ADVERTISEMENT

ಮಡಿಕೇರಿಯಲ್ಲಿ ದಶಮಂಟಪಗಳ ಶೋಭಾಯಾತ್ರೆ 

ಸಾಂಪ್ರದಾಯಿಕ ಆಚರಣೆ, ಪ್ರವಾಸಿಗರೂ ಇಳಿಮುಖ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 15:39 IST
Last Updated 19 ಅಕ್ಟೋಬರ್ 2018, 15:39 IST
   

ಮಡಿಕೇರಿ: ದಸರಾ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆಗೆ ವಿವಿಧೆಡೆಯಿಂದ ಬಂದಿದ್ದ ಪ್ರವಾಸಿಗರು ಸಾಕ್ಷಿಯಾದರು. ವಿದ್ಯುತ್‌ ಬೆಳಕಿನಲ್ಲಿ ಮಂಟಪಗಳು ಕಂಗೊಳಿಸಿದವು. ಪೌರಾಣಿಕ ಕಥಾ ಸಾರಾಂಶವುಳ್ಳ ಪ್ರದರ್ಶನವನ್ನು ಪ್ರವಾಸಿಗರು, ಸ್ಥಳೀಯರು ಕಣ್ತುಂಬಿಕೊಂಡರು.

ಶ್ರೀಪೇಟೆ ಶ್ರೀರಾಮಂದಿರ, ದೇಚೂರು ಶ್ರೀರಾಮ ಮಂದಿರ, ಶ್ರೀದಂಡಿನ ಮಾರಿಯಮ್ಮ, ಶ್ರೀಚೌಡೇಶ್ವರಿ, ಕೋಟೆ ಮಾರಿಯಮ್ಮ. ಶ್ರೀಕೋದಂಡ ರಾಮಮಂದಿರ, ಕರವಲೆ ಭಗವತಿ, ಕೋಟೆ ಗಣಪತಿ, ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಮಂಟಪಗಳ ಕಲಾಕೃತಿಗಳು ವಿದ್ಯುತ್‌ ಬೆಳಕಿನ ನಡುವೆ ನೀಡಿದ ಪ್ರದರ್ಶನ ಆಕರ್ಷಕವಾಗಿತ್ತು. ‘ಗಣಪತಿ ಮತ್ತು ಪರಶುರಾಮ ಕಾಳಗ’, ‘ಶಿವ ಪುರಾಣ...’, ‘ನಂದಿಯಿಂದ ಶಿವ ದರ್ಶನ...’, ‘ಪಂಚಮುಖಿ ಆಂಜನೇಯ ದರ್ಶನ...’ ಸೇರಿದಂತೆ ಹಲವು ಪೌರಾಣಿಕ ಕಥೆಗಳನ್ನು ಪ್ರಸ್ತುತ ಪಡಿಸಲಾಯಿತು.

ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಮಡಿಕೇರಿಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಿಸಲಾಯಿತು. ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಒಂದು ದಿನಕ್ಕೆ ಸೀಮಿತ ಮಾಡಲಾಗಿತ್ತು.

ADVERTISEMENT

ಮೈಸೂರಿನಲ್ಲಿ ಜಂಬೂ ಸವಾರಿ ಮುಕ್ತಾಯವಾದ ಕೂಡಲೇ ಮಡಿಕೇರಿಯಲ್ಲಿ ಶೋಭಾಯಾತ್ರೆ ರಂಗು ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ವೈಭವ ಕಳೆದುಕೊಂಡಿತ್ತು.

‘ನಾಡಹಬ್ಬ ಕೈಬಿಡಬಾರದೆಂದು ಸಾಂಪ್ರದಾಯಿಕವಾಗಿ ನಡೆಸಲಾಯಿತು’ ಎಂದು ಶ್ರೀಪೇಟೆ ರಾಮಮಂದಿರದ ಪದಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.