ಬೆಸ್ಟ್ ಫಾರ್ವರ್ಡ್ ಚೆಪ್ಪುಡಿರ ಚೇತನ್ ಚಿಣ್ಣಪ್ಪ, ಬೆಸ್ಟ್ ಡಿಫೆಂಡರ್ ಮಂಡೇಪಂಡ ಭುವನ್ ನಾಣಯ್ಯ, ಬೆಸ್ಟ್ ಮಿಡ್ ಫೀಲ್ಡರ್ ಕುಪ್ಪಂಡ ಸೋಮಯ್ಯ, ಬೆಸ್ಟ್ ಅಪ್ ಕಮಿಂಗ್ ಪ್ಲೇಯರ್ ಚೆಪ್ಪುಡಿರ ಲೆನನ್ ಮಾದಪ್ಪ ಹಾಗೂ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಚೆಪ್ಪುಡಿರ ಮಂದಣ್ಣ ಪ್ರಶಸ್ತಿಗೆ ಭಾಜನರಾದರು.

ಐದು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ಕೌಟುಂಬಿಕ ಕೊಡವ ಹಾಕಿ ಹಬ್ಬದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. ‘ಎ’ ಗುಂಪಿನಲ್ಲಿ ಮಂಡೇಪಂಡ, ಪರದಂಡ, ಕೋಣೇರಿರ, ‘ಬಿ’ ಗುಂಪಿನಲ್ಲಿ ಚೆಪ್ಪುಡಿರ, ಪಳಂಗಂಡ, ಅಂಜಪರವಂಡ, ಮುಕ್ಕಾಟಿರ(ಬೊಂದ), ‘ಡಿ' ಗುಂಪಿನಲ್ಲಿ ನೆಲ್ಲಮಕ್ಕಡ, ಕುಲ್ಲೇಟಿರ, ಮಾಚಮಾಡ, ‘ಡಿ' ಗುಂಪಿನಲ್ಲಿ ಕುಪ್ಪಂಡ, ಕೂತಂಡ ಮತ್ತು ಕಲಿಯಂಡ ತಂಡಗಳು ಸೆಣಸಾಡಿದವು.

ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಚೆಪ್ಪುಡಿರ ಎಸ್.ಪೂಣಚ್ಚ, ಉಪಾಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರಾದ ಮುದ್ದಂಡ ರಶಿನ್ ಸುಬ್ಬಯ್ಯ, ಬೊಳ್ಳೆಪಂಡ ಜೆ.ಕಾರ್ಯಪ್ಪ, ಕಾಳಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಎಸ್.ಸೋಮಯ್ಯ, ಚೆಕ್ಕೇರ ಆದರ್ಶ್, ಮಂಡೇಪಂಡ ಮುಖೇಶ್ ಮೊಣ್ಣಯ್ಯ, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಹಾಕಿ ಒಲಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ವಿ.ಆರ್.ರಘುನಾಥ್, ಹಾಕಿ ಕೂರ್ಗ್ ಕಾರ್ಯದರ್ಶಿ ಅಮ್ಮಂಡಿರ ಚೇತನ್ ಕಾವೇರಿಯಪ್ಪ, ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಕೊಡವ ಹಾಕಿ ಅಕಾಡೆಮಿ ವತಿಯಿಂದ ಹಾಕಿ ಕೂರ್ಗ್, ಎಂ.ಬಾಡಗ ಸ್ಪೋರ್ಟ್ಸ್ ರಿಕ್ರಿಯೇಷನ್ ಸಂಸ್ಥೆ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಸಹಕಾರದೊಂದಿಗೆ ಈ ಟೂರ್ನಿ ನಡೆದಿದ್ದು, 25 ವರ್ಷಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ಭಾಗವಹಿಸಿದ್ದವು.

ಮಡಿಕೇರಿ ತಾಲ್ಲೂಕಿನ ಮೂರ್ನಾಡು ಗ್ರಾಮದಲ್ಲಿ ಮಂಗಳವಾರ ನಡೆದ ಲೆವಿಸ್ಟಾ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದ್ವಿತೀಯ ಸ್ಥಾನ ಪಡೆದ ಕುಲ್ಲೇಟಿರ ತಂಡ
ಕ್ರೀಡಾಂಗಣದಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
ಸಮಾರೋಪ ಸಮಾರಂಭವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು
ಜಿಲ್ಲೆಯ ಜನರ ದೇಶಪ್ರೇಮ ಕ್ರೀಡಾಸ್ಫೂರ್ತಿ ಮಾದರಿಯಾಗಿದೆ. ಮುಂದಿನ ದಿನಗಳಲ್ಲೂ ಕ್ರೀಡಾಕೂಟಗಳಿಗೆ ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ಎಸ್‌ಎಲ್‌ಎನ್ ಗ್ರೂಪ್ ಸಂಪೂರ್ಣ ಸಹಕಾರ ನೀಡಲಿದೆ.
ವೆಂಕಟಾಚಲಂ ಸಾತಪ್ಪನ್, ಎಸ್‌ಎಲ್‌ಎನ್ ಗ್ರೂಪ್‌ನ ವ್ಯವಹಾರಿಕ ಮುಖ್ಯಸ್ಥ.
ಕೊಡವ ಹಾಕಿ ಅಕಾಡೆಮಿಯಿಂದ ನಡೆದ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ' ಯಶಸ್ವಿಯಾಗಿದೆ. ಹಾಕಿ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಅಕಾಡೆಮಿ ಮುಂದೆ ರೂಪಿಸಲಿದೆ.
ಪಾಂಡಂಡ ಕೆ.ಬೋಪಣ್ಣ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ.

ಆಯ್ಕೆಯಾಗದ ಕ್ರೀಡಾಪಟುಗಳು; ಬೇಸರ ಮಡಿಕೇರಿ: ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ತಂಡಗಳಿಗೆ ಕೊಡಗಿನವರು ಆಯ್ಕೆಯಾಗುತ್ತಿಲ್ಲ. ಈ ಕುರಿತು ಎಲ್ಲರೂ ಸಾಮೂಹಿಕ ಚಿಂತನೆ ನಡೆಸಬೇಕಾದ ಅಗತ್ಯ ಇದೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸಮಾರೋಪ ಸಮಾರಂಭದಲ್ಲಿ ಪ್ರತಿಪಾದಿಸಿದರು. ಹಿಂದೆ ದೊಡ್ಡ ಸಂಖ್ಯೆಯಲ್ಲಿ ಕೊಡವ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರುತ್ತಿದ್ದರು. ಆದರೆ ಇದು ರಾಜ್ಯಮಟ್ಟದ ತಂಡಕ್ಕೂ ಆಯ್ಕೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಇಂದು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾ ತಂಡಗಳಿಗೆ ಕ್ರೀಡಾಪಟುಗಳು ಆಯ್ಕೆಯಾಗುತ್ತಿಲ್ಲ. ಈ ಬಗ್ಗೆ ಎಲ್ಲಾ ಹಾಕಿ ಸಂಸ್ಥೆಗಳು ಸಾಮೂಹಿಕ ಚಿಂತನೆ ನಡೆಸುವ ಮೂಲಕ ಶಿಸ್ತುಬದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

‘ಒಂದು ಮಾಡುವ ಕೆಲಸ ಆರಂಭಗೊಳ್ಳಲಿ’ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ ‘ಒಲಂಪಿಯನ್‌ಗಳಿರುವ ಹಾಕಿ ಸಂಸ್ಥೆಯ 2 ಗುಂಪುಗಳನ್ನು ಒಂದು ಮಾಡುವ ಅಗತ್ಯವಿದೆ ಭಿನ್ನಾಭಿಪ್ರಾಯವಿಲ್ಲದೆ ಸದಸ್ಯತ್ವ ಸಿಗಬೇಕು. ಒಂದು ಮಾಡುವ ಕೆಲಸ ಕೊಡಗಿನಿಂದಲೇ ಆರಂಭಗೊಳ್ಳಲಿ ಶಾಸಕರು ಸಹಕರಿಸಲಿ. ಹಿರಿಯ ಆಟಗಾರರೊಂದಿಗೆ ಈ ಕುರಿತು ಈಗಾಗಲೇ ಚರ್ಚಿಸಿದ್ದೇನೆ’ ಎಂದರು. ವಿ.ಬಾಡಗದಲ್ಲಿ 11 ಎಕರೆ ಪ್ರದೇಶದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು ₹ 30 ಕೋಟಿ ಮಂಜೂರಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟರ್ಫ್ ಅಳವಡಿಕೆಗೆ ₹ 8 ಕೋಟಿ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

‘ಹಾಕಿ ಉತ್ಸವದಿಂದ ಒಗ್ಗಟ್ಟು ಸಾಧ್ಯ’ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ‘ಪಾಂಡಂಡ ಕುಟ್ಟಪ್ಪ ಅವರು ಆರಂಭಿಸಿದ ಕೊಡವ ಕೌಟುಂಬಿಕ ಹಾಕಿ ಉತ್ಸವ ಇಂದು ಕೊಡವ ಜನಾಂಗ ಒಗ್ಗೂಡಲು ಸಹಕಾರಿಯಾಗಿದೆ’ ಎಂದರು. ಎ.ಎಸ್.ಪೊನ್ನಣ್ಣ ಅವರು ಶಾಸಕರಾಗಿ ಜಮ್ಮಾ ಸಮಸ್ಯೆಗೆ ಪರಿಹಾರ ಸೂಚಿಸಿದ್ದು ಅವರು ಅಭಿನಂದನಾರ್ಹರು. ಪಕ್ಷ ಯಾವುದೇ ಇರಲಿ ಕೊಡಗಿನ ಅಭಿವೃದ್ಧಿ ಮುಖ್ಯ ಎಂದು ಹೇಳಿದರು.